ಮೈಸೂರು: ಪ್ರತಿ ಚುನಾವಣೆಯಲ್ಲಿ ಕೆಲ ಕಿರಿಕಿರಿಗಳನ್ನು ಕಂಡಿದ್ದ ನರಸಿಂಹರಾಜ ಕ್ಷೇತ್ರದಲ್ಲಿ ಈ ಬಾರಿ ಶಾಂತಿಯುತ ಮತದಾನ ಕಂಡಿತು.ಬೆಳಗ್ಗೆಯಿಂದಲೇ ಮತಗಟ್ಟೆಗೆ ಮತದಾರರು ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಪುರುಷರು ಹಾಗೂ ಮಹಿಳೆಯರನ್ನು ಪ್ರತ್ಯೇಕ ಸಾಲಿನಲ್ಲಿ ನಿಂತಿಸಿ ಮತದಾನಕ್ಕೆ ಅನುವು ಮಾಡಿಕೊಡಲಾಯಿತು. ಮಧ್ಯಾಹ್ನದ ವೇಳೆಯೂ ಮತಗಟ್ಟೆಗಳ ಮುಂದೆ ಜನರು ಸಾಲುಗಟ್ಟಿ ನಿಂತಿದ್ದು ಉದಯಗಿರಿ, ಶಾಂತಿನಗರ, ಗೌಸಿಯಾನಗರ, ಯರಗನಹಳ್ಳಿ ಮತಗಟ್ಟೆಗಳಲ್ಲಿ ಕಂಡುಬಂತು.
ಅತಿಸೂಕ್ಷ್ಮ ಮತಗಟ್ಟೆ ಎಂದು ಪರಿಗಣಿಸಿದ್ದ ಕ್ಯಾತಮಾರನಹಳ್ಳಿಯಲ್ಲಿ ಸಶಸ್ತ್ರ ಮೀಸಲು ಪಡೆ ಜತೆಗೆ ಅರೆಸೇನಾ ಪಡೆಯನ್ನು ನಿಯೋಜಿಸಲಾಗಿತ್ತು. ಮತಗಟ್ಟೆ ಬಳಿಯೇ ಮೂರು ಪಕ್ಷದ ಕಾರ್ಯಕರ್ತರು, ಏಜೆಂಟರು ಚೀಟಿಗಳನ್ನು ಬರೆದುಕೊಡುತ್ತಿದ್ದರಲ್ಲದೇ ತಮ್ಮ, ತಮ್ಮ ಪಕ್ಷದ ಪರವಾಗಿ ಅಂತಿಮ ಪ್ರಚಾರದ ಕಸರತ್ತು ನಡೆಸುತ್ತಿದ್ದದ್ದು ಕಂಡುಬಂತು.