ಕೋಲಾರ: ಸಂವಿಧಾನದಲ್ಲಿ ಪ್ರತಿಯೊಬ್ಬ ಪ್ರಜೆಗೂ ಜೀವಿಸುವ ಹಕ್ಕಿದ್ದು, ಖಿನ್ನತೆ, ಕೌಟುಂಬಿಕ ಕಲಹ, ಮದ್ಯವ್ಯಸನ, ಪ್ರೀತಿ ಪ್ರೇಮ ಹಾಗೂ ನಿರುದ್ಯೋಗ ಕಾರಣಗಳಿಂದ ಆತ್ಮಹತ್ಯೆಯಂತಹ ಆಲೋಚನೆ ಬರುತ್ತದೆ. ಆದರೆ ಆತ್ಮಹತ್ಯೆಯು ೩೦೯ ಕಲಂ ಅಡಿಯಲ್ಲಿ ಕಾನೂನು ಬಾಹಿರ ವಾಗಿದ್ದು, ಜೀವನದಲ್ಲಿ ಎದುರಾಗುವ ಯಾವುದೇ ಸಮಸ್ಯೆಗೆ ಅದು ಪರಿಹಾರವಲ್ಲ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಸುನಿಲ್ ಎಸ್.ಹೊಸಮನಿ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಸಮಾಜ ಪದವಿ ಪೂರ್ವ ಕಾಲೇಜು ಸಂಯುಕ್ತ ಆಶ್ರಯದಲ್ಲಿ ನಗರದ ಮಹಿಳಾ ಸಮಾಜ ಶಾಲೆಯ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಪ್ರತಿ ವರ್ಷ ಆತ್ಮಹತ್ಯೆಯಿಂದ ಪ್ರಪಂಚದಾದ್ಯಂತ ೮ ಲಕ್ಷ ಜನ ಜೀವ ಕಳೆದುಕೊಳ್ಳುತ್ತಿದ್ದಾರೆ. ಸಾವು ಸಮಸ್ಯೆಗೆ ಪರಿಹಾರ ಎಂದು ಪರಿಭಾವಿಸಿ ಸಾವಿಗೆ ಶರಣಾಗುವುದರಿಂದ ಅವಲಂಭಿತ ಕುಟುಂಬಗಳು ಬೀದಿಗೆ ಬೀಳುತ್ತವೆ. ಜೊತೆಗೆ ಜೀವನ ನಿರ್ವಹಣೆಯ ಸಂಕಷ್ಟಕ್ಕೂ ಸಿಲುಕುತ್ತಿವೆ ಎಂದು ವಿಷಾದಿಸಿದರು.
ಜಿಲ್ಲಾ ಮಾನಸಿಕ ಆರೋಗ್ಯ ಅಧಿಕಾರಿ ಡಾ.ಎನ್.ಸಿ.ನಾರಾಯಣಸ್ವಾಮಿ ಮಾತನಾಡಿ ದೇಶದಲ್ಲಿ ೪೦ ಸೆಕೆಂಡ್ಗೆ ಒಬ್ಬ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದು, ಪ್ರಪಂಚದಲ್ಲಿಯೇ ಐದನೇ ಸ್ಥಾನದಲ್ಲಿ ನಮ್ಮ ಭಾರತವಿದೆ. ಆತ್ಮಹತ್ಯೆ ಪ್ರಕರಣಗಳನ್ನು ತಡೆಗಟ್ಟಲು ಜನರ ಸಹಕಾರ ಅಗತ್ಯ ಎಂದು ತಿಳಿಸಿದರು.
ಈ ವರ್ಷದ ಘೋಷವಾಕ್ಯ ಕ್ರಿಯೆಯ ಮೂಲಕ ಭರವಸೆಯನ್ನು ಮೂಡಿಸುವುದು ಕುರಿತ ಕರಪತ್ರ ಬಿಡುಗಡೆ ಮಾಡಲಾಯಿತು.
ಹಿರಿಯ ವಕೀಲ ಕೆ.ಆರ್. ಧನರಾಜ್, ಮಹಿಳಾ ಸಮಾಜ ಸಮೂಹ ವಿದ್ಯಾಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ನವೀನಾ, ಕಾರ್ಯದರ್ಶಿ ನಂದನ, ಆರೋಗ್ಯ ಶಿಕ್ಷಣಾಧಿಕಾರಿ ಪ್ರೇಮಾ, ಮನಃಶಾಸ್ತ್ರಜ್ಞ ಡಾ.ಶ್ರೀನಾಥ್ ಇದ್ದರು.
ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ
ಕೋಲಾರದಲ್ಲಿ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಸುನಿಲ್ ಎಸ್.ಹೊಸಮನಿ ಉದ್ಘಾಟಿಸಿದರು. ಜಿಲ್ಲಾ ಮಾನಸಿಕ ಆರೋಗ್ಯ ಅಧಿಕಾರಿ ಡಾ.ಎನ್.ಸಿ.ನಾರಾಯಣಸ್ವಾಮಿ, ಹಿರಿಯ ವಕೀಲ ಕೆ.ಆರ್. ಧನರಾಜ್, ಮಹಿಳಾ ಸಮಾಜ ಸಮೂಹ ವಿದ್ಯಾಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ನವೀನಾ ಇತರರು ಇದ್ದರು.