ಗುಂಡ್ಲುಪೇಟೆ: ತೆರಕಣಾಂಬಿ ಗ್ರಾಮದ ಶ್ರೀ ಲಕ್ಷ್ಮೀ ವರದರಾಜಸ್ವಾಮಿ ದೇವಾಲಯದ 16ನೇ ವರ್ಷದ ದಿವ್ಯ ರಥೋತ್ಸವ ಫೆ.12ರಂದು ವಿಜೃಂಭಣೆಯಿಂದ ನೆರವೇರಲಿದೆ.

ತಾಲೂಕು ಸೇರಿದಂತೆ ನೆರೆಯ ತಮಿಳುನಾಡು ಹಾಗೂ ಕೇರಳದಲ್ಲಿಯೂ ಭಕ್ತರನ್ನು ಹೊಂದಿರುವ ಲಕ್ಷ್ಮೀ ವರದರಾಜಸ್ವಾಮಿ ರಥೋತ್ಸವದಿಂದ ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿದೆ. ದೇವಾಲಯ ಶುಚಿಗೊಳಿಸಿ ಸುಣ್ಣಬಣ್ಣ ಬಳಿದು ವಿಧ ವಿಧವಾದ ಹೂವುಗಳಿಂದ ಅಲಂಕರಿಸಲಾಗಿದೆ. ರಥದ ಮನೆಯಿಂದ ತೇರು ಹೊರ ತಂದು ಬಿದಿರಿನಿಂದ ಗೋಪುರ ನಿರ್ಮಾಣ ಮಾಡಲಾಗುತ್ತಿದೆ. ಪ್ರಮುಖ ಬೀದಿಗಳ ವಿದ್ಯುತ್ ದೀಪಾಲಂಕಾರ ಮಾಡಿ ಮೈಕ್ ಕಟ್ಟಲಾಗಿದ್ದು ದೇವಾಲಯದಲ್ಲಿ ನಡೆಯುವ ಪ್ರತಿ ಧಾರ್ಮಿಕ ಚಟುವಟಿಕೆಗಳನ್ನು ಧ್ವನಿವರ್ಧಕ ಮೂಲಕ ಬಿತ್ತರಿಸಲಾಗುತ್ತಿದೆ. ಫೆ.9 ರಿಂದ 15 ರವರೆಗೆ ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ಆಯೋಜಿಸಲಾಗಿದ್ದು ಇಡೀ ಗ್ರಾಮವೇ ಹಬ್ಬ ಆಚರಣೆಗೆ ಸಿದ್ದವಾಗಿದೆ.
ಪುರಾತನ ಶಿಲಾ ದೇವಾಲಯ: ಗ್ರಾಮದ ಅತ್ಯಂತ ಪುರಾತನ ಹಾಗೂ ಪ್ರಮುಖ ದೇವಾಲಯವಾದ ಇದನ್ನು ಎರಡು ಹಂತಗಳಲ್ಲಿ ನಿರ್ಮಾಣ ಮಾಡಲಾಗಿದೆ. ಗರ್ಭಗುಡಿ ಮತ್ತು ಸುಖನಾಸಿಗಳು ಹೊಯ್ಸಳರ ಕಾಲದಲ್ಲಿ, ನವರಂಗದ ವಿಸ್ತರಿಸಿದ ದಕ್ಷಿಣ ಭಾಗವೂ ಮೈಸೂರು ಅರಸ ಕೃಷ್ಣರಾಜ ಒಡೆಯರ ಕಾಲದಲ್ಲಿ ಲಕ್ಷ್ಮಣ ವಿಗ್ರಹ ಪ್ರತಿಷ್ಠಾಪಿಸಲಾಯಿತು. ಪಾತಾಳಾಂಕಣ ಮತ್ತು ಉತ್ತರದ ಗೋಡೆಗಳು ಪಾಳೇಗಾರರ ಆಳ್ವಿಕೆಯಲ್ಲಿ ಜೀರ್ಣೋದ್ಧಾರವಾಗಿವೆ ಎನ್ನಲಾಗುತ್ತಿದೆ. ಪೂರ್ವಾಭಿಮುಖವಾಗಿರುವ ಈ ದೇವಾಲಯ ಸಂಪೂರ್ಣ ಕಲ್ಲಿನಿಂದ ನಿರ್ಮಿಸಲಾಗಿದೆ. ಸುಮಾರು 4 ಗಜ ಉತ್ತರ ದಕ್ಷಿಣದ ವಿಸ್ತೀರ್ಣ ಹೊಂದಿದ್ದು ಮಹಾಮಂಟಪ ಉತ್ತರ ದಕ್ಷಿಣವಾಗಿ 5 ಮೀಟರ್ ಇದ್ದು ವಿಶಾಲವಾದ ಪ್ರಾಂಗಣವಿದೆ.
ಕ್ರಿ.ಶ.1303ರಲ್ಲಿ ತೆರಕಣಾಂಬಿಯನ್ನು ಆಳುತ್ತಿದ್ದ ಪದಿನಾಲ್ಕು ನಾಡರಸ ಪೆರುಮಾಳೆ ದಣ್ಣಾಯಕರ ಮಗ ಮಾಧವ ದಣ್ಣಾಯಕ ಶ್ರೀ ವರದರಾಜ ಸ್ವಾಮಿಯನ್ನು ಪ್ರತಿಷ್ಠಾಪಿಸಿ ಆ ದೇವರಿಗೆ ದೇವಾಲಯ ನಿರ್ಮಾಣ ಮಾಡಿರುವುದಾಗಿ ಉಲ್ಲೇಖವಿದೆ. ಮೈಸೂರು ಸಂಸ್ಥಾನದ ಒಡೆಯರಿಗೆ ಇದು ಮನೆದೇವರಾಗಿದೆ.
ಭವ್ಯ ಶಿಲಾಮೂರ್ತಿಗಳು: ಸುಮಾರು 6 ಅಡಿ ಎತ್ತರವಿರುವ ವರದರಾಜಸ್ವಾಮಿಯ ಭವ್ಯವಾದ ಶಿಲಾಮೂರ್ತಿ ಆಕರ್ಷಕವಾಗಿದೆ. ಪೀಠದ ಮೇಲಿರುವ ವರದರಾಜಸ್ವಾಮಿಯ ವಿಗ್ರಹ ವಿಷ್ಣುವಿನ ದಶಾವತಾರ ತೋರಿಸುವ ಕಮಾನು ಹೊಂದಿದೆ. ಶಂಖ, ಚಕ್ರ ಗಧಾಪಾಣಿಯಾಗಿ ಅಭಯಹಸ್ತದಿಂದ ಪೂರ್ವಾಭಿಮುಖನಾಗಿ ನಿಂತಿರುವ ಮೂರ್ತಿ ಗಂಭೀರ ಮುದ್ರೆಯಿಂದ ಕೂಡಿದೆ. ವರದರಾಜಸ್ವಾಮಿಯವರ ಬಲಭಾಗದಲ್ಲಿರುವ ಲಕ್ಷ್ಮೀದೇವಿಯ ವಿಗ್ರಹ ಅಷ್ಟೇ ಭವ್ಯವಾಗಿದ್ದು ಕಮಲದ ಹೂವಿನ ಮೇಲೆ ಕುಳಿತಿರುವ ಏಕೈಕ ಅಪರೂಪದ ಮೂರ್ತಿಯಾಗಿದೆ.
ದೇವಾಲಯದ ಆವರಣದಲ್ಲಿರುವ ಗರುಡ ಮೂರ್ತಿ ಭವ್ಯವಾಗಿದ್ದು ಇದನ್ನು ಸನ್ನಿಧಿಗರುಡನ್ ಎಂದು ಕರೆಯಲಾಗುತ್ತದೆ. ಪಕ್ಕದಲ್ಲಿಯೇ ವಿನಾಯಕರ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ದೇವಾಲಯ ಸುತ್ತಲೂ ಕಲ್ಲು ಹಾಗೂ ಚಪ್ಪಡಿಗಳಿಂದ ನಿರ್ಮಿಸಿದ ಮಂಟಪವಿದೆ. ಸುಮಾರು 30 ಅಡಿ ಎತ್ತರದ ಎರಡು ಮರದ ಬಾಗಿಲುಗಳನ್ನು ಹೊಂದಿದೆ. ದೇವಾಲಯದ ಎದುರು ಸುಮಾರು 60 ಅಡಿ ಎತ್ತರ ಏಕಶಿಲಾ ಗರುಡಗಂಬವಿದ್ದು ಇದರ ತಳಭಾಗದಲ್ಲಿ ಆಂಜನೇಯರ ಚಿತ್ರ ಕೆತ್ತನೆ ಮಾಡಲಾಗಿದೆ.
ಜೀರ್ಣೋದ್ಧಾರ ಹಾಗೂ ನೂತನ ರಥ ನಿರ್ಮಾಣ: ಸಂಪೂರ್ಣ ಶಿಥಿಲವಾಗಿದ್ದ ದೇವಾಲಯ 2000 ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥಸ್ವಾಮಿ ಟ್ರಸ್ಟ್ ನೆರವಿನಿಂದ ಜೀರ್ಣೋದ್ಧಾರಗೊಳಿಸಲಾಗಿದೆ. ಹಿಂದೆ ಇದ್ದ ರಥ ಸಂಪೂರ್ಣ ನಾಶವಾಗಿದ್ದರಿಂದ ಕಳೆದ 60 ವರ್ಷಗಳಿಂದ ರಥೋತ್ಸವ ನಿಂತು ಹೋಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರೆಲ್ಲ ಸೇರಿ 8 ಲಕ್ಷ ರೂ. ಚಂದಾ ಹಾಕಿ 2010ರಲ್ಲಿ ಹೊಸದಾಗಿ ರಥ ನಿರ್ಮಿಸಿದರು. ಅಂದಿನಿಂದ ಪ್ರತಿ ವರ್ಷವೂ ಮಾಘ ಮಾಸದ ಶುದ್ಧ ಪೂರ್ಣಿಮೆಯಂದು ದಿವ್ಯರಥೋತ್ಸವ ಆಚರಿಸುತ್ತಾ ಬಂದಿದ್ದಾರೆ. ಗ್ರಾಮದ ಎಲ್ಲ ಜನಾಂಗಗಳೂ ಒಟ್ಟಾಗಿ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ವರ್ಷವೂ ರಥೋತ್ಸವ ಮೆರುಗು ಪಡೆದುಕೊಳ್ಳುತ್ತಿದೆ.
ಕಲ್ಲಿನಿಂದ ನಿರ್ಮಿಸಿರುವ ಪುರಾತನ ದೇವಾಲಯದಲ್ಲಿ ವರದರಾಜಸ್ವಾಮಿ ಹಾಗೂ ಶ್ರೀ ಲಕ್ಷ್ಮಿ ಅಮ್ಮನವರ ಆಕರ್ಷಕ ಮೂರ್ತಿಗಳಿವೆ. ಕಮಲದ ಹೂವಿನ ಮೇಲೆ ಕುಳಿತಿರುವ ಅಮ್ಮನವರಿಗೆ ಪ್ರತಿ ಶುಕ್ರವಾರ ತುಪ್ಪದಿಂದ ದೀಪಹಚ್ಚಿ ಪ್ರಾರ್ಥನೆ ಸಲ್ಲಿಸಿದರೆ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆ ಭಕ್ತರಲ್ಲಿದೆ
ವರದರಾಜು ಪ್ರಧಾನ ಅರ್ಚಕರು, ಶ್ರೀ ಲಕ್ಷ್ಮೀ ವರದರಾಜಸ್ವಾಮಿ ದೇವಾಲಯ