ಚಾಮರಾಜನಗರ: ಶ್ರೀಮಂಟೇಸ್ವಾಮಿ ಪರಂಪರೆ ಕಾಯಕ ಸಮಾಜದ ಶಕ್ತಿಯಾಗಿದೆ ಎಂದು ಹರವೆ ಮಠದ ಶ್ರೀ ಸರ್ಪಭೂಷಣ ಸ್ವಾಮೀಜಿ ತಿಳಿಸಿದರು.

ನಗರದ ಕರಿನಂಜನಪುರ ಬಡಾವಣೆಯಲ್ಲಿ ಶ್ರೀಮಂಟೇಸ್ಚಾಮಿ ದೇವರಗುಡ್ಡರ ದೇವಸ್ಥಾನ ಸೇವಾ ಟ್ರಸ್ಟ್ ವತಿಯಿಂದ ಸೋಮವಾರ ಆಯೋಜಿಸಿದ್ದ ಶ್ರೀಮಂಟೇಸ್ವಾಮಿ ದೇವಸ್ಥಾನದ ಭೂಮಿಪೂಜೆ ಕಾರ್ಯದಲ್ಲಿ ಭಾಗವಹಿಸಿ ಮಾತನಾಡಿದರು.
ಶ್ರೀಮಂಟೇಸ್ವಾಮಿ ಕಾಯಕ ಪರಂಪರೆಯನ್ನು ಅಪ್ಪಿಕೊಂಡವರು. ಅವರ ಶಿಷ್ಯರಾದ ರಾಚಪ್ಪಾಜಿ, ಸಿದ್ದಪ್ಪಾಜಿ ಹಾಗೂ ಇನ್ನೂ ಮುಂತಾದವರು ಕಾಯಕ ಸಮಾಜದ ಅಬಿವೃದ್ಧಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು. ಅಂತಹ ಶರಣರ ಹೆಸರಿನಲ್ಲಿ ದೇವಸ್ಥಾನ ನಿರ್ಮಾಣ ಮಾಡಲು ಸಂಕಲ್ಪ ಮಾಡಿರುವುದು ಸಂತಸ ತಂದಿದೆ. ಸಮಾಜದ ಎಲ್ಲಾ ವರ್ಗದ ಜನರು ಒಗ್ಗಟ್ಟಿನಿಂದ ಕಾಯಕ ನಿಷ್ಟೆಯಲ್ಲಿ ತೊಡಗಬೇಕು ಎಂದರು. ಈ ವೇಳೆಯಲ್ಲಿ ಮಂಟೇಸ್ವಾಮಿ ದೇವಾಲಯಕ್ಕೆ ಸ್ಥಳ ದಾನ ಮಾಡಿದ ಶಿವಮಲ್ಲಪ್ಪ ಹಾಗೂ ಸುಬ್ರಹ್ಮಣ್ಯ ಅವರನ್ನು ಸನ್ಮಾನಿಸಲಾಯಿತು.
ಕೂಡ್ಲೂರು ಶ್ರೀಮಂಟೇಸ್ವಾಮಿ ದೇವಸ್ಥಾನದ ಆದಿ ಮಠದ ಸತ್ಯಪ್ಪ, ಜೆಎಸ್ಎಸ್ ನಿವೃತ್ತ ಅಧೀಕ್ಷಕ ಚಂದ್ರಶೇಖರ್, ನಗರಸಭಾ ಸದಸ್ಯ ಮನೋಜ್ಪಟೇಲ್, ಪ್ರೊ.ಮಲ್ಲೇಶಪ್ಪ, ಗೌಡಿಕೆ ಲಿಂಗಣ್ಣ, ಗೌಡಿಕೆ ಕುಮಾರಸ್ವಾಮಿ, ಟ್ರಸ್ಟ್ ನ ಗೌರವಾಧ್ಯಕ್ಷ ಕುಮಾರ್, ಅಧ್ಯಕ್ಷ ಕೆ.ವಿ. ನಾಗರಾಜು, ಷಡಕ್ಷರಸ್ಚಾಮೀಜಿ, ಕಾರ್ಯದರ್ಶಿ ಚಿನ್ನಸ್ವಾಮಿ, ಹಾಗೂ ಗ್ರಾಮಸ್ಥರು ಹಾಜರಿದ್ದರು.