ಅರಸೀಕೆರೆ ಗ್ರಾಮಾಂತರ: ತಾಲೂಕಿನ ಕಣಕಟ್ಟೆ ಹೋಬಳಿ ಮಾಡಾಳು ಗ್ರಾಮದ ಶ್ರೀ ಮೂಲಸ್ಥಾನ ಸ್ವರ್ಣ ಗೌರಮ್ಮ ದೇವಿ ದೇವಾಲಯದ ಆವರಣದಲ್ಲಿ ಹಾರನಹಳ್ಳಿ ಸುಕ್ಷೇತ್ರ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರ ನಿರ್ದೇಶನದಂತೆ ಮೇ 17ರಂದು ಲಿಂಗೈಕ್ಯ ಪರಮಪೂಜ್ಯ ಶಿವಲಿಂಗ ಸ್ವಾಮೀಜಿ ಅವರ 138ನೇ ಪುಣ್ಯ ಸಂಸ್ಮರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಅಂದು ಬೆಳಗ್ಗೆ ಬೆಳ್ಳಿ ಪಲ್ಲಕ್ಕಿಯಲ್ಲಿ ಶಿವಲಿಂಗ ಸ್ವಾಮೀಜಿಯವರ ಭಾವಚಿತ್ರ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಂಗಳ ಕರಡೆ ವಾದ್ಯದೊಂದಿಗೆ ಜರುಗಲಿದೆ. ಬೆಳಗ್ಗೆ 11 ಗಂಟೆಗೆ ದೇವಾಲಯದ ಆವರಣದಲ್ಲಿ ಆಯೋಜಿಸಿರುವ ವೇದಿಕೆಯಲ್ಲಿ ಕೋಡಿ ಮಠದ ಶ್ರೀಗಳ ಸಾನ್ನಿಧ್ಯದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಬೆಕ್ಕಿನ ಕಲ್ಮಠದ ಡಾ.ಮುರುಘಾ ಮಲ್ಲಿಕಾರ್ಜುನ ರಾಜೇಂದ್ರ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಸೇವಾ ಸಮಿತಿ ಅಧ್ಯಕ್ಷ ಎಂ.ಎಸ್.ನಟರಾಜ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಚಿತ್ರನಟ ದೊಡ್ಡಣ್ಣ ಧರ್ಮೋಪನ್ಯಾಸ ನೀಡುವರು. ನಿರಂಜನ ಪೀಠ ಮಾಡಾಳು ಮಠದ ಶ್ರೀ ರುದ್ರಮುನಿ ಸ್ವಾಮೀಜಿ, ಕೋಳಗುಂದ ಕೇದಿಗೆ ಮಠದ ಜಯಚಂದ್ರ ಶೇಖರಸ್ವಾಮೀಜಿ, ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ, ದೊಡ್ಡ ಮಠ ಕೆ,ಬಿದರೆ ಜ್ಞಾನ ಪ್ರಭುಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ ಮೂರು ಕಳಸ ಮಠ ಕಡೂರು, ಶಶಿ ಶೇಖರಸಿದ್ದ ಬಸವ ಸ್ವಾಮೀಜಿ ಬೂದಿಹಾಳ ವಿರಕ್ತಮಠ ಡಿ.ಎಂ.ಕುರ್ಕೆ, ಶ್ರೀ ತೇಜೇಶ್ವರ ಶಿವಾಚಾರ್ಯ ಸ್ವಾಮೀಜಿ ಕುಪ್ಪೂರ್ ಗದ್ದಿಗೆ ಮಠ, ಶ್ರೀ ಶಿವಪ್ರಕಾಶ್ ಶಿವಾಚಾರ್ಯ ಸ್ವಾಮೀಜಿ ಶ್ರೀ ಕರಿಸಿದ್ದೇಶ್ವರ ಮಠ ಹೊನ್ನವಳ್ಳಿ, ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ದೊಡ್ಡಗುಣಿ, ಜನಪ್ರತಿನಿಧಿಗಳು, ಸಾಹಿತಿಗಳು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಮಲ್ಲಿಕಾರ್ಜುನಪ್ಪ, ಬಸವರಾಜ್, ಎಂ.ಸಿ.ನಟರಾಜ್, ಮಾಡಾಳು ಶಿವಲಿಂಗಪ್ಪ, ಸೋಮಣ್ಣ ಉಪಸ್ಥಿತರಿದ್ದರು.