ಶಿವಮೊಗ್ಗ: ನಗರದಲ್ಲಿ ನೆರೆಯಿಂದ 5 ಸಾವಿರಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದ್ದು, ಪ್ರಾಥಮಿಕವಾಗಿ ಸುಮಾರು 150 ಕೋಟಿ ರೂ. ಹಾನಿ ಅಂದಾಜಿಸಲಾಗಿದೆ. ಮಂಗಳವಾರದೊಳಗೆ ಹಾನಿಯ ನಿಖರ ಮಾಹಿತಿ ದೊರೆಯಲಿದೆ ಎಂದು ಮಹಾನಗರ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್ ತಿಳಿಸಿದರು.</p><p>ಸೋಮವಾರ ರಾಜೀವ್ ಗಾಂಧಿ ಬಡಾವಣೆಗೆ ಭೇಟಿ ನೀಡಿದ್ದ ಅವರು, ಶಾಸಕ ಕೆ.ಎಸ್.ಈಶ್ವರಪ್ಪ ಅವರಿಗೆ ಮಾಹಿತಿ ನೀಡಿ, ಕಚ್ಚಾ ಮನೆಗಳು ಸಂಪೂರ್ಣ ಕುಸಿದಿವೆ. ಪಾಲಿಕೆ ವ್ಯಾಪ್ತಿಯ ಶೇ.60 ರಸ್ತೆಗಳು ಹಾನಿಗೀಡಾಗಿದ್ದು, ಸೇತುವೆ, ಮೋರಿಗಳು, ಕಟ್ಟಡಗಳು ಸೇರಿ ಸಾರ್ವಜನಿಕ ಆಸ್ತಿಪಾಸ್ತಿಗೆ ಅಪಾರ ನಷ್ಟ ಉಂಟಾಗಿದೆ. ನಗರದಲ್ಲಿ ನೆರೆ ಪರಿಸ್ಥಿತಿ ಸಂಪೂರ್ಣವಾಗಿ ಇಳಿದಿದ್ದು, ಪುನರ್ ವಸತಿ ಸೇರಿ ಪರಿಹಾರ ಕಾಮಗಾರಿಗಳನ್ನು ಚುರುಕುಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.</p><p>4 ದಿನದಲ್ಲಿ ನೆರೆಪೀಡಿತ ಪ್ರದೇಶಗಳಿಂದ 250 ಕುಟುಂಬಗಳ 1,675 ಜನರನ್ನು ರಕ್ಷಿಸಲಾಗಿದೆ. ನಗರದಲ್ಲಿ ತೆರೆಯಲಾಗಿರುವ 15 ಪರಿಹಾರ ಕೇಂದ್ರಗಳಲ್ಲಿ 2,500 ಮಂದಿ ಸಂತ್ರಸ್ತರು ಆಶ್ರಯ ಪಡೆದಿದ್ದು, ಅವರಿಗೆ ಬಿಸಿಯೂಟ, ಬಟ್ಟೆ, ಚಪ್ಪಲ್, ಸ್ಯಾನಿಟರಿ ಪ್ಯಾಡ್ಗಳು ಸೇರಿ ಅಗತ್ಯ ವಸ್ತುಗಳನ್ನು ಒದಗಿಸಲಾಗಿದೆ. 7ರಿಂದ 10 ದಿನ ನೆರೆ ಪರಿಹಾರ ಕೇಂದ್ರಗಳು ಮುಂದುವರಿಯುವ ಸಾಧ್ಯತೆಯಿದ್ದು, ಈ ಕೇಂದ್ರಗಳಲ್ಲಿ ಇನ್ನಷ್ಟು ಉತ್ತಮ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಮಕ್ಕಳಿಗೆ ಆಟವಾಡುವ ಸಾಮಗ್ರಿಗಳು, ಪೇಪರ್, ಟಿವಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಅವರು ಹೇಳಿದರು.
ವ್ಯವಸ್ಥಿತ ಪರಿಹಾರ ಕಾರ್ಯ: ಪರಿಹಾರ ಹಾಗೂ ಪುನರ್ವಸತಿ ಕಾರ್ಯ ಅತ್ಯಂತ ಸವಾಲಿನಿಂದ ಕೂಡಿದ್ದು, ವ್ಯವಸ್ಥಿತವಾಗಿ ಪರಿಹಾರ ಕಾರ್ಯ ಕೈಗೊಳ್ಳಲು 10 ನೋಡಲ್ ಅಧಿಕಾರಿಗಳ ನೇತೃತ್ವದಲ್ಲಿ ತಂಡಗಳನ್ನು ರಚಿಸಲಾಗಿದೆ. ಪರಿಹಾರ ಕೇಂದ್ರ, ಆರೋಗ್ಯ ಮತ್ತು ಸ್ವಚ್ಛತೆ, ನೀರು ಪೂರೈಕೆ ಮತ್ತು ಪರೀಕ್ಷೆ, ಪರಿಹಾರ ವರದಿಗಳು, ಕೌಶಲ್ಯ ತರಬೇತಿ, ನಾಶಗೊಂಡಿರುವ ದಾಖಲೆಗಳನ್ನು ಮತ್ತೆ ಸಿದ್ಧಪಡಿಸುವುದು, ಪುನರ್ವಸತಿ ಕಾರ್ಯ ಸೇರಿ ಹಲವು ಕ್ಷೇತ್ರಗಳನ್ನು ಗುರುತಿಸಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ತಿಳಿಸಿದರು.
ಪಾಲಿಕೆ ಕಚೇರಿಯಲ್ಲಿ ಸ್ವೀಕಾರ ಕೇಂದ್ರ: ಪರಿಹಾರ ಕೇಂದ್ರಗಳಲ್ಲಿ ನೆಲೆಸಿರುವ ಸಂತ್ರಸ್ತರಲ್ಲಿ ಬಹುತೇಕ ಮಂದಿ ಎಲ್ಲವನ್ನೂ ಕಳೆದುಕೊಂಡಿದ್ದು, ಅವರಿಗೆ ಮಾನಸಿಕವಾಗಿ ಧೈರ್ಯ ತುಂಬಲು ಕೌನ್ಸೆಲಿಂಗ್ ಮಾಡಲಾಗುವುದು. ಇದಕ್ಕಾಗಿ ಎಲ್ಲ ಪರಿಹಾರ ಕೇಂದ್ರಗಳಲ್ಲಿ ತಜ್ಞರನ್ನು ನಿಯೋಜಿಸಲಾಗುವುದು ಎಂದು ಚಾರುಲತಾ ಸೋಮಲ್ ಹೇಳಿದರು. ಸಂತ್ರಸ್ತರ ನೆರವಿಗೆ ಸಾಧನ ಸಾಮಗ್ರಿಗಳನ್ನು ನೀಡುವಂತೆ ಮನವಿ ಮಾಡಲಾಗಿದ್ದು, ಮಹಾನಗರ ಪಾಲಿಕೆ ಕಚೇರಿಯಲ್ಲಿ ಸ್ವೀಕಾರ ಕೇಂದ್ರ ತೆರೆಯಲಾಗಿದೆ. ಈಗಾಗಲೇ ಹಲವು ಮಂದಿ ನೆರವು ಒದಗಿಸುತ್ತಿದ್ದು, ಇನ್ನಷ್ಟು ನೆರವಿನ ಅಗತ್ಯವಿದೆ ಎಂದರು.</p>