ಚಿಕ್ಕೋಡಿ: ಶಿಕ್ಷಣದಿಂದ ಪ್ರಬುದ್ಧ ಸಮಾಜ ನಿರ್ಮಾಣ ಸಾಧ್ಯ. ಆ ನಿಟ್ಟಿನಲ್ಲಿ ಚಿಕ್ಕೋಡಿ ಪಟ್ಟಣದಲ್ಲೂ ಕೇಂದ್ರೀಯ ವಿದ್ಯಾಲಯ ಆರಂಭವಾಗಿರುವುದು ಸಂತಸ ತಂದಿದೆ ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು. ಪಟ್ಟಣದ ಹೊರವಲಯದಲ್ಲಿ ನಿರ್ಮಾಣವಾಗಿರುವ ಕೇಂದ್ರೀಯ ವಿದ್ಯಾಲಯದ ಸುಸಜ್ಜಿತ ಕಟ್ಟಡವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲ ಮಕ್ಕಳು ಶಿಕ್ಷಣ ಪಡೆಯಬೇಕು. ಯಾರೂ ಶಿಕ್ಷಣದಿಂದ ವಂಚಿತರಾಗಬಾರದು ಎಂಬುದು ನಮ್ಮ ಉದ್ದೇಶ. ಆ ನಿಟ್ಟಿನಲ್ಲಿ ಇಂದು ನೂತನ ಜ್ಞಾನದೇಗುಲ ಉದ್ಘಾಟಿಸಿದ್ದು, ವಿದ್ಯಾರ್ಥಿಗಳ ಪಾಲಿಗೆ ದಾರಿದೀಪವಾಗಲಿ ಎಂದರು.
ಶಾಸಕ ಗಣೇಶ ಹುಕ್ಕೇರಿ ಮಾತನಾಡಿ, ಜಿಲ್ಲಾ ಸ್ಥಾನಮಾನ ಹೊಂದಿರುವ ಚಿಕ್ಕೋಡಿ ಪಟ್ಟಣದಲ್ಲಿ ಹೈಟೆಕ್ ಕೇಂದ್ರೀಯ ವಿದ್ಯಾಲಯ ನಿರ್ಮಾಣವಾಗಿರುವುದು ಗಡಿಭಾಗದ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಿದೆ ಎಂದು ಹೇಳಿದರು. 18 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಕೇಂದ್ರೀಯ ವಿದ್ಯಾಲಯ ಕಟ್ಡಡವನ್ನು ಅಂದಿನ ಸಂಸದರಾಗಿದ್ದ ಪ್ರಕಾಶ ಹುಕ್ಕೇರಿ ಅವರ ವಿಶೇಷ ಪ್ರಯತ್ನದಿಂದ ಚಿಕ್ಕೋಡಿ ಭಾಗದಲ್ಲಿ ಎರಡು ಕೇಂದ್ರೀಯ ವಿದ್ಯಾಲಯಗಳು ಮಂಜೂರಾಗಿವೆ. ಈಗಾಗಲೇ ಚಿಕ್ಕೋಡಿ ಪಟ್ಟಣದಲ್ಲಿ ಹೈಟಿಕ್ ಕಟ್ಟಡ ನಿರ್ಮಾಣ ಮಾಡಲಾಗಿದೆ. ಸದಲಗಾ ಪಟ್ಟಣಕ್ಕೂ ವಿದ್ಯಾಲಯ ಮಂಜೂರಾಗಿದೆ ಎಂದರು. ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ, ತಹಸೀಲ್ದಾರ್ ಪ್ರಮೀಳಾ ದೇಶಪಾಂಡೆ, ಪುರಸಭೆ ಅಧ್ಯಕ್ಷ ಪ್ರವೀಣ ಕಾಂಬಳೆ, ಉಪಾಧ್ಯಕ್ಷ ಸಂಜಯ ಕವಟಗಿಮಠ, ಸದಸ್ಯರಾದ ಸಾಬೀರ್ ಜಮಾದಾರ, ಗುಲಾಬ ಬಾಗವಾನ, ನಾಗರಾಜ ಮೇದಾರ, ವಿಶ್ವನಾಥ ಕಾಮಗೌಡ, ರೋಟರಿ ಕ್ಲಬ್ ಅಧ್ಯಕ್ಷ ರಾಜ್ ಜಾಧವ, ನರೇಂದ್ರ ನೇರ್ಲೆಕರ, ರಾಮಾ ಮಾನೆ, ಫಿರೋಜ್ ಕಲಾವಂತ, ಬಾಬು ಸಮ್ಮತಶೆಟ್ಟಿ ಇತರರು ಇದ್ದರು.