ಸೊರಬ: ಬದಲಾದ ಆಹಾರ ಪದ್ಧತಿಯಿಂದ ಅನಾರೋಗ್ಯ ಕಾಣಿಸಿಕೊಳ್ಳುತ್ತಿದೆ. ಎಲ್ಲ ಸಂಪತ್ತಿಗಿಂತ ಆರೋಗ್ಯ ಸಂಪತ್ತು ಮುಖ್ಯ ಎನ್ನುವುದನ್ನು ಅರಿತುಕೊಳ್ಳಬೇಕು ಎಂದು ಜಡೆ ಹಿರೇಮಠದ ಶ್ರೀ ಘನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಚಾಮರಾಜಪೇಟೆಯ ಕಾನುಕೇರಿ ಮಠದಲ್ಲಿ ಭಾನುವಾರ ಸದ್ಗುರು ಸೇವಾ ಟ್ರಸ್ಟ್, ತಾಲೂಕು ವೀರಶೈವ ಲಿಂಗಾಯತ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿ ಟ್ರಸ್ಟ್, ವೀರಶೈವ ಸಮಾಜ ಸಮಿತಿಯಿಂದ ಬಸವ ಜಯಂತಿ ಪ್ರಯುಕ್ತ ಆಯೋಜಿಸಿದ್ದ ಅಮಾವಾಸ್ಯೆ ಪೂಜೆ, 130ನೇ ಮಾಸಿಕ ಶಿವಾನುಭವ ಕಾರ್ಯಕ್ರಮ, ಉಚಿತ ಆಸ್ತಮಾ ಹಾಗೂ ಶ್ವಾಸಕೋಶ ತಪಾಸಣೆ, ಎಲುಬು ಹಾಗೂ ಕೀಲು ತಪಾಸಣೆ ಶಿಬಿರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಮನುಷ್ಯ ಜೀವನದಲ್ಲಿ ಲೌಕಿಕ ಆಡಂಬರದ ಆಸ್ತಿ, ಚಿನ್ನ, ಬೆಳ್ಳಿ ಆಭರಣ ಸಂಪಾದಿಸಬಹುದು. ಆದರೆ ಭಗವಂತ ನೀಡಿದ ಶರೀರ ಎಂಬ ಸಂಪತ್ತು ಸಂರಕ್ಷಣೆ ಮಾಡಿಕೊಳ್ಳದಿದ್ದರೆ ಜೀವನ ನಶ್ವರವಾಗುತ್ತದೆ. ಎಲ್ಲ ಸಂಪತ್ತಿಗಿಂತ ಆರೋಗ್ಯ ಸಂಪತ್ತು ಶ್ರೇಷ್ಠವಾಗಿದೆ. ನಿತ್ಯ ಬದುಕಿನಲ್ಲಿ ಯೋಗ, ವ್ಯಾಯಾಮ, ವಾಯುವಿಹಾರ, ಪ್ರಾಣಾಯಾಮ ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.
ತಾಲೂಕು ವೀರಶೈವ ಲಿಂಗಾಯತ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಅಶೋಕ್ ನಾಯಕ್ ಅಂಡಿಗೆ ಮಾತನಾಡಿ, ಜನರ ಆರೋಗ್ಯ ದೃಷ್ಟಿಯಿಂದ ಇಂತಹ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ. ಮಾನಸಿಕ ಆರೋಗ್ಯ ಕುರಿತು ಶಿಬಿರ ಕಾರ್ಯಕ್ರಮ ಹಮ್ಮಿಕೊಳ್ಳುವ ಆಲೋಚನೆ ಇದೆ ಎಂದರು.
ರೋಗ ಬಾರದಂತೆ ಯಾವ ರೀತಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂಬ ಬಗ್ಗೆ ವೈದ್ಯ ಡಾ. ಅಭಿಷೇಕ್ ನುಚ್ಚಿನ್, ಡಾ. ಬಿ.ಸುರೇಶ್ ಮಾಹಿತಿ ನೀಡಿದರು. ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಗುರುಕುಮಾರ್ ಪಾಟೀಲ್, ಟೌನ್ ವೀರಶೈವ ಸಮಾಜದ ಅಧ್ಯಕ್ಷ ಎಂ.ಆರ್.ವಿಶ್ವನಾಥ್, ಕಾರ್ಯದರ್ಶಿ ಗಂಗಾಧರ, ಚಂದ್ರಶೇಖರ ನಿಜಗುಣ, ಉದ್ಯಮಿ ನಾಗರಾಜ್ ಗುತ್ತಿ, ಸಿ.ಪಿ.ಈರೇಶ ಗೌಡ, ಮಂಜಣ್ಣ, ಲಿಂಗರಾಜ್ ದೂಪದಮಠ, ಶಿಕ್ಷಕ ಮಾಲತೇಶ್, ಗೌತಮಿ, ಚಂದನಾ, ರೇಣುಕಮ್ಮ ಗೌಳಿ ಇತರರಿದ್ದರು.

ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಬೇಕು. ಧರ್ಮ ಸಾಧನೆಗೆ ಶರೀರವೇ ಮುಖ್ಯ ಮಾಧ್ಯಮ. ಆತ್ಮ, ಮನಸ್ಸು, ಆಲೋಚನೆಗಳು ಉತ್ತಮ ಚಿಂತನೆಗಳಿಂದ ಕೂಡಿರಬೇಕು. ಆಗ ಶರೀರ ಶುದ್ಧಿಯಾಗಿರುತ್ತವೆ. ಮನಸ್ಸಿನ ಆರೋಗ್ಯವು ಉತ್ತಮ ಚಿಂತನೆಯಿಂದ ಇರಬೇಕು. ಚಿಂತೆಯಿಂದ ದೂರವಿರಬೇಕು.
ಶ್ರೀ ಘನಬಸವ ಅಮರೇಶ್ವರ ಶಿವಾಚಾರ್ಯರು, ಜಡೆ ಹಿರೇಮಠ