ಸಂಡೂರು: ನಿಜಶರಣ ಅಂಬಿಗರ ಚೌಡಯ್ಯ ವಚನಗಳು ಮತ್ತು ನೇರ ಹಾಗೂ ನಿಷ್ಠುರ ನಡೆಯಿಂದ ಖ್ಯಾತಿ ಗಳಿಸಿದ್ದರು ಎಂದು ತಹಸೀಲ್ದಾರ್ ಅನಿಲ್ ಕುಮಾರ್ ಹೇಳಿದರು.
ತಾಲೂಕು ಕಚೇರಿಯಲ್ಲಿ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು. ಬಸವಣ್ಣ ಅವರ ಅನುಯಾಯಿಯಾಗಿದ್ದ ಅಂಬಿಗರ ಚೌಡಯ್ಯ ಮೂಲ ವೃತ್ತಿ ಮಾಡುತ್ತಲೇ ಕಾಯಕ ದಾಸೋಹ ಸೇವೆ ಅನುಸರಿಸಿದರು ಎಂದರು.
ಸಮಾಜದ ತಾಲೂಕು ಅಧ್ಯಕ್ಷ ಆರ್.ರಾಘವೇಂದ್ರ ಮಾತನಾಡಿ, ಎಲ್ಲರ ಸಹಕಾರವಿದ್ದರೆ ಮಾತ್ರ ಏನನ್ನಾದರೂ ಸಾಧಿಸಲು ಸಾಧ್ಯ. ಸಮಾಜದ 40 ಗುಂಟೆ ಜಾಗವಿದ್ದು, ಅದರಲ್ಲಿ ಸಮುದಾಯ ಭವನ ನಿರ್ಮಾಣ ಆಗಬೇಕು ಎಂಬುದು ನಮ್ಮೆಲ್ಲರ ಬಯಕೆಯಾಗಿದೆ. ಈ ಹಿನ್ನೆಲೆಯಲ್ಲಿ ಸಂಸದ ಈ.ತುಕಾರಾಮ್ ಹಾಗೂ ಶಾಸಕಿ ಅನ್ನಪೂರ್ಣ ತುಕಾರಾಮ್ ಅವರಿಗೆ ಮನವಿ ಮಾಡಿರುವುದಾಗಿ ತಿಳಿಸಿದರು.
ಬಿ.ಬಸವರಾಜ ಉಪನ್ಯಾಸ ನೀಡಿದರು. ಸಮಾಜದ ಉಪಾಧ್ಯಕ್ಷ ನಾಗರಾಜ, ಕಾರ್ಯದರ್ಶಿ ಸಂತೋಷ್, ಖಜಾಂಚಿ ಶಿವಕುಮಾರ್, ಪ್ರಮುಖರಾದ ಹುಲುಗಪ್ಪ, ಎ.ಗಣೇಶ, ಪರಶುರಾಮ, ಪೂರ್ಣಿಮಾ, ವಿನೋದಮ್ಮ, ಶಾರದಮ್ಮ, ನೀಲಮ್ಮ ಇದ್ದರು.