ಶೃಂಗೇರಿ: ಹಿರಿಯರು ನೀಡಿದ ಮೌಲ್ಯಗಳನ್ನು ನಾವು ಗೌರವಿಸಿ ಅದನ್ನು ಆಚರಣೆಗೆ ತರಬೇಕು. ವಿಚಾರಗಳನ್ನು ಆಚರಣೆಗೆ ತಂದಾಗ ಮಾತ್ರ ಸಮಾಜದಲ್ಲಿ ವಿಶಾಲ ದೃಷ್ಟಿ ಬೆಳೆಯುತ್ತದೆ ಎಂದು ಹಿರಿಯಡಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಜಯಪ್ರಕಾಶ್ ಶೆಟ್ಟಿ ಹೇಳಿದರು.
ಶೃಂಗೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಶನಿವಾರ ಏರ್ಪಡಿಸಿದ್ದ ವಾರ್ಷಿಕ ಚಟುವಟಿಕೆಯ ಸಮಾರೋಪದಲ್ಲಿ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿ ಅತ್ಯಂತ ಪ್ರಾಚೀನ. ನಾವು ಮಾಡುವ ಕಾರ್ಯದಲ್ಲಿ ಶ್ರದ್ಧೆ ಇರಬೇಕು. ನಮಗೆ ನಾವೇ ಮಾದರಿಯಾಗಬೇಕು. ಪ್ರಕೃತಿ ನಮಗೆ ಅಪಾರ ಕೊಡುಗೆ ನೀಡಿದೆ. ಯುವಪೀಳಿಗೆ ಹಿಂಸಾತ್ಮಕ ಚಟುವಟಿಕೆಯಿಂದ ದೂರವಿದ್ದು ಕ್ರಿಯಾತ್ಮಕ ಬದುಕನ್ನು ತಮ್ಮದಾಗಿಸಿ ಜ್ಞಾನರ್ಜನೆ ಮಾಡಿಕೊಳ್ಳಬೇಕು. ಆಧುನಿಕತೆಯ ವ್ಯಾಮೋಹದಿಂದ ಹೊರಬಂದು ಗ್ರಾಮೀಣ ಬದುಕನ್ನು ಪ್ರೀತಿಸಬೇಕು ಎಂದರು.
ಕಾಲೇಜಿನ ಅಭಿವೃದ್ಧಿ ಸಮಿತಿ ಅಧ್ಯಕ್ಷ ತ್ರಿಮೂರ್ತಿ ಮಾತನಾಡಿ, ಶಿಕ್ಷಣ ಎಂದರೆ ವಿಷಯಗಳ ಅಧ್ಯಯನ. ಭಗವಂತ ಸೃಷ್ಠಿಸಿದ ಜೀವಿಗಳಲ್ಲಿ ಮಾನವ ಅತಿ ಶ್ರೇಷ್ಠ. ಸಮಾಜದಲ್ಲಿ ಗುರುಗಳಿಗೆ ವಿಶೇಷ ಸ್ಥಾನವಿದೆ. ವಿದ್ಯಾರ್ಥಿಗಳು ಜೀವನದಲ್ಲಿ ಶ್ರೇಷ್ಠ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಯುವಶಕ್ತಿ ದೇಶದ ಸಂಸ್ಕಾರವನ್ನು ಉಳಿಸಿ ದೇಶಭಕ್ತಿ ಮೆರೆಯಬೇಕು ಎಂದರು.
ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾಲೇಜಿನ ಅಭಿವೃದ್ಧಿ ಸಮಿತಿ ಸದಸ್ಯರಾದ ಪ್ರದೀಪ್ ಯಡದಾಳು, ರಾಮಣ್ಣ, ಸಾಂಸ್ಕೃತಿಕ ವೇದಿಕೆ ಮುಖ್ಯಸ್ಥೆ ಆಶಾ, ಪ್ರಾಧ್ಯಾಪಕ ರಾಘವೇಂದ್ರ ರೆಡ್ಡಿ, ಸರಸ್ವತಿ, ಚೇತನ್, ಅಬೂಬಕರ್, ರವಿಶಂಕರ್, ಶಿವಮೂರ್ತಿ, ಮೇಘಾನಂದ್ ಇದ್ದರು.
