ರಾಣೆಬೆನ್ನೂರ: ರಾಜ್ಯದ ಎಲ್ಲ ಅನುದಾನಿತ ಪದವಿ ಕಾಲೇಜ್ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ನಗರದ ಹಲಗೇರಿ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರ ಎಲ್ಲ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಿಸುವುದಾಗಿ ಹೇಳಿ ಇದೀಗ ಸರ್ಕಾರಿ ಪದವಿ ವಿದ್ಯಾರ್ಥಿಗಳಿಗೆ ಮಾತ್ರ ನೀಡುವ ಮೂಲಕ ತಾರತಮ್ಯ ಮಾಡಿದೆ ಎಂದು ಆರೋಪಿಸಿ ರಾಜ್ಯ ಸರ್ಕಾರದ ವಿರುದ್ಧ ಘೊಷಣೆ ಕೂಗಿದರು.
ಬಡ ವಿದ್ಯಾರ್ಥಿಗಳು ಎಲ್ಲ ಅನುದಾನಿತ ಕಾಲೇಜ್ನಲ್ಲೂ ಇದ್ದಾರೆ. ಇಂಥ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ಖರೀದಿಸುವ ಶಕ್ತಿ ಇರುವುದಿಲ್ಲ. ಆದ್ದರಿಂದ ಕೂಡಲೇ ಸೂಕ್ತ ಕ್ರಮ ಕೈಗೊಂಡು ಎಲ್ಲ ಅನುದಾನಿತ ಪದವಿ ಕಾಲೇಜ್ ವಿದ್ಯಾರ್ಥಿಗಳಿಗೂ ಲ್ಯಾಪ್ಟಾಪ್ ವಿತರಿಸಬೇಕು ಎಂದು ತಹಸೀಲ್ದಾರ್ ಬಸವನಗೌಡ ಕೋಟೂರು ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ತಾಲೂಕು ಸಂಚಾಲಕ ರಾಘವೇಂದ್ರ ಪಿ., ಶಿವು ಪಾಟೀಲ, ಮಂಜುನಾಥ ಕೊಳ್ಳೇರ, ಸೂರಜ್ ಐರಣಿ, ಬಸವರಾಜ ಎಂ., ನಯನಾ ಗಿರಡ್ಡಿ, ದುಂಡೇಶ, ಪಲ್ಲವಿ, ಲಕ್ಷ್ಮೀ ಗೌಡ್ರ, ಜಯಶ್ರೀ ಐರಣಿ, ರಾಜೇಶ್ವರಿ ಹಾಗೂ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.