More

    ರೈಲ್ವೆ ಖಾಸಗೀಕರಣ ಪ್ರಕ್ರಿಯೆ ಕೈ ಬಿಡಿ

    ಮೈಸೂರು: ರೈಲ್ವೆಯನ್ನು ಖಾಸಗೀಕರಣ ಮಾಡುವ ಪ್ರಕ್ರಿಯೆ ಕೈ ಬಿಡುವಂತೆ ಒತ್ತಾಯಿಸಿ ನೈರುತ್ಯ ರೈಲ್ವೆಯ ಮಜ್ದೂರ್ ಯೂನಿಯನ್ ಮೈಸೂರು ವಿಭಾಗದಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

    ನಗರದ ನೈರುತ್ಯ ರೈಲ್ವೆಯ ವಿಭಾಗೀಯ ಕಚೇರಿ ಎದುರು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ರೈಲ್ವೆ ಸಚಿವಾಲಯದ ಈ ನಡೆಗಳು ಕಾರ್ಮಿಕ ವಿರೋಧಿ ಮಾತ್ರವಲ್ಲ, ಜನ ವಿರೋಧಿಯೂ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಉತ್ಪಾದನಾ ಘಟಕ, ವರ್ಕ್‌ಶಾಪ್‌ಗಳನ್ನು 100 ದಿನಗಳ ಕಾರ್ಯ ಯೋಜನೆಯಡಿ ಇಂಡಿಯನ್ ರೈಲ್ವೆ ರೋಲಿಂಗ್ ಸ್ಟಾಕ್ ಕಂಪನಿಗೆ ಹಸ್ತಾಂತರಿಸುವ ಪ್ರಸ್ತಾಪದಿಂದ ಹಿಂದೆ ಸರಿಯಬೇಕು. ರೈಲ್ವೆ ಸಚಿವಾಲಯ ಈಗಾಗಲೇ ದೇಶದ ವಿವಿಧ ಭಾಗಗಳಲ್ಲಿ ಉತ್ಪಾದನಾ ಘಟಕಗಳನ್ನು ಖಾಸಗೀಕರಣಗೊಳಿಸಲು ಯೋಜನೆ ರೂಪಿಸಿದೆ. ಕೆಲ ಮುಖ್ಯ ರೈಲುಮಾರ್ಗಗಳನ್ನು ಖಾಸಗಿ ಆಪರೇಟರ್‌ಗಳಿಗೆ ವಹಿಸುವ ಪ್ರಸ್ತಾಪವನ್ನು ಈ ಕೂಡಲೇ ಕೈಬಿಡಬೇಕು ಎಂದು ಒತ್ತಾಯಿಸಿದರು.

    ಯೂನಿಯನ್ ವಿಭಾಗೀಯ ಕಾರ್ಯದರ್ಶಿ ಪಿ.ಶಿವಪ್ರಕಾಶ್ ಮಾತನಾಡಿ, ಹಲವು ದೇಶಗಳಲ್ಲಿ ರೈಲ್ವೆಯನ್ನು ಖಾಸಗೀಕರಣಗೊಳಿಸಿದ ಪರಿಣಾಮ ನಷ್ಟ ಉಂಟಾಗಿ ಮತ್ತೆ ಸರ್ಕಾರ ತನ್ನ ಅಧೀನಕ್ಕೆ ತೆಗೆದುಕೊಂಡ ಉದಾಹರಣೆಗಳಿವೆ. ಇದನ್ನು ಕೇಂದ್ರ ಸರ್ಕಾರ ಗಮನದಲ್ಲಿಟ್ಟುಕೊಂಡು ಖಾಸಗೀಕರಣದ ನಿಲುವು ಕೈಬಿಡಬೇಕು ಎಂದರು.

    ಯೂನಿಯನ್ ವಿಭಾಗೀಯ ಅಧ್ಯಕ್ಷ ಎಸ್.ಸೋಮಶೇಖರ್, ವಲಯ ಕಾರ್ಯಾಧ್ಯಕ್ಷ ಆರ್ತೂರ್ ಫರ್ನಾಂಡಿಸ್, ವಿಭಾಗೀಯ ಖಜಾಂಚಿ ಎಂ.ನಾಗೇಂದ್ರನ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts