ಚಿಕ್ಕಮಗಳೂರು: ಅರಣ್ಯ ಇಲಾಖೆ ಒತ್ತುವರಿ ಸಮಸ್ಯೆಯಿಂದ ಕಂಗಾಲಾಗಿರುವ ಜಿಲ್ಲೆಯ ರೈತರನ್ನು ಸಂಘಟಿಸಿ ಪರಿಹಾರ ಕಂಡುಹಿಡಿಯಲು ಜೂನ್ ೯ರಂದು ತಾಲೂಕಿನಲ್ಲಿ ಜಿಲ್ಲಾ ಮಟ್ಟದ ಬೃಹತ್ ರೈತ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ವಿಜಯ್ಕುಮಾರ್ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ಅರಣ್ಯ ಸಮಸ್ಯೆಯಲ್ಲಿರುವ ರೈತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಅರಣ್ಯ ಸಮಸ್ಯೆ, ಸೆಕ್ಷನ್ ೪.೧, ಡೀಮ್ಡ್ ಫಾರೆಸ್ಟ್, ನಿವೇಶನ, ಸ್ಮಶಾನ ಹೀಗೆ ಇನ್ನಿತರ ಸಮಸ್ಯೆಗಳನ್ನು ಸರಿಪಡಿಸುವ ಕುರಿತು ದೀರ್ಘಕಾಲ ಚರ್ಚಿಸಿ ಸಮಾವೇಶಕ್ಕೆ ಒಪ್ಪಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ೧.೩೦ ಲಕ್ಷ ನಿವೇಶನ ರಹಿತರು, ಲಕ್ಷಕ್ಕೂ ಹೆಚ್ಚು ಮಂದಿ ಜೀವನೋಪಾಯಕ್ಕೆ ಸಣ್ಣ ಪ್ರಮಾಣದ ಭೂಮಿ ಸಾಗುವಳಿ ರೈತರು, ಸ್ಮಶಾನವಿಲ್ಲದ ಗ್ರಾಮಗಳು ಹಾಗೂ ಕಂದಾಯ ಗ್ರಾಮಳಾಗದೇ ಸಮಸ್ಯೆಗಳನ್ನು ಎದುರಿಸುವ ನಿವಾಸಿಗಳಿಗೆ ಈ ಸಮಾವೇಶ ಪೂರಕವಾಗಲಿದೆ ಎಂದರು.
ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಜೂನ್ ೯ರಂದು ಜಿಲ್ಲೆಯ ರೈತರು ಒಗ್ಗಟ್ಟಾಗಿ ಸೇರಿಸುವ ಜೊತೆಗೆ ಜಿಲ್ಲೆಯ ಪ್ರತಿ ತಾಲೂಕಿನ ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ರೈತರ ಸಮಾವೇಶವನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಗತಿಪರ ಮುಖಂಡರಾದ ಕೆ.ಕೆ.ರಘು, ಕೃಷ್ಣಪ್ಪ, ರವಿಕುಮಾರ್, ಮುನಿಸ್ವಾಮಿ, ಬಸವರಾಜ್, ಈಶ್ವರ್, ಬೀರೇಗೌಡ, ಕುಮಾರ್, ಅಕ್ಮಲ್, ಜಯಂತಿ, ಪೂರ್ಣೇಶ್, ಗಿರೀಶ್, ಗಂಗಾಧರ್, ಲೋಕೇಶ್ ಮತ್ತಿತರರಿದ್ದರು.