ಹಗರಿಬೊಮ್ಮನಹಳ್ಳಿ: ರೈತರ ಜಮೀನುಗಳ ಹಳೆಯ ಭೂ ದಾಖಲೆಗಳನ್ನು ಸಂರಕ್ಷಿಸಲು ಡಿಜಿಟಲೀಕರಣ ಅನಿವಾರ್ಯ ಮತ್ತು ಸಹಕಾರಿಯಾಗಿದೆ ಎಂದು ಶಾಸಕ ಕೆ.ನೇಮಿರಾಜ್ ನಾಯ್ಕ ತಿಳಿಸಿದರು.


ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ರೈತರ ಭೂ ದಾಖಲೆಗಳ ಡಿಜಿಟಲೀಕರಣಕ್ಕೆ ಚಾಲನೆ ನೀಡಿ ಬುಧವಾರ ಮಾತನಾಡಿದರು. ರೈತರ ಜಮೀನುಗಳ ದಾಖಲಾತಿಗಳು ಹಲವಾರು ವರ್ಷಗಳಿಂದ ದುಸ್ಥಿತಿಯಲ್ಲಿವೆ. ಈ ಹಿನ್ನೆಲೆಯಲ್ಲಿ ಭೂ ದಾಖಲೆಗಳನ್ನು ಶಾಶ್ವತವಾಗಿ ಡಿಜಿಟಲ್ ದಾಖಲೆಗಳಾಗಿ ಪರಿವರ್ತನೆ ಮಾಡಲಾಗುವುದು. ಇದರಿಂದ ರೆಕಾರ್ಡ್ ರೂಮ್ಗಳಿಂದ ದಾಖಲೆಗಳನ್ನು ಪಡೆದುಕೊಳ್ಳಲು ಇರುವ ತೊಂದರೆಗಳ ನಿವಾರಣೆಯಾಗಲಿದೆ. ನಿತ್ಯ ಸಾವಿರಾರು ದಾಖಲೆಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಣ ಮಾಡಲಾಗುವುದು ಎಂದರು.
ತಹಸೀಲ್ದಾರ್ ಆರ್.ಕವಿತಾ ಮಾತನಾಡಿ, ಡಿಜಿಟಲೀಕರಣ ಮಾಡುವುದರಿಂದ ದಾಖಲೆಗಳನ್ನು ತಿದ್ದಲು ಬರುವುದಿಲ್ಲ. ಕಳ್ಳತನ ಮಾಡಲಿಕ್ಕೂ ಆಗುವುದಿಲ್ಲ. ಜನರು ನೇರವಾಗಿ ದಾಖಲೆಗಳನ್ನು ಡಿಜಿಟಲ್ ಮಾಧ್ಯಮದಿಂದ ಪಡೆದುಕೊಳ್ಳಬಹುದು. ದಾಖಲೆ ಪಡೆಯಲು ವಿಳಂಬವಾಗುವುದಿಲ್ಲ ಎಂದರು.