ಕಮಲನಗರ: ಮಾಜಿ ಸಚಿವರು ಹಾಗೂ ಔರಾದ್ ಶಾಸಕ ಪ್ರಭು ಚವ್ಹಾಣ್ ಸೋಮವಾರ ತಾಲೂಕಿನ ವಿವಿಧೆಡೆ ಗ್ರಾಮ ಸಂಚಾರ ನಡೆಸಿ, ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದರಲ್ಲದೇ ಶಾಲೆ, ಅಂಗನವಾಡಿ ಕೇಂದ್ರ ಹಾಗೂ ಮತ್ತಿತರೆ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ವ್ಯವಸ್ಥೆಯನ್ನು ಪರಿಶೀಲಿಸಿದರು.
ಚುಂಬಲೆವಾಡಿ, ರಂಡ್ಯಾಳ, ಖತಗಾಂವ, ಮದನೂರ, ಕಮಲನಗರ, ಮುರುಗ್(ಕೆ), ಬಾಳೂರ ಹಾಗೂ ಚಾಂಡೇಶ್ವರ ಶಾಲೆಗಳಲ್ಲಿ ೧೪ ಲಕ್ಷ ಮೊತ್ತದ ಶಾಲೆ ಉನ್ನತೀಕರಣ, ದುರಸ್ತಿ, ಕುಡಿಯುವ ನೀರು, ಒಎಚ್ಟಿ ಟ್ಯಾಂಕ್, ಸೋಲಾರ್ ಪೆನಾಲ್ ಅಳವಡಿಕೆ ಕಾಮಗಾರಿಗಳು, ಹಕ್ಯಾಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೫೦ ಲಕ್ಷದ ನೂತನ ತರಗತಿ ಕೋಣೆಗಳು, ಕಮಲನಗರದಲ್ಲಿ ೨೫ ಲಕ್ಷದ ಶೌಚಾಲಯ, ೨೨.೫೦ ಲಕ್ಷದ ಅಂಗನವಾಡಿ ಕೇಂದ್ರ, ಮುರುಗ್(ಕೆ)ನಲ್ಲಿ ೪.೯೯ ಲಕ್ಷದ ಸಮುದಾಯ ಭವನ ಸೇರಿದಂತೆ ಸುಮಾರು ೨.೫ ಕೋಟಿಗೂ ಹೆಚ್ಚು ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಶಾಲೆಗಳಿಗೆ ತೆರಳಿ, ಶಿಕ್ಷಕರು ಮತ್ತು ಮಕ್ಕಳ ಹಾಜರಾತಿಯನ್ನು ವೀಕ್ಷಿಸಿದರು. ಮಕ್ಕಳಿಗೆ ಓದಲು ತಿಳಿಸಿ, ಶಾಲೆಯಲ್ಲಿ ಪಠ್ಯ ಚಟುವಟಿಕೆಗಳು ಹೇಗೆ ನಡೆಯುತ್ತಿವೆ ಎನ್ನುವುದನ್ನು ತಿಳಿದುಕೊಂಡರು. ಕೆಲವು ಮಕ್ಕಳು ಓದಲು ಸಂಕಷ್ಟಪಡುವುದನ್ನು ಕಂಡು ಶಿಕ್ಷಕರ ವಿರುದ್ಧ ಅಸಮಧಾನಗೊಂಡರು. ಪ್ರೌಢ ಶಾಲೆಯ ವಿದ್ಯಾರ್ಥಿಗಳಲ್ಲಿ ಕನಿಷ್ಠ ಓದುವ ಜ್ಞಾನ ಇಲ್ಲದಿದ್ದರೆ ತಾವು ಏನು ಕೆಲಸ ಮಾಡುತ್ತಿದ್ದೀರೆಂದು ತರಾಟೆಗೆ ತೆಗೆದುಕೊಂಡರು.
ತಹಸೀಲ್ದಾರ್ರಾದ ಅಮಿತಕುಮಾರ ಕುಲಕರ್ಣಿ, ತಾಪಂ ಇಒ ಮಾಣಿಕರಾವ ಪಾಟೀಲ್, ಮುಖಂಡರಾದ ಬಸವರಾಜ ಪಾಟೀಲ್, ವಸಂತ್ ವಕೀಲ, ಮಲ್ಲಿಕಾರ್ಜುನ ದಾನಾ, ರಾಮಶೆಟ್ಟಿ ಪನ್ನಾಳೆ, ಶಿವರಾಜ ಅಲ್ಮಾಜೆ, ಕಿರಣ ಪಾಟೀಲ್, ಶಿವಕುಮಾರ ಝುಲ್ಪೆ, ಶಿವಾನಂದ ವಡ್ಡೆ, ರಂಗರಾವ ಜಾಧವ್, ಮಾಧವರಾವ ಚಾಂಗೂಣೆ, ಗಿರೀಶ ವಡೆಯರ್, ಮಂಜು ಸ್ವಾಮಿ ಇತರರಿದ್ದರು.
ದಲ್ಲಾಳಿಗಳಿಗೆ ಕಡಿವಾಣ ಹಾಕಿ: ನಾಡ ಕಚೇರಿ ಸೇರಿ ವಿವಿಧ ಸರ್ಕಾರಿ ಕಚೇರಿಗಳಲ್ಲಿ ಹಣ ಕೊಡದೇ ಕೆಲಸವಾಗುತ್ತಿಲ್ಲವೆಂಬ ದೂರುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ. ಗ್ರಾಮ ಸಂಚಾರದ ವೇಳೆ ಬಹಳಷ್ಟು ಗ್ರಾಮಗಳಲ್ಲಿ ಈ ಬಗ್ಗೆ ದೂರುಗಳನ್ನು ನೀಡಿದ್ದಾರೆ. ಪಹಣಿ ತಿದ್ದುಪಡಿ ಹಾಗೂ ಮತ್ತಿತರೆ ಜಮೀನು ಸಂಬಂಧಿತ ಕೆಲಸಗಳಿಗೆ ೫೦ ಸಾವಿರದಿಂದ ಒಂದು ಲಕ್ಷದ ವರೆಗೆ ಹಣ ಕೇಳುತ್ತಿದ್ದಾರೆಂಬ ದೂರುಗಳಿವೆ. ಇದಕ್ಕಾಗಿಯೇ ದಲ್ಲಾಳಿಗಳು ಹುಟ್ಟಿಕೊಂಡಿದ್ದಾರೆ. ಔರಾದ(ಬಿ) ತಾಲೂಕಿನ ನಾಗನಪಲ್ಲಿ, ಚಿಂತಾಕಿ ಸೇರಿದಂತೆ ಅನೇಕ ಕಡೆಗಳಲ್ಲಿ ಸಾರ್ವಜನಿಕರು ಬೇಸರ ಹೊರಹಾಕಿದ್ದಾರೆ. ತಹಸೀಲ್ದಾರ್ರು ಇಂತಹ ಅವ್ಯವಹಾರಗಳಿಗೆ ಕಡಿವಾಣ ಹಾಕಬೇಕೆಂದು ನಿರ್ದೇಶನ ನೀಡಿದರು.
ಜಾತಿ, ಆದಾಯ ಪ್ರಮಾಣ ಪತ್ರ ಹೀಗೆ ಸಣ್ಣ-ಪುಟ್ಟ ಕೆಲಸಗಳಿಗೂ ಹಣ ವಸೂಲಿ ಮಾಡಲಾಗುತ್ತಿದೆ. ದುಡ್ಡು ಕೊಟ್ಟರೆ ಮಾತ್ರ ಕೆಲಸವಾಗುತ್ತಿದ್ದು, ಇಲ್ಲವಾದಲ್ಲಿ ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿದೆ. ಬಡ ಜನತೆ ಏನು ಮಾಡುವುದೆಂದು ಜನ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ಹಣ ಕೇಳುವ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಮುಲಾಜಿಲ್ಲದೇ ಅಮಾನತುಗೊಳಿಸಲು ಅಧಿಕಾರಿಗಳಿಗೆ ಸೂಚಿಸಿರುವೆ.
| ಪ್ರಭು ಚವ್ಹಾಣ್, ಶಾಸಕ