ಮುಂಡರಗಿ: ಜಗದ್ಗುರು ಅನ್ನದಾನೀಶ್ವರ ಮಠದ ಜಾತ್ರಾ ಮಹೋತ್ಸವ ಅಂಗವಾಗಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕೊಪ್ಪಳ, ತಾಲೂಕು ಆಸ್ಪತ್ರೆ, ತಾಲೂಕು ಆಯುರ್ವೆದ ಆಸ್ಪತ್ರೆ ಮೊದಲಾದ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಪಟ್ಟಣದ ಕೆ.ಆರ್. ಬೆಲ್ಲದ ಮಹಾವಿದ್ಯಾಲಯದಲ್ಲಿ ಸೋಮವಾರ ರಕ್ತದಾನ ಶಿಬಿರ ಜರುಗಿತು.
ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ನಾಡೋಜ ಡಾ.ಅನ್ನದಾನೀಶ್ವರ ಸ್ವಾಮೀಜಿ, ‘ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ರಕ್ತಕ್ಕೆ ಪರ್ಯಾಯವಾದ ವಸ್ತುವಿಲ್ಲ. ರಕ್ತವನ್ನು ಮನುಷ್ಯರ ದಾನದಿಂದ ಮಾತ್ರ ಪಡೆಯಲು ಸಾಧ್ಯ. ಆದ್ದರಿಂದ ಪ್ರತಿಯೊಬ್ಬರೂ ರಕ್ತದಾನ ಮಾಡಿ ಮತ್ತೊಬ್ಬರಿಗೆ ನೆರವಾಗುವುದರ ಜತೆಗೆ ಉತ್ತಮ ಆರೋಗ್ಯ ಕಂಡುಕೊಳ್ಳಬೇಕು’ ಎಂದರು.
ಜಗದ್ಗುರು ಅನ್ನದಾನೀಶ್ವರ ಮಠದಿಂದ ಹೊರಟ ಜಾಥಾ ಮುಖ್ಯಬಜಾರ, ಗಾಂಧಿ ವೃತ್ತ, ಜಾಗೃತ ವೃತ್ತ, ಕೊಪ್ಪಳ ವೃತ್ತ ಮಾರ್ಗವಾಗಿ ಕೆ.ಆರ್. ಮಹಾವಿದ್ಯಾಲಯ ತಲುಪಿತು.
ಜಾತ್ರಾ ಸಮಿತಿ ಅಧ್ಯಕ್ಷ ಪವನ ಮೇಟಿ, ಡಾ.ಬಿ.ಜಿ. ಜವಳಿ, ಡಾ. ಡಿ.ಸಿ.ಮಠ, ಯು.ಸಿ. ಹಂಪಿಮಠ, ಎಸ್.ಆರ್. ಬಸಾಪುರ, ಡಾ.ಆರ್.ಎಚ್.ಜಂಗಣವಾರಿ, ಡಾ.ಪಿ.ಬಿ. ಹಿರೇಗೌಡ್ರ, ವಿ.ಎಸ್. ಗಟ್ಟಿ, ಧೃವಕುಮಾರ ಹೂಗಾರ, ಎಸ್.ಬಿ. ಹಿರೇಮಠ, ದೇವೇಂದ್ರಪ್ಪ ಹಿಟ್ನಾಳ, ಡಾ.ಕುಮಾರ ಜೆ, ಡಾ.ಸಚಿನ್ ಉಪ್ಪಾರ, ಎ.ಎಸ್. ಕಲ್ಯಾಣಿ, ಡಾ.ಸಂತೋಷ ಹಿರೇಮಠ, ಸಂಗೀತಾ ಮರಳಿ ಇತರರು ಇದ್ದರು.
ಮಹಾತ್ಮರ ದರ್ಶನದಿಂದ ಜೀವನ ಪಾವನ
ಮುಂಡರಗಿ: ಮಹಾತ್ಮರ ದರ್ಶನ ಪಡೆದರೆ ಜೀವನ ಪಾವನವಾಗುತ್ತದೆ. ದುರ್ಜನರಿಂದ ದೂರವಿದ್ದು ಸಜ್ಜನರ ಸಂಗವ ಮಾಡಿ ಸುಂದರ ಬದುಕು ಕಟ್ಟಿಕೊಂಡು ಬಾಳಬೇಕು ಎಂದು ಬಳೂಟಗಿ ಶ್ರೀ ಶಿವಕುಮಾರ ದೇವರು ಹೇಳಿದರು.
ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ಅನುಭಾವ ಚಿಂತನ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮನುಷ್ಯನ ಬದುಕು ಬದಲಾವಣೆ ದಾರಿಯಲ್ಲಿ ನಡೆಯಬೇಕು. ದುಷ್ಟತನ ದೂರವಾಗಿ ನಾವು ನಮ್ಮವರು ಎನ್ನುವ ಭಾವನೆ ಹೊಂದಿ ಸಮಾಜದ ಒಳಿತಿಗೆ ಶ್ರಮಿಸಬೇಕು. ಉತ್ತಮ ಚಿಂತನೆಗಳ ಮೂಲಕ ನಾಡಿಗೆ ಏನಾದರು ಕೊಡುಗೆ ನೀಡಿದರೆ ದೇವರು ಮೆಚ್ಚುತ್ತಾನೆ ಎಂದರು.
ಅನುಭಾವಿಗಳ, ಜ್ಞಾನಿಗಳ, ಮಹಾತ್ಮರ ಸಂಗ ಬಯಸಬೇಕು. ಮಹಾತ್ಮರ ಜತೆಗಿನ ಸಂಗವು ಮಹಾದೇವನನ್ನು ಕಾಣುವಂತೆ ಮಾಡುತ್ತದೆ. ಸುಖ ಶಾಂತಿ ನೆಮ್ಮದಿಯ ಬದುಕಿಗೆ ಉತ್ತಮರ ಸಂಗ ಬಯಸಬೇಕು. ಸಜ್ಜನರ ಸಂಗದಿಂದ ನಮ್ಮಲ್ಲಿರುವಂತ ದುರ್ಜನ ಗುಣಗಳು ದೂರವಾಗಿ ಉತ್ತಮ ಭಾವನೆಗಳು ಮೂಡುತ್ತವೆ ಎಂದರು.