ಚಿತ್ರದುರ್ಗ: ಹಿರಿಯೂರು ತಾಲೂಕು ಅಬ್ಬಿನಹೊಳೆ ಲಕ್ಷ್ಮೀರಂಗನಾಥಸ್ವಾಮಿ ದೇವಾಲಯದಲ್ಲಿ ನಾಲ್ಕು ಅಪ್ರಕಟಿತ ಶಾಸನಗಳನ್ನು ಪತ್ತೆಹಚ್ಚಲಾಗಿದೆ.
ಸಂಶೋಧಕ ಡಾ. ಸಂತೋಷ್ ಅವರೊಂದಿಗೆ ಕ್ಷೇತ್ರ ಕಾರ್ಯ ನಡೆಸಿರುವ ಉಪನ್ಯಾಸಕ ಡಾ. ಮಹೇಶ್ಕುಂಚಿಗನಾಳ್, ಶಾಸನಗಳು ಮೈಸೂರು ಒಡೆಯರ ಆಳ್ವಿಕೆಯ ಕಾಲದ್ದಾಗಿವೆ ಎಂದು ಗುರುತಿಸಿದ್ದಾರೆ.
ಇವೆಲ್ಲವೂ ದಾನ ಶಾಸನಗಳಾಗಿದ್ದು 19ನೇ ಶತಮಾನದ ಕಾಲಾವಧಿಗೆ ಸೇರಿವೆ. 16ನೇ ಶತಮಾನಕ್ಕೆ ಸೇರಿದ ಐತಿಹಾಸಿಕ ರಂಗನಾಥಸ್ವಾಮಿ ದೇವಾಲಯದ ಹಳೆಯ ಪೂಜಾ ಸಾಮಗ್ರಿಗಳನ್ನು ಇಡುವ ತಿಜೋರಿ ಕಳಸದ ಪೀಠಭಾಗದಲ್ಲಿ ಅಕ್ಷರಗಳಿರುವ ಕುರಿತು ಅರ್ಚಕರಾದ ರಾಜೀವಾಚಾರ್ ಹಾಗೂ ರಂಗನಾಥಾಚಾರಿ ಅವರು ಗಮನಕ್ಕೆ ತಂದಿದ್ದಾರೆ.
1826 ಮೇ 11ರ ಗುರುವಾರದಂದು ಯರಬೊಮ್ಮನಹಳ್ಳಿ ಅಕ್ಕಸಾಲಿಗ ಕೃಷ್ಣಪ್ಪರ ಮಗ ಕೋಡಿರಂಗಪ್ಪನು ಅಬ್ಬಿನ ಹೊಳೆಯ ರಂಗನಾಥನಿಗೆ ಒಪ್ಪಿಸಿದ ಕಳಸದ ಬಗ್ಗೆ ಶಾಸನ ಮಾಹಿತಿ ನೀಡುತ್ತದೆ. ಶಾಸನದಲ್ಲಿ ರಂಗನಾಥನನ್ನು ರಂಗಧಾಮ ಎಂದು ಕರೆಯಲಾಗಿದೆ. ಮತ್ತೊಂದು ಶಾಸನವನ್ನು ಲಿಪಿಯ ಲಕ್ಷಣದ ಆಧಾರದ ಮೇಲೆ 19ನೇ ಶತಮಾನಕ್ಕೆ ಸೇರಿದ್ದೆಂದು ಹೆಳಲಾಗಿದೆ. ಒಂದು ಘಂಟೆಯ ಮೇಲೆ ಅಬ್ಬಿನೆಳೆಯ ರಂಗನಾಥನಿಗೆ ನೆರಳಕೆರೆ ಚಂನೆ ಕೃಷ್ಣಪ್ಪನು ಒಪ್ಪಿಸಿದ ಘಂಟೆ ಎಂಬ ಬರಹವಿದೆ. ಇದು 1871 ಮೇ 14ಕ್ಕೆ ಸೇರುತ್ತದೆ.
ಮತ್ತೊಂದು ಘಂಟೆ ಮೇಲೆ ಯರಬೊಮ್ಮನಹಳ್ಳಿಯ ಅಕ್ಕ ಸಾಲಿಗ ರಂಗಶಾಮವರ ಮಗ ರಂಗ ಅಬಿನೆಳೆ ರಂಗನಾಥ ಸ್ವಾಮಿಗೆ ಒಪ್ಪಿಸಿದ ಘಂಟೆ 10ನೇಯದು, 1874 ಮಾರ್ಚ್ 22ನೇ ತಾರೀಖು ಎಂದಿದೆ. ಶಾಸನದಲ್ಲಿ ಅಬ್ಬಿನಹೊಳೆಯನ್ನು ಅಬಿನೆಳೆ ಎಂದು ಕರೆಯಲಾಗಿದೆ.
ಆಂಧ್ರಪ್ರದೇಶದ ಮಡಕಿಶಿರಾ, ಮಧುಗಿರಿ ತಾಲೂಕಿನ ನೆರಳಕೆರೆ, ಕಡಪದ ಭಕ್ತರ ದಾನಗಳನ್ನು ಕುರಿತು ಶಾಸನಗಳು ಬೆಳಕು ಚೆಲ್ಲುತ್ತವೆ. ಒಂದೇ ದೇವಾಲಯದಲ್ಲಿ ಇಷ್ಟೊಂದು ಶಾಸನಗಳು ಸಿಕ್ಕಿರುವುದು ಮಹತ್ವದ ಸಂಗತಿಯಾಗಿದೆ. ಕ್ಷೇತ್ರ ಕಾರ್ಯಕ್ಕೆ ದೇವಾಲಯದ ಧರ್ಮದರ್ಶಿ ಎಸ್.ಜಿ. ಮುರಿಗೇಂದ್ರಪ್ಪ, ಶಶಿಕುಮಾರ್ನಾಯ್ಕ ಸಹಕರಿಸಿದ್ದಾರೆ ಎಂದು ಮಹೇಶ್ ತಿಳಿಸಿದ್ದಾರೆ.
