ಮದ್ದೂರು: ತಾಲೂಕಿನ ಬೆಸಗರಹಳ್ಳಿ ಗ್ರಾಮದಲ್ಲಿ ಬೆಸಗರಹಳ್ಳಿ ಗೌಡ್ರು ಬಾಯ್ಸ ವತಿಯಿಂದ ಶನಿವಾರ ಆಯೋಜಿಸಿದ್ದ ರಾಜ್ಯಮಟ್ಟದ ಚಕ್ಕಡಿ ಗಾಡಿ ಓಟದ ಸ್ಪರ್ಧೆ ಯಶಸ್ವಿಯಾಗಿ ನಡೆಯಿತು.
ರಾಜ್ಯದ ವಿವಿಧ ಭಾಗಗಳಿಂದ 60 ಕ್ಕೂ ಹೆಚ್ಚು ಜೋಡಿ ರಾಸುಗಳು ಹಾಗೂ ಅದರ ಮಾಲೀಕರು ಪಾಲ್ಗೊಂಡಿದ್ದರು. ಎರಡು ಹಲ್ಲು ಹಾಗೂ ಹಾಲು ಹಲ್ಲಿನ ಎತ್ತುಗಳ ಚಕ್ಕಡಿ ಗಾಡಿ ಸ್ಪರ್ಧೆ ನೆರೆದಿದ್ದ ಪ್ರೇಕ್ಷಕರನ್ನು ಪ್ರತಿ ಕ್ಷಣವೂ ಮೈನವಿರೇಳುವಂತೆ ಮಾಡಿತು. ಅಂತೆಯೇ ನೆರೆದಿದ್ದ ಸಾರ್ವಜನಿಕರು ಚಪ್ಪಾಳೆ, ಶಿಳ್ಳೆ, ಹಾಕುವ ಮೂಲಕ ಸ್ಪರ್ಧಿಗಳನ್ನು ಹುರಿದುಂಬಿಸಿದರು. ಒಟ್ಟಾರೆ ಇಡೀ ಸ್ಪರ್ಧೆ ನೆರೆದಿದ್ದ ಜನರಿಗೆ ರಂಜನೆ ನೀಡುವ ಜತೆಗೆ ತೀವ್ರ ಕುತೂಹಲ ಮೂಡಿಸಿತು.
ಶಾಸಕ ಕೆ.ಎಂ.ಉದಯ್ ಮಾತನಾಡಿ, ಆಧುನೀಕರಣ ಭರಾಟೆಯಲ್ಲಿ ಗ್ರಾಮೀಣ ಕಲೆಗಳು ನಶಿಸಿ ಹೋಗುತ್ತಿರುವ ಇಂದಿನ ಸಂದರ್ಭದಲ್ಲಿ ಬೆಸಗರಹಳ್ಳಿ ಗೌಡ್ರು ಬಾಯ್ಸ ವತಿಯಿಂದ ಸಾಹಸಿ ಕ್ರೀಡೆ ಏರ್ಪಡಿಸಿ ಪ್ರೋತ್ಸಾಹ ನೀಡುತ್ತಿರುವುದು ಮೆಚ್ಚುಗೆ ವಿಷಯ ಎಂದು ಪ್ರಶಂಸಿದರು.
ಇಂತಹ ಕ್ರೀಡೆಗಳಿಂದ ದೇಹ ಮತ್ತು ಮನಸ್ಸು ಹತೋಟಿಗೆ ಬರುತ್ತದೆ. ಇಂತಹ ಸಾಹಸ ಕ್ರೀಡೆಗಳು ಹೆಚ್ಚು ನಡೆಯಬೇಕು. ಇದಕ್ಕೆ ನಾಗರಿಕರು ಸಹಕಾರ ನೀಡಬೇಕು ಮತ್ತು ಆಯೋಜಕರು ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಮುಂಜಾಗ್ರತೆವಹಿಸಬೇಕೆಂದು ತಿಳಿಸಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ, ಮನ್ಮುಲ್ ನಿರ್ದೇಶಕ ಹರೀಶ್ಬಾಬು, ಕಾರ್ಯಕ್ರಮದ ಆಯೋಜಕರಾದ ಪ್ರೇಮ್, ಅಕ್ಷಯ್, ಸುಮಂತ್, ಸುನೀಲ್, ಹರ್ಷ, ಟಿಎಪಿಸಿಎಂಎಸ್ ನಿರ್ದೇಶಕ ಅಡ್ಡರಸ್ತೆ ಗೋಪಿ, ಗ್ರಾಪಂ ಸದಸ್ಯ ಬಾಬುಎಂ.ಆರ್.ಕಾಳೇಗೌಡ, ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಬಿ.ಎನ್.ಮಧು, ಮುಖಂಡರಾದ ಎ.ಶೇಖರ್, ಧನಂಜಯ, ಬಿ.ಎಸ್.ನಾಗರಾಜು ವೆಂಕಟೇಶ್, ಬಿ.ಎನ್.ಅಭಿ, ಅಕ್ಷಯ್, ಸುಧಾ, ಹರ್ಷ, ದುಶ್ಯಂತ್, ವಿಶಾಲ್ ಸೇರಿದಂತೆ ಇತರರು ಇದ್ದರು.