ಭದ್ರಾವತಿ: ಜಾತಿ ಗಣತಿಗಾಗಿ ಮನೆಗೆ ಬರುವವರಿಗೆ ಸೂಕ್ತ ಮಾಹಿತಿ ನೀಡುವ ಮೂಲಕ ಮೂಲ ಜಾತಿ ಛಲವಾದಿ, ಬಲಗೈ ಅಥವಾ ಹೊಲೆಯ ಎಂದು ದಾಖಲಿಸುವಂತೆ ತಾಲೂಕು ಛಲವಾದಿಗಳ(ಪ.ಜಾ) ಸಮಾಜ ಮನವಿ ಮಾಡಿದೆ.
ನಗರದ ನ್ಯೂಟೌನ್ ಜಯಶ್ರೀ ವೃತ್ತದ ಬಳಿ ಇರುವ ಸಂಘದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸಮಾಜದ ಪ್ರಮುಖರು, ಈ ಹಿಂದೆ ಗಣತಿ ಕಾರ್ಯದ ಸಂದರ್ಭದಲ್ಲಿ ಪರಿಶಿಷ್ಟ ಜಾತಿ (ಆದಿ ಕರ್ನಾಟಕ)ಗೆ ಸೇರಿರುವ ಛಲವಾದಿ ಸಮಾಜದವರು ಮೋಸ ಹೋಗಿದ್ದಾರೆ. ಆದರೆ ಈ ಬಾರಿ ಆ ರೀತಿಯಾಗದಂತೆ ಸಮಾಜದವರು ಎಚ್ಚರವಹಿಸಬೇಕಿದೆ ಎಂದರು.
ಮೂಲ ಜಾತಿ ವಿಷಯದಲ್ಲಿ ಛಲವಾದಿ ಅಥವಾ ಬಲಗೈ ಅಥವಾ ಹೊಲೆಯ ಎಂಬುದನ್ನು ದಾಖಲಿಸಬಹುದು. ರಾಜ್ಯದ ವಿವಿಧೆಡೆ ಸಮಾಜದವರು ಆಯಾ ಭಾಗಕ್ಕೆ ತಕ್ಕಂತೆ ಮೂಲ ಜಾತಿ ದಾಖಲಿಸಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಾಲೂಕಿನಲ್ಲಿರುವ ಸಮಾಜದವರು ಮೂರು ಹೆಸರುಗಳ ಪೈಕಿ ಯಾವುದಾದರೂ ಒಂದನ್ನು ದಾಖಲಿಸುವಂತೆ ತಿಳಿಸಿದರು.
ಸಮಾಜದ ಜಿಲ್ಲಾಧ್ಯಕ್ಷ ಸಿದ್ದಪ್ಪ, ತಾಲೂಕು ಅಧ್ಯಕ್ಷ ಚನ್ನಪ್ಪ, ಪ್ರಮುಖರಾದ ಸಾವಕ್ಕನವರ್, ಎಸ್.ಎಸ್.ಭೈರಪ್ಪ, ಡಿ.ನರಸಿಂಹಮೂರ್ತಿ, ಶ್ರೀನಿವಾಸ್(ನಂಜಾಪುರ), ನಿತ್ಯಾನಂದ, ಎಚ್.ಎಂ ಮಹಾದೇವಯ್ಯ, ಹುಚ್ಚಯ್ಯ ಇತರರಿದ್ದರು.
