ಮೂಗೂರು: ಮೂಗೂರು ಬಂಡಿ ಎಂದೇ ಪ್ರಖ್ಯಾತಿ ಪಡೆದ ಗ್ರಾಮದ ಶ್ರೀ ತ್ರಿಪುರ ಸುಂದರಿ ಅಮ್ಮನವರ ಜಾತ್ರಾ ಮಹೋತ್ಸವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸೋಮವಾರ ವಿಜೃಂಭಣೆಯಿಂದ ಆರಂಭಗೊಂಡಿತು.
ಸೋಮವಾರದಿಂದ ಜ.17ರವರೆಗೆ 5 ದಿನಗಳ ಕಾಲ ನಡೆಯಲಿರುವ ಜಾತ್ರಾ ಮಹೋತ್ಸವಕ್ಕೆ ತಾಲೂಕು ಆಡಳಿತ ಸಕಲ ಸಿದ್ಧತೆ ಮಾಡಿದ್ದು ಜನರು ಸಡಗರದಿಂದ ಪಾಲ್ಗೊಂಡಿದ್ದರು.
ರೈತರು ಬಂಡಿ ಬೀದಿಯ ಎರಡೂ ಕಡೆಗಳಲ್ಲೂ ತಮ್ಮ ಓಟದ ಸರದಿಗಾಗಿ ಬಿಸಿಲನ್ನು ಲೆಕ್ಕಿಸದೆ ನಿಂತಿದ್ದರು. ಲಕ್ಷಾಂತರ ರೂ. ಬೆಲೆ ಬಾಳುವ ಎತ್ತುಗಳನ್ನು ಅಲಂಕಾರ ಮಾಡಿದ್ದು ಎಲ್ಲರ ಗಮನ ಸೆಳೆಯುವಂತಿದ್ದವು. ದೇವಾಲಯದಲ್ಲಿ ಪೂಜಾ ಕೈಂಕರ್ಯಗಳು ನಡೆದ ಬಳಿಕ ಅಮ್ಮನವರ ಉತ್ಸವ ಮೂರ್ತಿಯನ್ನು ದೇಗುಲದಲ್ಲಿ ಪ್ರದಕ್ಷಿಣೆ ಹಾಕಿ ನಂತರ ರುದ್ರಾಕ್ಷಿ ಮಂಟಪದಲ್ಲಿ ಪ್ರತಿಷ್ಠಾಪಿಸಲಾಯಿತು. ಹರಕೆ ಹೊತ್ತ ಭಕ್ತರು ಬಂಡಿಗೆ ಈಡುಗಾಯಿ ಹೊಡೆದರು. ನಂತರ ರುದ್ರಾಕ್ಷಿ ಮಂಟಪದ ಉತ್ಸವದೊಂದಿಗೆ ಬಂಡಿ ಮಂಟಪ ತಲುಪುತ್ತಿದ್ದಂತೆ ದಾರಿಯುದ್ದಕ್ಕೂ ಪೂಜಾ ಬಂಡಿಗೆ ಹೂ ಚೆಲ್ಲಿದರು. ಅಮ್ಮನವರಿಗೆ ಬಂಡಿ ಮಂಟಪದಲ್ಲಿ ಪೂಜೆ ಸಲ್ಲಿಸಿ ಬಂಡಿ ಓಟಕ್ಕೆ ಚಾಲನೆ ನೀಡಲಾಯಿತು. ಬಂಡಿ ಓಟದ ವೀಕ್ಷಣೆಗಾಗಿ ಸಹಸ್ರಾರು ಜನರು ಕಾದು ಕುಳಿತಿದ್ದರು.
ಅನ್ನ ಸಂತರ್ಪಣೆ: 40 ವರ್ಷಗಳಿಂದಲೂ ಮಂಡ್ಯ ಜಿಲ್ಲೆ ಮದ್ದೂರಿನ ಬ್ಯಾಡರಹಳ್ಳಿ ಗ್ರಾಮಸ್ಥರು, ಶ್ರೀ ತ್ರಿಪುರ ಸುಂದರಿ ಅಮ್ಮನವರ ಸೇವಾ ಸಮಿತಿಯಿಂದ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು. ಮುಖ್ಯ ರಸ್ತೆಯಿಂದ ದೇಗುಲದ ರಾಜಗೋಪುರಕ್ಕೆ ವಿದ್ಯುತ್ ದೀಪಾಲಂಕಾರವನ್ನು ಮಾಡಿಸಲಾಗಿತ್ತು. ಈ ಬಾರಿಯೂ 4 ದಿನಗಳು ಅನ್ನಸಂತರ್ಪಣೆ ನಡೆಯಲಿದೆ. ಪ್ರತಿ ವರ್ಷದಂತೆ ಈ ಬಾರಿಯೂ 5 ದಿನಗಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಆಯೋಜಿಸಿದ್ದಾರೆ.