More

    ಮಾರುಕಟ್ಟೆಯಲ್ಲಿ ವ್ಯಾಪಾರ ಜೋರು

    ಮಂಡ್ಯ: ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಆಚರಣೆಗೆ ಜಿಲ್ಲೆಯ ಜನರು ಸಿದ್ಧತೆ ಮಾಡಿಕೊಂಡಿದ್ದಾರೆ.

    ಸಂಕ್ರಾಂತಿ ರೈತರ ಪಾಲಿಗೆ ವಿಶೇಷ ಹಬ್ಬ. ಆದರೆ, ಈ ಬಾರಿ ಭತ್ತ ಖರೀದಿಯಾಗದಿರುವುದರಿಂದ ರೈತರು ನಷ್ಟ ಅನುಭವಿಸುವಂತಾಗಿದೆ. ಈ ನಡುವೆಯೂ ಹಬ್ಬದ ಆಚರಣೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಹಬ್ಬದ ಮುನ್ನಾ ದಿನವಾದ ಮಂಗಳವಾರ ಮಾರುಕಟ್ಟೆಯಲ್ಲಿ ವ್ಯಾಪಾರ ಜೋರಾಗಿಯೇ ನಡೆಯಿತು.

    ಅಗತ್ಯ ವಸ್ತು ದುಬಾರಿ: ಹಬ್ಬದ ಹಿನ್ನೆಲೆಯಲ್ಲಿ ಕಬ್ಬು, ಬೆಲ್ಲ, ಎಳ್ಳು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ದುಬಾರಿಯಾಗಿದ್ದು, ಜನಸಾಮಾನ್ಯರ ಕೈಸುಡುತ್ತಿದೆ. ಆದರೂ ಅಗತ್ಯ ವಸ್ತುಗಳನ್ನು ಖರೀದಿಸಲು ಮಾರುಕಟ್ಟೆಯಲ್ಲಿ ಜನಸಂದಣಿ ಹೆಚ್ಚಾಗಿದ್ದು, ಖರೀದಿ ಭರಾಟೆ ಜೋರಾಗಿತ್ತು.
    ಕರಿಕಬ್ಬು ಜಲ್ಲೆ 50 ರೂ., ಬಿಳಿ ಎಳ್ಳು ಕೆಜಿ 80 ರೂ.,ಅಚ್ಚು ಬೆಲ್ಲ 1ಕ್ಕೆ 12 ರೂ., ಕೆಜಿಗೆ 120 ರೂ., ಪುಡಿ ಬೆಲ್ಲ 100 ರೂ., ಸಕ್ಕರೆ ಅಚ್ಚು ಕೆಜಿ 100 ರೂ., ಕೊಬ್ಬರಿ ಕೆಜಿ 350 ರೂ., ಹುರಿಗಡಲೆ ಕೆಜಿ 40 ರೂ., ಗೆಣಸು ಕೆಜಿ 30 ರೂ., ಕಡಲೇಕಾಯಿ ಸೇರು 60ರಿಂದ 70 ರೂ.ಗೆ ಮಾರಾಟವಾಗುತ್ತಿತ್ತು. ಅಂತೆಯೇ, ಅವರೇಕಾಯಿ ಕೆಜಿಗೆ 60ರಿಂದ 80ರೂ.ವರೆಗೂ ಮಾರಾಟವಾಗುತ್ತಿದೆ. ಈರುಳ್ಳಿ 70ರಿಂದ 100 ರೂ, ಹುರುಳಿಕಾಯಿ, ಬದನೆಕಾಯಿ, ಗೆಡ್ಡೆಕೋಸು, ಬೀಟ್‌ರೂಟ್, ಆಲೂಗೆಡ್ಡೆ ತಲಾ ಕೆಜಿಗೆ 40 ರೂ.ಇದ್ದರೆ, ಟೊಮ್ಯಾಟೊ 2 ಕೆಜಿಗೆ 30 ರೂ.ಇತ್ತು. ಸೊಪ್ಪಿನ ಬೆಲೆಯಲ್ಲೂ ಸ್ವಲ್ಪಮಟ್ಟಿಗೆ ಗ್ರಾಹಕರಿಗೆ ನೆಮ್ಮದಿ ತರಿಸಿದೆ. ಕೊತ್ತಂಬರಿ ಕಟ್ಟು 1ಕ್ಕೆ 20 ರೂ., ಸಬ್ಬಕ್ಕಿ ಕಟ್ಟು 15 ರೂ., ಮೆಂತ್ಯ, ಪಾಲಾಕ್, ಕೀರೆ, ದಂಟು ಕಟ್ಟು 10 ರೂ.ಗೆ ಮಾರಾಟವಾಯಿತು.

    ಸೇವಂತಿಗೆ ಮಾರು 50 ರೂ., ಕನಕಾಂಬರ ಕೆಜಿ 400 ರೂ., ಕಾಕಡ ಕೆಜಿ 700 ರೂ., ಮಲ್ಲಿಗೆ ಕೆಜಿ 1500 ರೂ., ಮರಳೆ ಕೆಜಿ 1000 ರೂ., ಚೆಂಡು ಹೂವು ಕೆಜಿ 50 ರೂ., ಬಟಾನ್ ರೋಸ್ ಕೆಜಿ 300 ಇತ್ತು. ಸೇಬು ಕೆಜಿಗೆ 80ರಿಂದ 120 ರೂ., ದ್ರಾಕ್ಷಿ ಕೆಜಿ 60 ರೂ., ದಾಳಿಂಬೆ ಕೆಜಿ 120 ರೂ., ಮೂಸಂಬಿ ಕೆಜಿ 60 ರೂ., ಕಿತ್ತಳೆಹಣ್ಣು ಕೆಜಿ 80 ರೂ., ಕಿವಿಹಣ್ಣು ಕೆಜಿ 120 ರೂ., ಬಾಳೆಹಣ್ಣು ಕೆಜಿ 60 ರೂ. ಇತ್ತು.

    ಇದಲ್ಲದೆ, ಸಂಕ್ರಾಂತಿಯಲ್ಲಿ ವಿಶೇಷ ಎನ್ನಿಸುವುದು ರಾಸುಗಳನ್ನು ಕಿಚ್ಚು ಹಾಯಿಸುವುದು. ಇದಕ್ಕೆ ಮೊದಲು ರಾಸುಗಳಿಗೆ ಅಲಂಕಾರ ಮಾಡುವುದು ಪದ್ಧತಿ. ಈ ಹಿನ್ನೆಲೆಯಲ್ಲಿ ರಾಸುಗಳಿಗೆ ಅಲಂಕಾರ ಮಾಡುವ ವಸ್ತುವಿನ ಬೆಲೆಯೂ ದುಬಾರಿಯಾಗಿತ್ತು. ಮೂಗುದಾರ, ಹುರಿದಾರ, ಗಂಟೆ, ಚುನಾರಿ, ಟೇಪು, ಕಪ್ಪುಹಗ್ಗ, ಬಲೂನು, ಹುರಿ ಹಗ್ಗ ಸೇರಿದಂತೆ ಮತ್ತಿತರ ಅಲಂಕಾರಿಕ ವಸ್ತುಗಳು 150 ರೂ.ಇತ್ತು. ಆದರೂ ರೈತರು ಚೌಕಾಸಿ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts