ಕೊಳ್ಳೇಗಾಲ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ತಮ್ಮ ಪರಮಾಪ್ತ ಮಾಜಿ ಶಾಸಕ ಹಾಗೂ ಉಗ್ರಾಣ ನಿಗಮದ ಅಧ್ಯಕ್ಷ ಎಸ್.ಜಯಣ್ಣ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು.
ಕೊಳ್ಳೇಗಾಲದಲ್ಲಿ ಡಿ.12ರಂದು ಜಯಣ್ಣ ಅವರ ನೂತನ ಮನೆಯ ಗೃಹಪ್ರವೇಶವಿತ್ತು. ಆದರೆ, ಡಿ.7ರಂದು ಕೊಳ್ಳೇಗಾಲಕ್ಕೆ ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ ನೂತನ ಮನೆಯನ್ನು ಉದ್ಘಾಟಿಸಿದ್ದರು. ಮನೆಗೆ ಅನುಗ್ರಹ ಎಂದು ಹೆಸರಿಟ್ಟು, ಸಿದ್ದರಾಮಯ್ಯ ಅವರ ಭಾವಚಿತ್ರ ಹಾಕಲಾಗಿತ್ತು. ಈ ಮನೆಯ ಆವರಣದಲ್ಲೇ ಸಿಎಂ ಸಿದ್ದರಾಮಯ್ಯ ಜಯಣ್ಣ ಅವರ ಪಾರ್ಥಿವ ಶರೀರದ ದರ್ಶನ ಪಡೆದರು. ಬಳಿಕ ಅರ್ಧ ಗಂಟೆಗೂ ಹೆಚ್ಚು ಕಾಲ ಕುಟುಂಬಸ್ಥರೊಂದಿಗೆ ಮಾತನಾಡಿದರು.
ಮಾಂಬಳ್ಳಿಯಲ್ಲಿ ಅಂತ್ಯಕ್ರಿಯೆ: ಮಾಂಬಳ್ಳಿ ಗ್ರಾಮದ ಜಮೀನಿನಲ್ಲಿ ಬುಧವಾರ ಅಂತ್ಯಕ್ರಿಯೆ ನಡೆಯಿತು. ಇದಕ್ಕೂ ಮೊದಲು ಕೊಳ್ಳೇಗಾಲ ಮತ್ತು ಕಿನಕಹಳ್ಳಿಯ ಪ್ರಮುಖ ಬೀದಿಗಳಲ್ಲಿ ಪಾರ್ಥಿವ ಶರೀರದ ಮೆರವಣಿಗೆ ನಡೆಯಿತು.
ಮಾಜಿ ಶಾಸಕ ಎಸ್.ಜಯಣ್ಣ ನಾಡು ಕಂಡ ಅಪರೂಪದ ರಾಜಕಾರಣಿ. ನನ್ನ ಮತ್ತು ಎಸ್.ಜಯಣ್ಣ ಅವರ ನಡುವೆ ಬಹಳ ದೀರ್ಘವಾದ ಸ್ನೇಹವಿತ್ತು. ಅವರು ಬಹಳ ನಂಬಿಕಸ್ಥರಾಗಿದ್ದರು. ರಾಜಕಾರಣದಲ್ಲಿ ಇಂಥವರು ಸಿಗುವುದು ಬಹಳ ಅಪರೂಪ. ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೆ ರಾಜಕಾರಣ ಮಾಡಿಕೊಂಡು ಬಂದವರು.
ಸಿದ್ದರಾಮಯ್ಯ, ಮುಖ್ಯಮಂತ್ರಿ