ಹಾಸನ: ಮಹಿಳೆಯರ ನ್ಯಾಯಯುತ ಹಕ್ಕುಗಳಿಗಾಗಿ ಮಂಡಿಸಿರುವ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಶನಿವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ನಗರದ ಹೇಮಾವತಿ ಪ್ರತಿಮೆಯಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಎನ್.ಆರ್. ವೃತ್ತದಿಂದ ಬಿ.ಎಂ. ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಆಗಮಿಸಿತು. ಇದೆ ವೇಳೆ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ. ಪುಷ್ಪಾ ಮಾತನಾಡಿ, ಜಗತ್ತಿನ ಮಹಿಳಾ ಕಾರ್ಮಿಕರ ಹೋರಾಟದಿಂದ ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಣೆಗೆ ಬಂತು. ಭಾರತದಲ್ಲಿನ ಮಹಿಳೆಯರು ಅತ್ಯಂತ ಶೋಚನೀಯ ಪರಿಸ್ಥಿತಿಯನ್ನು ಎದುರಿಸುತ್ತಿರುವ ಸನ್ನಿವೇಶದಲ್ಲಿ ಈ ವರ್ಷದ ಮಹಿಳಾ ದಿನಾಚರಣೆಯೂ ಆಚರಿಸಲ್ಪಡುತ್ತಿದೆ. ಮಹಿಳೆಯರ ಹಕ್ಕುಗಳ ಮೇಲಿನ ದಾಳಿಗಳು ಹೆಚ್ಚುತ್ತಿವೆ. ತಾರತಮ್ಯ ಅಧಿಕವಾಗುತ್ತಿದೆ ಎಂದು ಹೇಳಿದರು.
ಸಾಮಾನ್ಯ ಜನರು ಅದರಲ್ಲೂ ದುಡಿಯುವ ಮಹಿಳೆಯರ ಮೇಲೆ ಅಗತ್ಯ ವಸ್ತುಗಳ ಬೆಲೆಯೇರಿಕೆ ಗದಾಪ್ರಹಾರ ಮಾಡಿದಂತಾಗಿದೆ. ಇದು ಎಲ್ಲ ಜನರ ಬದುಕಿನ ಮೇಲೂ ಪರಿಣಾಮ ಬೀರುತ್ತಿದೆ. ಎನ್ಡಿಎ ಸರ್ಕಾರದ ಅವಧಿಯಲ್ಲಂತೂ ಸರಕು ಮತ್ತು ಅಗತ್ಯ ಸೇವೆಗಳ ಮೇಲಿನ ಜಿಎಸ್ಟಿ ಅಗತ್ಯ ಔಷಧಗಳ ಬೆಲೆಗಳು ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳ ಮೇಲೆ ನಿಯಂತ್ರಣ ರದ್ದಾಗಿರುವುದು ದೇಶದ ಸಾಮಾನ್ಯ ಜನರ ದೈನಂದಿನ ವೆಚ್ಚಗಳನ್ನು ಹೆಚ್ಚಿಸಿವೆ ಎಂದರು.
ಕೃಷಿ ಬಿಕ್ಕಟ್ಟು ತೀವ್ರವಾಗಿರುವುದರಿಂದ ಕೆಲಸ ಅರಸಿ ವಲಸೆ ಹೋಗುವವರ ಪ್ರಮಾಣ ಜಾಸ್ತಿಯಾಗಿದೆ. ಅದರ ಪರಿಣಾಮವಾಗಿ ಅನಿವಾರ್ಯವಾಗಿ ಮಹಿಳೆಯರು ಗ್ರಾಮೀಣ ಪ್ರದೇಶಗಳಲ್ಲಿಯೇ ಉಳಿಯಬೇಕಾದ ಸ್ಥಿತಿ ಇದೆ. ಅನಿಶ್ಚಿತ ಮತ್ತು ವೇತನ ರಹಿತ ಕೆಲಸ ಮಾಡುವವರನ್ನು ಸೇರಿಸಿಕೊಂಡರೆ ಶೇ.70 ರಷ್ಟು ಮಹಿಳೆಯರು ನಿರುದ್ಯೋಗವನ್ನು ಅನುಭವಿಸುತ್ತಿದ್ದಾರೆ. ವೇತನದಲ್ಲಿ ಲಿಂಗ ತಾರತಮ್ಯ ಮುಂದುವರೆಯುತ್ತಲೇ ಇರುವುದರಿಂದ ಮಹಿಳೆಯರು ಪುರುಷರಿಗಿಂತ ಶೇ. 40ರಷ್ಟು ಕಡಿಮೆ ವೇತನ ಪಡೆಯುತ್ತಿದ್ದಾರೆ. ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿಯಾಗದೇ ಇರುವುದರಿಂದ ಉದ್ಯೋಗ ಅವಕಾಶದಲ್ಲಿ ಮುಂಬಡ್ತಿಯಲ್ಲಿ ಲಿಂಗ ತಾರತಮ್ಯವು ತೀವ್ರವಾಗಿ ಮುಂದುವರೆದಿದೆ. ಶೇ.31 ರಷ್ಟು ಮಹಿಳೆಯರಿಗೆ ಮಾತ್ರವೇ ಹೆರಿಗೆ ಭತ್ಯೆ ಸಿಗುತ್ತದೆ. ಬಹು ಸಂಖ್ಯೆಯಲ್ಲಿ ಸರ್ಕಾರಿ ಯೋಜನಾ ಕಾರ್ಮಿಕರಲ್ಲಿ ಮಹಿಳೆಯರೇ ಹೆಚ್ಚಿರುವ ಅಸಂಘಟಿತ ಯೋಜನಾ ಕಾರ್ಮಿಕರು, ಕೃಷಿ, ಗುತ್ತಿಗೆ-ಹೊರಗುತ್ತಿಗೆ, ಖಾಸಗಿ ನರ್ಸಿಂಗ್ ಹೊಂ, ಖಾಸಗಿ ಶಿಕ್ಷಣ ಸಂಸ್ಥೆಗಳು, ಸಣ್ಣ ಕಾರ್ಖಾನೆಗಳು ಮುಂತಾದಡೆ ಕೆಲಸ ಮಾಡುವ ಮಹಿಳೆಯರಿಗೆ ಹೆರಿಗೆ ಭತ್ಯೆ ಸೌಲಭ್ಯ ಕನಸಾಗಿದೆ ಎಂದು ದೂರಿದರು.
ಆರೋಗ್ಯ, ಶಿಕ್ಷಣ, ಆಹಾರ ಮುಂತಾದ ಸಾಮಾಜಿಕ ವಲಯಗಳ ಮೇಲೆ ಸರ್ಕಾರದ ವೆಚ್ಚ ಕಡಿಮೆಯಾಗುತ್ತಿದ್ದು ಇದರ ಪ್ರತಿಕೂಲ ಪರಿಣಾಮವು ಮಹಿಳೆಯರ ರಕ್ತಹೀನತೆ, ಮಕ್ಕಳ ಅಪೌಷ್ಟಿಕತೆಗೂ ಕಾರಣವಾಗುತ್ತಿದೆ. ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಮಾಣವು ಹೆಚ್ಚಳವಾಗುತ್ತಿದೆ. ಕೌಟುಂಬಿಕ ಹಿಂಸೆಯ ಕಾರಣದಿಂದ ಪ್ರತಿ ಆರು ಗಂಟೆಗೆ ಒಬ್ಬ ವಿವಾಹಿತ ಮಹಿಳೆ ಕೊಲೆಗೀಡಾಗುತ್ತಿದ್ದಾಳೆ. ಹೆಣ್ಣು ಭ್ರೂಣ ಹತ್ಯೆಯೂ ಸೇರಿದಂತೆ ಪ್ರತಿ ವರ್ಷಕ್ಕೆ 5 ಲಕ್ಷ ಹೆಣ್ಣು ಮಕ್ಕಳು ಕೊಲ್ಲಲ್ಪಡುತ್ತಿದ್ದಾರೆ. 15 ನಿಮಿಷಕ್ಕೊಂದು ಅತ್ಯಾಚಾರಗಳಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸುವುದಾಗಿ ಬಿಜೆಪಿ ಸರ್ಕಾರ ಹೇಳಿಕೊಳ್ಳುತ್ತಿದೆಯಾದರೂ ಸಂಸತ್ತು ಮತ್ತು ವಿಧಾನ ಸಭೆಗಳಲ್ಲಿ ಮಹಿಳಾ ಮೀಸಲಾತಿ ಜಾರಿಯಾಗಿಲ್ಲ. ಮುಂದಿನ ಎರಡು ದಶಕಗಳಲ್ಲಿ ಜಾರಿ ಮಾಡಲಾಗುವುದು ಎಂದು ಹೇಳಲಾಗುತ್ತಿದೆ. ದೇಶದಲ್ಲಿನ ಎಲ್ಲ ಮೂಲಭೂತವಾದಿ ಶಕ್ತಿಗಳು ಮಹಿಳಾ ವಿರೋಧಿ ಆಚರಣೆಗಳನ್ನು ಪ್ರಚಾರ ಮಾಡುತ್ತಿವೆ. ಲಿಂಗ ಅಸಮಾನತೆ ಕೂಡ ಹೆಚ್ಚಾಗುತ್ತಿದೆ. ಸಾಮ್ರಾಜ್ಯಶಾಹಿ ವ್ಯವಸ್ಥೆಯು ಮಕ್ಕಳು ಮತ್ತು ಮಹಿಳೆಯರನ್ನು ಅತ್ಯಂತ ಕೆಟ್ಟ ಪರಿಸ್ಥಿತಿಗೆ ತಳ್ಳುವುದಕ್ಕಾಗಿ ಯುದ್ಧ ಮತ್ತು ಸಂಘರ್ಷಗಳನ್ನು ಹೇರುತ್ತಿದೆ. ಇದಕ್ಕೆ ಮಕ್ಕಳು ಮತ್ತು ಮಹಿಳೆಯರೇ ಬಲಿಪಶುಗಳಾಗಿದ್ದಾರೆ. ಮಹಿಳೆಯರು ಮತ್ತು ಮಕ್ಕಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ವಿವಿಧ ವಲಯಗಳಲ್ಲಿ ದುಡಿಯುತ್ತಿರುವ ಮಹಿಳೆಯರ ಮೇಲೆ ದಾಳಿಗಳು ಹೆಚ್ಚಾಗುತ್ತಿವೆ. ದುಡಿಯುವ ಜನರ ಹಕ್ಕುಗಳು ಮತ್ತು ಜೀವನೋಪಾಯಗಳ ಮೇಲೆ ಮುಂದಿನ ದಿನಗಳಲ್ಲಿ ದಾಳಿಗಳು ಮತ್ತಷ್ಟು ಉಲ್ಬಣಗೊಳ್ಳುವ ಪರಿಸ್ಥಿತಿಗಳು ಇವೆ. ಮಹಿಳೆಯರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ, ಶೋಷಣೆ ಹೋಗಲಾಡಿಸಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರವು ನಮ್ಮ ನ್ಯಾಯಯುತ ಬೇಡಿಕೆ ಈಡೇರಿಸಬೇಕಾಗಿದೆ ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಾಹಿತಿ ರೂಪಾ ಹಾಸನ್, ಅಂಗನವಾಡಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುಳಾ, ಪ್ಲಾಂಟೇಷನ್ ವರ್ಕರ್ಸ್ ಯೂನಿಯನ್ ಕಾರ್ಯದರ್ಶಿ ಸೌಮ್ಯಾ, ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷೆ ಮೀನಾಕ್ಷಿ, ಜಿಲ್ಲಾ ಖಜಾಂಚಿ ಶೈಲಜಾ, ಅರವಿಂದ್ ಇತರರು ಭಾಗವಹಿಸಿದ್ದರು.