ಮಹಿಳೆಯರು ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡಬೇಕು. ಜತೆಗೆ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡದೆ ಸ್ವಚ್ಛತೆಗೂ ಒತ್ತು ನೀಡಬೇಕು ಎಂದು ಜೆಎಸ್ಎಸ್ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ.ವೈಶಾಲಿ ಹೇಳಿದರು.
ಶ್ರೀ ನಟರಾಜ ಪ್ರಥಮ ದರ್ಜೆ ಕಾಲೇಜು, ಯೂತ್ ರೆಡ್ಕ್ರಾಸ್ ವತಿಯಿಂದ ಹೊಸಮಠದ ಕಾಲೇಜು ಆವರಣದಲ್ಲಿ ಬುಧವಾರ ಆಯೋಜಿಸಿದ್ದ ‘ಘನತ್ಯಾಜ್ಯ ವಸ್ತುಗಳ ನಿರ್ವಹಣೆ’ ವಿಷಯದ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.
ಮಹಿಳೆಯರು ಆರೋಗ್ಯವಾಗಿರಲು ಹೆಚ್ಚಾಗಿ ಹಣ್ಣು, ತರಕಾರಿ ಮತ್ತು ಪೌಷ್ಟಿಕ ಆಹಾರ ಪದಾರ್ಥಗಳನ್ನು ಸೇವಿಸಬೇಕು. ಮುಖ್ಯವಾಗಿ ಕರಿದ ಹಾಗೂ ಸಕ್ಕರೆ ಅಂಶವಿರುವ ಪದಾರ್ಥಗಳನ್ನು ಸೇವಿಸಬಾರದು ಎಂದು ತಿಳಿಸಿದರು.
ಪರಿಸರವನ್ನು ಸ್ವಚ್ಛವಾಗಿಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಒಮ್ಮೆ ಬಳಸಿದ ವಸ್ತುಗಳನ್ನು ಮರು ಬಳಕೆ ಮಾಡಿಕೊಳ್ಳುವ ಮುಖಾಂತರ ಪ್ರತಿನಿತ್ಯ ಪರಿಸರದ ಮೇಲೆ ಹೇರಲಾಗುತ್ತಿರುವ ಕಸದ ರಾಶಿಯ ಹೊರೆಯನ್ನು ತಪ್ಪಿಸಬೇಕು. ಪರಿಸರ ಸ್ನೇಹಿ ಪದಾರ್ಥಗಳನ್ನು ಬಳಸುವ ಮೂಲಕ ಸಾಧ್ಯವಾದಷ್ಟು ಪ್ಲ್ಯಾಸ್ಟಿಕ್ ವಸ್ತುಗಳ ಬಳಕೆಯನ್ನು ಕಡಿಮೆ ಮಾಡಬೇಕು ಎಂದು ಸಲಹೆ ನೀಡಿದರು.
ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್.ಶಿವರಾಜಪ್ಪ ಮಾತನಾಡಿ, ಪ್ರತಿಯೊಬ್ಬರೂ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಸ್ವಚ್ಛತೆಯೇ ಆರೋಗ್ಯದ ಮೂಲಮಂತ್ರ ಎಂಬುದನ್ನು ಎಲ್ಲರೂ ಮನಗಾಣಬೇಕು. ಇಲ್ಲವಾದರೆ ಅಶುಚಿತ್ವ ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ಹಾಳು ಮಾಡುವುದರ ಜತೆಗೆ ನಮ್ಮ ಆರೋಗ್ಯದ ಮೇಲೂ ಪ್ರತಿಕೂಲ ಪರಿಣಾಮವನ್ನು ಉಂಟುಮಾಡುತ್ತದೆ ಎಂದರು.
ಹಸಿರು ದಳ ಸಂಸ್ಥೆಯ ತರಬೇತುದಾರರಾದ ಪಿ.ಶ್ರೀದೇವಿ ಮಾತನಾಡಿ, ವೈದ್ಯಕೀಯ ತ್ಯಾಜ್ಯಗಳು, ಕಬ್ಬಿಣದ ಕೆಲವು ಭಾಗಗಳು, ಸ್ಯಾನಿಟರಿ ಪ್ಯಾಡ್ ಇತ್ಯಾದಿ ವಸ್ತುಗಳನ್ನು ಮರು ಬಳಕೆ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಇಂತಹ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡದೆ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಿದರೆ ಪರಿಸರದ ಮೇಲೆ ಉಂಟಾಗುತ್ತಿರುವ ಹಾನಿಯನ್ನು ತಪ್ಪಿಸಬಹುದು ಎಂದು ಸಲಹೆ ನೀಡಿದರು. ಶ್ರೀ ಚಿದಾನಂದ ಸ್ವಾಮೀಜಿ, ಪ್ರಾಂಶುಪಾಲೆ ಡಾ.ಎಂ.ಶಾರದಾ, ಯುತ್ ರೆಡ್ಕ್ರಾಸ್ನ ಸಂಯೋಜಕಿ ಎಸ್.ಲತಾ ಇತರರಿದ್ದರು.