ಸವಣೂರ: ರಾಜ್ಯದಲ್ಲಿಯೇ ಅತ್ಯಂತ ಅಪರೂಪದ, ಮಹಿಳೆಯರಿಂದಲೇ ಜರುಗುವ ಪಾರ್ವತಿ ದೇವಿಯ ರಥೋತ್ಸವ ತಾಲೂಕಿನ ಮಂತ್ರವಾಡಿ ಗ್ರಾಮದಲ್ಲಿ ಶನಿವಾರ ಸಂಜೆ ವೈಭವದಿಂದ ನೆರವೇರಿತು.ಸ್ತ್ರೀ ಸಮಾನತೆಯ ಆಶಯಗಳನ್ನು ಸಮರ್ಥವಾಗಿ ಪ್ರತಿಬಿಂಬಿಸುವ ರಥೋತ್ಸವದಲ್ಲಿ ಮಹಿಳೆಯರು ಮಾತ್ರ ಪಾರ್ವತಿ ದೇವಿಯ ಬೃಹತ್ ತೇರನ್ನು ಎಳೆಯುತ್ತಾರೆ. ಮಂತ್ರವಾಡಿಯ ಯೋಗಿಗಳಾಗಿದ್ದ ಲಿಂ. ಕೆಂಜಡೇಶ್ವರ ಶಿವಾಚಾರ್ಯರ ಕಾಲದಿಂದ ಈ ನಿಯಮವನ್ನು ಪ್ರತಿ ವರ್ಷವೂ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಸುಕ್ಷೇತ್ರ ಮಂತ್ರವಾಡಿಯ ಶ್ರೀ ರೇವಣಸಿದ್ಧೇಶ್ವರ ಬೆಟ್ಟದ ತುದಿಯಿಂದ ಕೆಳಗಿರುವ ಪಾದಗಟ್ಟಿಯವರೆಗೆ, ಬಳಿಕ ಪಾದಗಟ್ಟಿಯಿಂದ ಬೆಟ್ಟದ ತುದಿಯವರೆಗೆ ಪಾರ್ವತಿ ದೇವಿಯ ಅಲಂಕೃತ ತೇರನ್ನು ಮಹಿಳೆಯರು ಎಳೆದರು. ವಿವಿಧ ವಾದ್ಯವೈಭವಗಳೊಂದಿಗೆ ಸಾಗಿದ ಶ್ರೀ ಸಿದ್ಧರಾಮೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.