ಚಿತ್ರದುರ್ಗ: ಮಲೇರಿಯಾ ನಿರ್ಮೂಲನೆ ಎಲ್ಲರ ಜವಾಬ್ದಾರಿಯಾಗಿರಲಿ ಎಂದು ಜಿಪಂ ಸಿಇಒ ಎಸ್.ಜೆ. ಸೋಮಶೇಖರ್ ಹೇಳಿದರು.
ವಿಶ್ವಸಬುದ್ಧ ನಗರದ ಆರೋಗ್ಯ ಕೇಂದ್ರದ ಮುಂಭಾಗ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
ಕೀಟಗಳಿಂದ ಹರಡುವ ರೋಗಗಳಲ್ಲಿ ಮಲೇರಿಯಾವೂ ಒಂದಾಗಿದೆ. ಈ ಹಿಂದೆ ಈ ರೋಗ ಒಂದು ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿತ್ತು. ಈಗ ಮಲೇರಿಯಾ ನಿರ್ಮೂಲನೆ ಹಂತಕ್ಕೆ ತಲುಪಿದೆ. ಮಲೇರಿಯಾ ಮುಕ್ತ ಜಿಲ್ಲೆಗೆ ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದರು.
ಡಿಎಚ್ಒ ಡಾ.ಜಿ.ಪಿ. ರೇಣುಪ್ರಸಾದ್ ಮಾತನಾಡಿ, ಏ.25ನ್ನು ವಿಶ್ವ ಮಲೇರಿಯಾ ದಿನವನ್ನಾಗಿ ಆಚರಿಸಲಾಗುತ್ತಿದೆ. 2027ರ ವೇಳೆಗೆ ರಾಜ್ಯವನ್ನು ಮಲೇರಿಯಾದಿಂದ ಮುಕ್ತಗೊಳಿಸುವ ಗುರಿ ಸಾಧಿಸಬೇಕಿದೆ. ಎಲ್ಲ ಹಂತಗಳಲ್ಲಿಯೂ ಮಲೇರಿಯಾ ನಿವಾರಣೆ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಶೀಘ್ರ ಪತ್ತೆ ಸಂಪೂರ್ಣ ಚಿಕಿತ್ಸೆ, ಸೊಳ್ಳೆ ನಿಯಂತ್ರಣ, ಜೈವಿಕ ಪರಿಸರ ನಿಯಂತ್ರಣಾ ಕ್ರಮಗಳನ್ನು ಇಲಾಖೆ ನಿರ್ವಹಿಸುತ್ತಿದೆ. ಆರೋಗ್ಯ ಶಿಕ್ಷಣ ಕಾರ್ಯಕ್ರಮಗಳನ್ನು ಹೆಚ್ಚಿಸುವ ಮೂಲಕ ಮಲೇರಿಯಾ ನಿರ್ಮೂಲನೆ ಕಾರ್ಯ ನಡೆಯುತ್ತಿದೆ ಎಂದರು.
ಜಿಲ್ಲಾ ಕೀಟಜನ್ಯ ರೋಗಗಳ ನಿವಾರಣಾಧಿಕಾರಿ ಡಾ.ಎನ್. ಕಾಶಿ ಮಾತನಾಡಿ, 2023ರಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಯಾವುದೇ ಮಲೇರಿಯಾ ಪ್ರಕರಣ ವರದಿಯಾಗಿಲ್ಲ ಎಂದರು.
ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಸಿ.ಒ. ಸುಧಾ, ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ. ಗಿರೀಶ್, ವೈದ್ಯಾಧಿಕಾರಿಗಳಾದ ಡಾ. ಸುರೇಂದ್ರ, ಡಾ. ಸೈಯದ್ ಬಿಲಾಲ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿಗಳಾದ ಎನ್.ಎಸ್. ಮಂಜುನಾಥ, ಬಿ. ಮೂಗಪ್ಪ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಸುರೇಶ್ಬಾಬು, ಶ್ರೀನಿವಾಸ, ನಾಗರಾಜ್, ಮಳಲಿ ಶ್ರೀನಿವಾಸ, ಮಲ್ಲಿಕಾರ್ಜುನ, ಗುರುಮೂರ್ತಿ, ತಾಲೂಕು ಆಶಾ ಬೋಧಕಿ ತಬಿತಾ ಮತ್ತಿತರರು ಇದ್ದರು.
