ಸಂಡೂರು: ಅಕ್ಕನ ಬಳಗದಿಂದ ಇದೇ ಮೊದಲ ಬಾರಿಗೆ ತೊಟ್ಟಿಲೋತ್ಸವ ಹಾಗೂ ಅಕ್ಕ ಮಹಾದೇವಿ ಭಾವಚಿತ್ರದ ಮೆರವಣಿಗೆ ಆಯೋಜಿಸಲಾಗಿದೆ ಎಂದು ಶ್ರೀ ಪ್ರಭು ಸ್ವಾಮೀಜಿ ಹೇಳಿದರು.

ಪಟ್ಟಣದ ವಿರಕ್ತಮಠದಲ್ಲಿ ಆಯೋಜಿಸಿದ್ದ ಅಕ್ಕ ಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು. ಮಠದ ಇತಿಹಾಸದಲ್ಲಿ ಅಕ್ಕಮಹಾದೇವಿ ಭಾವಚಿತ್ರದ ಮೆರವಣಿಗೆ ಮಾಡಿರಲಿಲ್ಲ. ಸಾಂಸ್ಕೃತಿಕ, ಧಾರ್ಮಿಕ ವಲಯದ ಪ್ರಮುಖರು ಹಾಗೂ ಅಕ್ಕನ ಬಳಗದ ಸದಸ್ಯರು ಪಾಲ್ಗೊಂಡಿರುವುದು ಸಂತಸದ ವಿಚಾರ ಎಂದರು.
ಶಾಸಕಿ ಅನ್ನಪೂರ್ಣ ತುಕಾರಾಮ್ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣ ಅವರ ಅನುಭವ ಮಂಟಪದಲ್ಲಿ ಮೊದಲ ಮಹಿಳಾ ಪ್ರತಿನಿಧಿಯಾಗಿ ಅಕ್ಕಮಹಾದೇವಿ ಮಹಿಳೆಯರ ಅಸ್ಮಿತೆ ಉಳಿಸಿ ಬೆಳೆಸಿದ್ದಾರೆ. ಮಹಿಳೆಯರ ಸಬಲೀಕರಣದ ಬಗ್ಗೆ ಆ ಕಾಲದಲ್ಲೇ ಮಾತನಾಡಿ ಸೂಳೆ ಸಂಕವ್ವ, ಆಯ್ದಕ್ಕಿ ಲಕ್ಕವ್ವ ಮುಂತಾದವರು ಅನುಭವ ಮಂಟಪ ಸೇರುವಂತೆ ಮಾಡಿದರು. ಅಕ್ಕನಬಳಗದ ಶಿಸ್ತು, ಸಂಯಮ, ಪ್ರಜ್ಞಾವಂತ ನಡವಳಿಕೆ ನೋಡಿ ನಾನೂ ಕೂಡಾ ಅಕ್ಕನ ಬಳಗದ ಸದಸ್ಯೆ ಆಗಬೇಕೆಂದಿರುವೆ. ಮಹಿಳೆಯರ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕೆಂದು ತಿಳಿಸಿದರು.
ಬಂಡೆಮೇಗಳ ಆಶಾ, ವೀರಮ್ಮ ಐಕಲ್ ವಚನ ಪಠಣ ಮಾಡಿದರು. ಉಪನ್ಯಾಸಕಿ ಸುಧಾ ಚಿದಾನಂದಗೌಡ, ಕದಳಿ ವೇದಿಕೆಯ ವಿಜಯನಗರ ಜಿಲ್ಲಾಧ್ಯಕ್ಷೆ ಇಂದುಮತಿ, ಅಕ್ಕನ ಬಳಗದ ಅಧ್ಯಕ್ಷೆ ಜ್ಯೋತಿ ಗುಡೇಕೋಟೆ ನಾಗರಾಜ್, ಗೌರವ ಅಧ್ಯಕ್ಷೆ ಅಂಕಮನಾಳ್ ಶಾಂತಮ್ಮ, ಉಗ್ರಾಣದ ಕುಮಾರಸ್ವಾಮಿ, ಶಾಂತಮ್ಮ, ವಕೀಲ ಗುಡೆಕೋಟೆ ನಾಗರಾಜ, ಹಗರಿ ಬಸವರಾಜಪ್ಪ, ಚಂದ್ರಶೇಖರ, ವೀರಣ್ಣ, ತುಪ್ಪದ ಗುಂಡಣ್ಣ, ಕೊಟ್ರಬಸಪ್ಪ ಮುಂತಾದವರಿದ್ದರು.