ಹುಬ್ಬಳ್ಳಿ: ದೇಶದಲ್ಲಿ 100ಕ್ಕೆ 30ರಷ್ಟು ಮಾನಸಿಕ ರೋಗಿಗಳು ಮಾತ್ರ ಮನೋರೋಗ ತಜ್ಞರ ಬಳಿ ಚಿಕಿತ್ಸೆ ಪಡೆಯುತ್ತಾರೆ. ಉಳಿದ ಶೇ. 70ರಷ್ಟು ರೋಗಿಗಳು ಮಂತ್ರ- ತಂತ್ರ ಎಂಬಿತ್ಯಾದಿ ಮೂಢನಂಬಿಕೆಗಳ ಮೊರೆ ಹೋಗುತ್ತಾರೆ. ಮಂತ್ರ- ತಂತ್ರಕ್ಕೆ ಮನೋರೋಗ ವಾಸಿಯಾಗುವುದಿಲ್ಲ. ವೈಜ್ಞಾನಿಕ ಚಿಕಿತ್ಸೆಯೊಂದೇ ಅದಕ್ಕೆ ಪರಿಹಾರ ಎಂದು ಧಾರವಾಡದ ಡಿಮ್ಹಾನ್ಸ್ ನಿರ್ದೇಶಕ ಡಾ. ಮಹೇಶ ದೇಸಾಯಿ ಹೇಳಿದರು.
ಇಲ್ಲಿನ ಹಳೇ ಕೋರ್ಟ್ ವೃತ್ತದ ಬಳಿ ಗಿರಿರಾಜ ಅನೆಕ್ಸ್ನಲ್ಲಿ ಮಜೇಥಿಯಾ ಫೌಂಡೇಶನ್ ವತಿಯಿಂದ ಆರಂಭಿಸಲಾದ ‘ನೆಮ್ಮದಿ’ ಆಪ್ತ ಸಲಹೆ ಮತ್ತು ಮಾರ್ಗದರ್ಶನ ಕೇಂದ್ರವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಮಾನಸಿಕ ಆಸ್ಪತ್ರೆಗೆ ಹೋಗುವುದು ಕಳಂಕ ಎಂದು ಹಲವರು ಭಾವಿಸಿದ್ದಾರೆ. ಅಂತಹ ಆತಂಕವನ್ನು ನೆಮ್ಮದಿ ಕೇಂದ್ರ ದೂರ ಮಾಡಲಿದೆ. ಅನುಭವಿ ಮನೋರೋಗ ವೈದ್ಯರು ಮತ್ತು ಆಪ್ತ ಸಲಹೆಗಾರರು ಇಲ್ಲಿದ್ದಾರೆ. ವೈಜ್ಞಾನಿಕ ಪದ್ಧತಿ ಮೂಲಕ ಮನೋರೋಗಕ್ಕೆ ಪರಿಹಾರ ಒದಗಿಸಲು ಮುಂದಾಗಿರುವ ಮಜೇಥಿಯಾ ಫೌಂಡೇಶನ್ ಕಾರ್ಯ ಶ್ಲಾಘನೀಯ. ಡಿಮ್ಹಾನ್ಸ್ನಿಂದ ಯಾವುದೇ ರೀತಿಯ ಸಹಕಾರ ನೀಡಲು ಸಿದ್ಧ ಎಂದು ತಿಳಿಸಿದರು.
ನೆಮ್ಮದಿ ಕೇಂದ್ರದ ಮೆಡಿಕಲ್ ಬೋರ್ಡ್ ಸದಸ್ಯರಾದ ಡಾ.ಕೆ. ರಮೇಶಬಾಬು, ಡಾ. ವಿ.ಬಿ. ನಿಟಾಲಿ, ಡಾ. ಶಿವಾನಂದ ಹಿರೇಮಠ, ಸಂಜೀವ ಜೋಶಿ, ಮಹೇಶ ಸಾವಳಗಿಮಠ, ಸಮಾಲೋಚಕಿ ರೇಣುಕಾ ಧಾರವಾಡಕರ, ನಂದಿನಿ ಕಶ್ಯಪ್, ಕಶ್ಯಪ್ ಮಜೇಥಿಯಾ, ಸಂಗೀತಾ ಇಜಾರಗಿ, ರೂಪಾ ಅಂಗಡಿ, ಸ್ನೇಹಾ ಬಳ್ಳುಳ್ಳಿ, ಪೂಜಾ ಗಾವಡೆ, ಇತರರಿದ್ದರು.
ಡಿಮ್ಹಾನ್ಸ್ನಲ್ಲಿ ಎಂಫಿಲ್ ಕೋರ್ಸ್: ಧಾರವಾಡದ ಡಿಮ್ಹಾನ್ಸ್ನಲ್ಲಿ ಈ ಶೈಕ್ಷಣಿಕ ವರ್ಷದಿಂದ ಆಪ್ತಸಲಹೆ ವಿಷಯದಲ್ಲಿ ಎಂಫಿಲ್ ಕೋರ್ಸ್ ಆರಂಭಿಸಲಾಗಿದೆ. ಈ ಕೋರ್ಸ್ ಮೈಸೂರು, ಮಣಿಪಾಲ ಬಿಟ್ಟರೆ ಧಾರವಾಡದಲ್ಲಿ ಮಾತ್ರ ಲಭ್ಯವಿದೆ ಎಂದು ಡಾ. ಮಹೇಶ ದೇಸಾಯಿ ತಿಳಿಸಿದರು.
ನೆಮ್ಮದಿ ಕೇಂದ್ರದಲ್ಲಿ ಅನುಭವಿ ತಜ್ಞರಿದ್ದಾರೆ. ನೊಂದವರಿಗಾಗಿ ಸಮಯ, ಪ್ರೀತಿ ಮತ್ತು ಕಾಳಜಿ ಎಲ್ಲವೂ ಇದೆ. | ಜಿತೇಂದ್ರ ಮಜೇಥಿಯಾ ಮಜೇಥಿಯಾ ಫೌಂಡೇಶನ್ ಚೇರ್ಮನ್