ಕೂಡ್ಲಿಗಿ: ಸಾರ್ವಜನಿಕರ ಭೂ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಸಂರಕ್ಷಿಸುವುದರೊಂದಿಗೆ ನಿಗದಿತ ಸಮಯದಲ್ಲಿ ನೀಡಲು ಸರ್ಕಾರ ಭೂ ಸುರಕ್ಷಾ ಯೋಜನೆ ರೂಪಿಸಿದೆ ಎಂದು ಪಪಂ ಅಧ್ಯಕ್ಷ ಕಾವಲಿ ಶಿವಪ್ಪನಾಯಕ ಹೇಳಿದರು.


ಪಟ್ಟಣದ ತಾಲೂಕು ಕಚೇರಿಯಲ್ಲಿ ಬುಧವಾರ ಭೂ ದಾಖಲೆಗಳ ಡಿಜಟಲೀಕರಣ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. ಕಂದಾಯ ಇಲಾಖೆಯ ಭೂಮಿ, ಸರ್ವೇ ಮತ್ತು ನೋಂದಣಿಯ 70 ವರ್ಷಗಳ ಹಳೆಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಗಣಕೀಕರಣಗೊಳಿಸಲಾಗುತ್ತದೆ. ಈ ಮೂಲಕ ಶಿಥಿಲಾವಸ್ಥೆಯಲ್ಲಿರುವ ದಾಖಲೆಗಳನ್ನು ಶಾಶ್ವತವಾಗಿ ಉಳಿಸುವ ಕಾರ್ಯ ಮಾಡಲಾಗುತ್ತದೆ. ನಕಲಿ ದಾಖಲೆಗಳನ್ನು ಸೃಷ್ಟಿಸಲು ಅವಕಾಶವಿರುವುದಿಲ್ಲ ಹಾಗೂ ಗಣಕೀಕೃತ ದಾಖಲೆಗಳನ್ನು ನಾಗರಿಕರು ಸ್ವತಃ ಆನ್ಲೈನ್ನಲ್ಲಿ ಪಡೆದುಕೊಳ್ಳಲು ಅನುವಾಗುವಂತೆ ಭೂ ಸುರಕ್ಷಾ ಯೋಜನೆಯನ್ನು ಸರ್ಕಾರ ಆರಂಭಿಸಿದೆ ಎಂದರು.
ತಹಸೀಲ್ದಾರ್ ಎಂ.ರೇಣುಕಾ ಮಾತನಾಡಿ, ಕಂದಾಯ ಇಲಾಖೆಯ ಎ ವರ್ಗದ 48,356 ಕಡತಗಳ 19,34,240 ಪುಟಗಳು ಇದ್ದು, ಬಿ ವರ್ಗದ 27,102 ಕಡತಗಳ 5,42,040 ಪುಟಗಳು ಇದ್ದು ಇವುಗಳನ್ನು ಡಿಜಟಲೀಕರಣ ಮಾಡಲು ಸರ್ಕಾರ ಸೂಚಿಸಿದೆ. ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಅವರು ಆಸಕ್ತಿಯಿಂದಾಗಿ ಈಗಾಗಲೇ ಸುಮಾರು 45 ಸಾವಿರ ಕಡತಗಳನ್ನು ಡಿಜಟಲೀಕರಣ ಮಾಡಲಾಗಿದೆ. ಇನ್ನುಳಿದ ಕಡತಗಳನ್ನು ಡಿಜಟಲೀಕರಣ ಮಾಡಲು ಸರ್ಕಾರ ಹೆಚ್ಚಿನ ಸಿಬ್ಬಂದಿ, ಸ್ಕ್ಯಾನಿಂಗ್ ಯಂತ್ರಗಳನ್ನು ನೀಡಿದ್ದು, ತ್ವರಿತಗತಿಯಲ್ಲಿ ಈ ಕಾರ್ಯವನ್ನು ಮಾಡಿ ಸಾರ್ವಜನಿಕರಿಗೆ ಅನೂಕಲ ಕಲ್ಪಿಸುವುದಾಗಿ ತಿಳಿಸಿದರು.
ಮುಂದಿನ ದಿನಗಳಲ್ಲಿ ಭೂ ದಾಖಲೆ ಪಡೆಯಲು ಜನರು ಕಚೇರಿಗೆ ಅಲೆಯುವಂತಿಲ್ಲ. ನೇರವಾಗಿ ಜನರಿಗೆ ಸಿಗುತ್ತದೆ. ಜನರನ್ನು ವಿನಾಃಕಾರಣ ಕಚೇರಿಗೆ ಅಲೆದಾಡಿಸುವುದನ್ನು ತಪ್ಪಿಸಲು ಸರ್ಕಾರ ಮಹತ್ವಾಕಾಂಕ್ಷಿ ಯೋಜನೆ ರೂಪಿಸಿದೆ ಇದರ ಸದುಪಯೋಗ ಜನರು ಪಡೆಯುವಂತೆ ತಹಸೀಲ್ದಾರ್ ತಿಳಿಸಿದರು.
ಗ್ರೇಡ್ 2 ತಹಸೀಲ್ದಾರ್ ವಿ.ಕೆ.ನೇತ್ರಾವತಿ, ಶಿರಸ್ತೇದಾರ್ ಮಹಮ್ಮದ್ ಗೌಸ್, ತಾಲೂಕು ಸರ್ವೇ ಅಧಿಕಾರಿ ವಿಜಯಕುಮಾರ್, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯ್ಯದ್ ಶುಕೂರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಗುರುಸಿದ್ದನಗೌಡ, ಉದಯ ಜನ್ನು, ಮಾದಿಹಳ್ಳಿ ನಜೀರ್, ಶಫೀಉಲ್ಲಾ, ಪಪಂ ಸದಸ್ಯ ಸಿರಬಿ ಮಂಜುನಾಥ, ಢಾಣಿ ರಾಘವೇಂದ್ರ, ಬಾಸೂ ನಾಯ್ಕ, ಕಾವಲಿ ವೆಂಕಟೇಶ, ಮರಳುಸಿದ್ದಪ್ಪ ಇತರರಿದ್ದರು.