ನರಗುಂದ: ಪಟ್ಟಣದ ಹಗೇದಕಟ್ಟೆ ಬಡಾವಣೆಯ ಮನೆಯೊಂದರಲ್ಲಿ ಶನಿವಾರ ಬೆಳಗ್ಗೆ ಮತ್ತೆ ಏಕಾಏಕಿ ಭೂಕುಸಿತ ಉಂಟಾಗಿ ಗುಂಡಿಯೊಳಗೆ ಸಿಲುಕಿಕೊಂಡಿದ್ದ ದಂಪತಿ ಕುಟುಂಬಸ್ಥರ ಸಮಯಪ್ರಜ್ಞೆಯಿಂದಾಗಿ ಪ್ರಾಣಾಪಾಯದಿಂದ ಬದುಕುಳಿದಿದ್ದಾರೆ.
ಹಗೇದಕಟ್ಟಿ ಬಡಾವಣೆಯ ಶರಣಪ್ಪ ತಿಪ್ಪಣ್ಣ ಕಟ್ಟೇಕಾರ ಹಾಗೂ ಪತ್ನಿ ರುದ್ರವ್ವ ಕಟ್ಟೇಕಾರ ಬದುಕುಳಿದ ಅದೃಷ್ಟವಂತರು. ದಂಪತಿ ಎಂದಿನಂತೆ ಅಡುಗೆ ಕೋಣೆಯಲ್ಲಿ ಮಲಗಿದ್ದರು. ಆದರೆ, ಶನಿವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಕೋಣೆಯಿಂದ ಎದ್ದು ಪಡಸಾಲೆಯತ್ತ ಆಗಮಿಸುವಷ್ಟರಲ್ಲಿ ಏಕಾಏಕಿ ಭೂಕುಸಿತ ಸಂಭವಿಸಿದೆ. ಇದರಿಂದ ಉಂಟಾದ ಬೃಹದಾಕಾರದ ಗುಂಡಿಯೊಳಗೆ ದಂಪತಿ ಶರಣಪ್ಪ ಮತ್ತು ರುದ್ರವ್ವ ಬಿದ್ದಿದ್ದಾರೆ. ಆಗ ಇಬ್ಬರಿಗೂ ಉಸಿರುಗಟ್ಟಿದಂತಾಗಿ ರಕ್ಷಣೆಗೆ ಕೂಗಿಕೊಂಡಿದ್ದಾರೆ. ಆಗ ಕುಟುಂಬ ಸದಸ್ಯರು ಹಗ್ಗದ ಸಹಾಯದಿಂದ ಅವರಿಬ್ಬರನ್ನು ಮೇಲಕ್ಕೆತ್ತಿದ್ದಾರೆ. ಈ ಸಂದರ್ಭದಲ್ಲಿ ಶರಣಪ್ಪರ ಅಣ್ಣನ ಮಗ ಸೋಮು ಆಯತಪ್ಪಿ ಗುಂಡಿಯೊಳಗೆ ಬಿದ್ದಿದ್ದಾರೆ. ಗುಂಡಿಯೊಳಗೆ ಬಿದ್ದ ಶರಣಪ್ಪ, ರುದ್ರವ್ವ ಹಾಗೂ ಸೋಮು ಅವರ ಕೈ, ಕಾಲುಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಕೈಹಿಡಿದ ಅದೃಷ್ಟ, ತಪ್ಪಿದ ಅನಾಹುತ: ಶುಕ್ರವಾರ ರಾತ್ರಿ ಕಟ್ಟೇಕಾರ ಕುಟುಂಬ ಸದಸ್ಯರು ಎಂದಿನಂತೆ ಊಟ ಮುಗಿಸಿಕೊಂಡು ಮಲಗಿದ್ದರು. ಶರಣಪ್ಪ ಅವರ ಇಬ್ಬರು ಮಕ್ಕಳಾದ ಮೈಲಾರಿ ಮತ್ತು ತಿಪ್ಪಣ್ಣ, ಅಜ್ಜಿ ನಾಗಮ್ಮ ಅವರೊಂದಿಗೆ ಅಡುಗೆ ಕೋಣೆಗೆ ಹೊಂದಿಕೊಂಡಿರುವ ಪಡಸಾಲೆಯಲ್ಲಿ ಮಲಗಿದ್ದರು. ಆದರೆ, ಶನಿವಾರ ಶಾಲೆ ಬೆಳಗ್ಗೆ ಬೇಗನೇ ಆರಂಭವಾಗುವುದರಿಂದ ಪಡಸಾಲೆಯಲ್ಲಿ ಮಲಗಿದ್ದ ಈ ಮೂವರು ಬೆಳಗ್ಗೆ 6.40 ರ ಸುಮಾರಿಗೆ ಎದ್ದಿದ್ದರಿಂದಲೇ ಅನಾಹುತ ತಪ್ಪಿದಂತಾಗಿದೆ. ಘಟನೆ ಮಾಹಿತಿ ತಿಳಿದು ಸಚಿವ ಸಿ.ಸಿ. ಪಾಟೀಲ ಹಾಗೂ ತಹಸೀಲ್ದಾರ್ ಎ.ಎಚ್ .ಮಹೇಂದ್ರ, ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಬ್ಯಾಳಿ, ಸಿಪಿಐ ಡಿ.ಬಿ. ಪಾಟೀಲ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು.
ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಕಳೆದ 2008-09 ರಿಂದ ಭೂಕುಸಿತದ ಘಟನೆಗಳು ಉಂಟಾಗುತ್ತಿವೆ. ಕಳೆದ ಆಗಸ್ಟ್ನಿಂದ ಮತ್ತೆ ಮತ್ತೆ ಭೂಕುಸಿತಗಳು ಸಂಭವಿಸುತ್ತಿವೆ. ಈ ಘಟನೆಗೆ ನಿಖರ ಕಾರಣ ಪತ್ತೆ ಹಚ್ಚುವಂತೆ ಭೂಗರ್ಭ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸೂಚನೆ ಮೇರೆಗೆ ಅವರು, ಗುಡ್ಡದ ಬಳಿಯಿರುವ ಕೆಂಪಕೇರಿ ನೀರು ಖಾಲಿ ಮಾಡುವಂತೆ ಮಧ್ಯಂತರ ವರದಿಯಲ್ಲಿ ತಿಳಿಸಿದ್ದರು. ಈ ಹಿನ್ನೆಲೆ ಕೆರೆಯಲ್ಲಿದ್ದ ಸ್ವಲ್ಪ ಪ್ರಮಾಣದ ನೀರನ್ನು ಪುರಸಭೆ ಅಧಿಕಾರಿಗಳು ಈಗಾಗಲೇ ಖಾಲಿ ಮಾಡಿಸಿದ್ದಾರೆ. ಆದರೂ, ಭೂಕುಸಿತದ ಪ್ರಕರಣಗಳು ನಿಲ್ಲುತ್ತಿಲ್ಲ. ಇದರಿಂದ ಪಟ್ಟಣದ ಜನರು ಭಯದ ವಾತಾವರಣ ಎದುರಿಸುವಂತಾಗಿದೆ. ಅಂತಿಮವಾಗಿ ಈ ಘಟನೆಗೆ ಮುಕ್ತಿ ದೊರೆಯಬೇಕಾದರೆ ಕೆಲ ಬಡಾವಣೆಗಳನ್ನು ಸ್ಥಳಾಂತರ ಮಾಡಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿದೆ.
| ಸಿ.ಸಿ. ಪಾಟೀಲ, ಸಚಿವ
ನಮ್ಮಿಬ್ಬರ ಪಾಲಿಗೆ ಶನಿವಾರ ಕರಾಳ ದಿನವಾಗಿತ್ತು. ಗುಂಡಿಯಲ್ಲಿ ಬಿದ್ದಾಗ ಉಸಿರಾಟದ ಸಮಸ್ಯೆಯುಂಟಾಗಿ ಬಾಯಲ್ಲಿ ನೀರು ಸೇರುತ್ತಿತ್ತು. ಇನ್ನೇನು 5-10 ನಿಮಿಷ ತಡವಾಗಿದ್ದರೆ ನಾವಿಬ್ಬರೂ ಬದುಕುಳಿಯುತ್ತಿರಲಿಲ್ಲ. ಆದರೆ, ಕುಟುಂಬಸ್ಥರು ಹಾಗೂ ಬಡಾವಣೆಯ ನೆರೆ, ಹೊರೆಯವರ ಸಹಾಯದಿಂದಾಗಿ ನಾವು ಬದುಕಿದಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಶಾಶ್ವತ ಪರಿಹಾರ ಕಲ್ಪಿಸಿಕೊಡಬೇಕು.
| ಶರಣಪ್ಪ ಕಟ್ಟೇಕಾರ, ಗುಂಡಿಯಲ್ಲಿ ಬಿದ್ದವರು