ಆಹಾರ ಇಲಾಖೆ ಜಂಟಿ ನಿರ್ದೇಶಕ ಮಂಟೇಸ್ವಾಮಿಗೆ ಜಿಲ್ಲಾಧಿಕಾರಿ ಸೂಚನೆ
ತುಮಕೂರು: ಪಡಿತರಧಾನ್ಯ ವಿತರಿಸಲು ನ್ಯಾಯಬೆಲೆ ಅಂಗಡಿಗಳು ಜಿಲ್ಲೆಯೆಲ್ಲೆಡೆ ಪ್ರತಿದಿನ ಬೆಳಗ್ಗೆ 6ರಿಂದಲೇ ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್ ಆಹಾರ ಇಲಾಖೆ ಜಂಟಿ ನಿರ್ದೇಶಕ ಮಂಟೇಸ್ವಾಮಿಗೆ ಸೂಚನೆ ನೀಡಿದ್ದಾರೆ.
ಪಾವಗಡ ಪಟ್ಟಣದ ನ್ಯಾಯಬೆಲೆ ಅಂಗಡಿಗೆ ಭಾನುವಾರ ಬೆಳಗ್ಗೆ ಭೇಟಿ ನೀಡಿದ ಜಿಲ್ಲಾಧಿಕಾರಿ, ಕುಟುಂಬದ ಪ್ರತಿ ಸದಸ್ಯರಿಗೆ 15 ಕೆಜಿ ಅಕ್ಕಿ ಸಮರ್ಪಕ ವಿತರಣೆ ಬಗ್ಗೆ ಪರಿಶೀಲಿಸಿದರು. ಗಂಟೆಗಟ್ಟಲೆ ಬಿಸಿಲಿನಲ್ಲಿ ಕಾಯದೆ ಫಲಾನುಭವಿಗಳಿಗೆ ಅನುಕೂಲವಾಗುವಂತೆ ಎಲ್ಲ ನ್ಯಾಯಬೆಲೆ ಅಂಗಡಿಗಳನ್ನು ನಿಗದಿತ ಸಮಯಕ್ಕಿಂತ ಒಂದು ಗಂಟೆ ಮುಂಚಿತವಾಗಿ ತೆರೆಯುವ ವ್ಯವಸ್ಥೆ ಮಾಡಬೇಕು ಎಂದರು.
ಪಡಿತರ ಧಾನ್ಯ ಪಡೆಯಲು ನ್ಯಾಯಬೆಲೆ ಅಂಗಡಿ ಮುಂದೆ ಸಾಲು ಗಟ್ಟಿ ನಿಂತಿದ್ದ ಪಡಿತರ ಧಾನ್ಯದ ಗುಣಮಟ್ಟ ಹಾಗೂ ಕ್ರಮವಾಗಿ ವಿತರಿಸುತ್ತಿರುವ ಬಗ್ಗೆ ಫಲಾನುಭವಿಗಳಿಂದ ಮಾಹಿತಿ ಪಡೆದರು.
ನಾಗಲಮಡಿಕೆ ಕ್ರಾಸ್ ಬಳಿ ಭೇಟಿ ನೀಡಿ ತುಂಗಭದ್ರಾ ಕುಡಿಯುವ ನೀರಿನ ಯೋಜನೆಯಡಿ ಪಟ್ಟಣ ಪ್ರದೇಶದಲ್ಲಿ ಪ್ರಾಯೋಗಿಕ ನೀರು ಸರಬರಾಜಾಗುತ್ತಿರುವ ಬಗ್ಗೆ ಸ್ಥಳ ಪರಿಶೀಲನೆ ಮಾಡಿದರು. ನೀರು ಸರಬರಾಜು ಮಾಡುವ ಪೈಪ್ಲೈನ್ನಲ್ಲಿ ಸೋರಿಕೆಯನ್ನು ಕಂಡ ಅವರು, ಸಂಬಂಧಿಸಿದ ಅಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರಲ್ಲದೆ, ಪೈಪ್ಲೈನ್ ಒಡೆದು ಹಾಕಿರುವವರಿಗೆ ತಕ್ಷಣವೇ ನೋಟಿಸ್ ನೀಡಬೇಕು ಎಂದು ಸೂಚಿಸಿದರು.ಜನತೆಗೆ ಶುದ್ಧ ಕುಡಿಯುವ ನೀರು ಮನೆ ಮನೆಗೆ ಪೂರೈಕೆ ಮಾಡುವ ನಿಟ್ಟಿನಲ್ಲಿ ತುಂಗಭದ್ರಾ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು ಎಂದು ಸೂಚಿಸಿ, ನಂತರ ನಾಗಲಮಡಿಕೆ ಗ್ರಾಮದಲ್ಲಿ ಜೆಜೆಎಂ ಯೋಜನೆ ಹಾಗೂ ಪಿಎಂ ಆವಾಸ್ ವಸತಿ ಯೋಜನೆ ಕಾಮಗಾರಿ ಪ್ರಗತಿ ಪರಿಶೀಲಿಸಿದರು.
ತಿರುಮಣಿಯಲ್ಲಿರುವ ಸೌರಶಕ್ತಿ ಘಟಕಕ್ಕೆ ಭೇಟಿ ನೀಡಿ ಘಟಕದ ನಿರ್ವಹಣೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಶ್ರೀರಂಗಪುರ ತಾಂಡ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳ ಸಂಖ್ಯೆ, ಪೌಷ್ಟಿಕ ಆಹಾರ ವಿತರಣೆ, ಮೂಲ ಸೌಲಭ್ಯ ಕುರಿತು ಪರಿಶೀಲನೆ ನಡೆಸಿದರು. ಮಕ್ಕಳ ಕಲಿಕಾಸಕ್ತಿಯನ್ನು ವೃದ್ಧಿಸಲು ಅನುಪಯುಕ್ತ ವಸ್ತುಗಳಿಂದ ಆಕರ್ಷಕ ಮಕ್ಕಳ ಆಟಿಕೆ, ಕಲಿಕಾ ಸಾಮಗ್ರಿ ತಯಾರಿಸಿರುವ ಅಂಗನವಾಡಿ ಕಾರ್ಯಕರ್ತೆ ಸುಶೀಲಮ್ಮ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.ಮಧುಗಿರಿ ತಾಲೂಕು ಎಂ.ಬಸವನಹಳ್ಳಿ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ವೀಕ್ಷಿಸಿದ ಜಿಲ್ಲಾಧಿಕಾರಿ, ಚಿನಕವಜ್ರ ಗ್ರಾಮದಲ್ಲಿರುವ ಆಯುಷ್ಮಾನ್ ಆರೋಗ್ಯ ಮಂದಿರಕ್ಕೆ ಭೇಟಿ ಮಾಡಿ ಚಿಕಿತ್ಸಾ ವಿಧಾನಗಳನ್ನು ಗಮನಿಸಿದರು. ಸ್ವನಿಧಿ ಯೋಜನೆಯಡಿ ರಾಜ್ಯಮಟ್ಟದಿಂದ ಪ್ರಶಂಸೆ ದೊರೆತಿರುವ ಹಿನ್ನೆಲೆಯಲ್ಲಿ ಮಧುಗಿರಿಯ ಪುರಸಭೆಗೆ ಭೇಟಿ ನೀಡಿ ಅಧಿಕಾರಿ, ಸಿಬ್ಬಂದಿಗಳನ್ನು ಅಭಿನಂದಿಸಿದರು.
ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ, ತಹಸೀಲ್ದಾರ್ ಡಿ.ಎನ್ ವರದರಾಜು, ಶಿರಿನ್ ತಾಜ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಚೇತನ್ಕುಮಾರ್ ಹಾಗೂ ಕಾರ್ಯಕ್ರಮ ನಿರೂಪಣಾಧಿಕಾರಿ ದಿನೇಶ್, ಕಂದಾಯ ನಿರೀಕ್ಷಕ ಕಿರಣಕುಮಾರ್, ಸಿಡಿಪಿಒ ಸುನಿತಾ ಮತ್ತಿತರರು ಇದ್ದರು.