ಹನೂರು: ಪಟ್ಟಣದ ದೇವಾಂಗಪೇಟೆಯ ಹೊರವಲಯದಲ್ಲಿ 50 ಅಡಿ ಆಳದ ಬಾವಿಗೆ ಬಿದ್ದಿದ್ದ ಹಸುವನ್ನು ಅಗ್ನಿಶಾಮಕ ಸಿಬ್ಬಂದಿ ಗುರುವಾರ ಸುರಕ್ಷಿತವಾಗಿ ಮೇಲೆತ್ತಿ ರಕ್ಷಿಸಿದರು.
ಪಟ್ಟಣದ ಪವನ್ ಎಂಬುವರು ತಮ್ಮ ಜಮೀನಿನಲ್ಲಿ ಹಸುವನ್ನು ಮೇಯಲು ಬಿಟ್ಟಿದ್ದರು. ಈ ವೇಳೆ ನೀರಿದ್ದ 50 ಅಡಿ ಆಳದ ಬಾವಿಗೆ ಬಿದ್ದಿದೆ. ವಿಷಯ ತಿಳಿದ ಸ್ಥಳೀಯರು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡು ಹಸುವನ್ನು ಮೇಲೆತ್ತಿ ರಕ್ಷಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಪ್ರಶಾಂತ್ ನಾಯ್ಕ, ಸಿಬ್ಬಂದಿ ಪೆರಿಯನಾಯಗಂ, ಪ್ರವೀಣ್, ಆನಂದ್ಕುಮಾರ್, ಹರ್ಷನಾಯಕ, ಶೇಖರ್ ಹಾಗೂ ಅಶೋಕ್ ಭಾಗವಹಿಸಿದ್ದರು.