ವಿಜಯವಾಣಿ ಸುದ್ದಿಜಾಲ ಮಂಗಳೂರು
ಕೆಲಸ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಸಂಭವಿಸಿದ ಅನಾಹುತದಲ್ಲಿ ಮೇಲಿನಿಂದ ಕೆಳಗೆ ಬಿದ್ದ ಬಾಲಕನ ಕುತ್ತಿಗೆ ಮೂಲಕ ಕೊರಳಲ್ಲಿದ್ದ ಚೈನ್ ಜತೆಗೆ ಎದೆಯೊಳಗೆ ನುಗ್ಗಿದ ತೆಂಗಿನ ಮರದ ಕೊತ್ತಲಿಂಗೆ(ತುಳುವಿನಲ್ಲಿ ಬಳಸುವ ಪದ)ಯನ್ನು ಮಂಗಳೂರಿನ ಜಿಲ್ಲಾ ಸರ್ಕಾರಿ ವೆನ್ಲಾಕ್ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿ ಹೊರತೆಗೆದು ಗಮನಸೆಳೆದಿದ್ದಾರೆ.
ತೀರಾ ಅಪರೂಪದ ಪ್ರಕರಣದಲ್ಲಿ ಬಾಲಕನ ಜೀವ ಉಳಿಸಿದ ಆಸ್ಪತ್ರೆ ವೈದ್ಯರು ಸಾರ್ವತ್ರಿಕ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅಸ್ಸಾಂ ಮೂಲದ ಈ ಬಾಲಕನ ಪಾಲಕರು ಮಡಿಕೇರಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಶನಿವಾರ ರಾತ್ರಿ 7.30ಕ್ಕೆ ಯಾವುದೋ ಕೆಲಸ ಮಾಡುತ್ತಿದ್ದ ವೇಳೆ ಬಾಲಕ ಬಿದ್ದ ರಭಸಕ್ಕೆ ಕೊತ್ತಲಿಂಗೆ ಅಲ್ಲಲ್ಲಿ ಬ್ಲೇಡ್ ರೀತಿಯ ರಚನೆಗಳಿರುವ ಸ್ಟೀಲ್ ಚೈನ್ ಸಮೇತ ಕುತ್ತಿಗೆಯ ಮೂಲಕ ಎದೆಗೂಡು ಪ್ರವೇಶಿಸಿತ್ತು.
ಸಾಮಾನ್ಯವಾಗಿ ಇಂತಹ ಶಸ್ತ್ರಚಿಕಿತ್ಸೆಗಳು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ನಡೆಯುತ್ತವೆ. ಆದರೆ ಅಗತ್ಯ ಮೂಲಸೌಕರ್ಯ, ವೈದ್ಯರ ಸೇವಾ ಮನೋಭಾವದ ತಂಡ ಇದ್ದರೆ ಸರ್ಕಾರಿ ಆಸ್ಪತ್ರೆಯಲ್ಲೂ ಇಂಥ ಕ್ಲಿಷ್ಟಕರ ಸನ್ನಿವೇಶಗಳನ್ನು ಯಶಸ್ವಿಯಾಗಿ ನಿರ್ವಹಿಸಬಹುದು ಎನ್ನುವುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ.
ರಾತ್ರೋರಾತ್ರಿ ಶಸ್ತ್ರಚಿಕಿತ್ಸೆಗೆ ಸಿದ್ಧವಾದ ಆಸ್ಪತ್ರೆಯ ಕಾರ್ಡಿಯೋಥೊರಾಸಿಕ್ ಮತ್ತು ವ್ಯಾಸ್ಕುೃಲರ್ ಸರ್ಜರಿ(ಸಿಟಿವಿಎಸ್) ವಿಭಾಗದ ಸಂಪೂರ್ಣ ತಂಡವು ಡಾ.ಸುರೇಶ್ ಪೈ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ಆಪರೇಶನ್ ನಡೆಸಿ ಕೊತ್ತಲಿಂಗೆ ತುಂಡು ಹಾಗೂ ಸ್ಟೀಲ್ ಚೈನ್ ಹೊರತೆಗೆಯಿತು. ಇದೀಗ ಬಾಲಕ ಚೇತರಿಸಿಕೊಂಡಿದ್ದಾನೆ.
ಬಾಲಕನು ಅಪಾಯದಿಂದ ಪಾರಾಗಿದ್ದಾನೆ. ಸೋಂಕು ತಡೆಯುವುದನ್ನು ತಪ್ಪಿಸಲು ಹಾಗೂ ಅಗತ್ಯ ಮುನ್ನೆಚ್ಚರಿಕೆ ಅಗತ್ಯ ಔಷಧ ಆಸ್ಪತ್ರೆಯಲ್ಲಿ ಸಂಗ್ರಹವಿದೆ ಎಂದು ಆಸ್ಪತ್ರೆ ಡಿಎಂಒ ಡಾ.ಶಿವಪ್ರಕಾಶ್ ಪ್ರತಿಕ್ರಿಯಿಸಿದ್ದಾರೆ.
