ಕಾರವಾರ: ಜಿಲ್ಲೆಯ 6 ಜನರಿಗೆ ಕರೊನಾ ಇರುವುದು ಸೋಮವಾರ ದೃಢಪಟ್ಟಿದೆ. ಅದರಲ್ಲಿ ಬೆಂಗಳೂರಿಗೆ ಹೋಗಿ ಬಂದ ಸರ್ಕಾರಿ ಸಾರಿಗೆ ಸಂಸ್ಥೆ ಬಸ್ ನಿರ್ವಾಹಕನೂ ಇರುವುದು ಯಲ್ಲಾಪುರದಲ್ಲಿ ಆತಂಕಕ್ಕೆ ಕಾರಣವಾಗಿದೆ.
ಜೂ.11ರಂದು ಯಲ್ಲಾಪುರದಿಂದ ಬೆಂಗಳೂರಿಗೆ ಪ್ರಯಾಣಿಕರನ್ನು ಕರೆದೊಯ್ದು, ಜೂ.13ಕ್ಕೆ ವಾಪಸ್ಸಾಗಿದ್ದ 25 ವರ್ಷದ ನಿರ್ವಾಹಕನಿಗೆ ಸೋಂಕಿನ ಲಕ್ಷಣ ಕಂಡು ಬಂದಿತ್ತು. ಹೀಗಾಗಿ ಅವರನ್ನು ಕ್ವಾರಂಟೈನ್ ಮಾಡಲಾಗಿತ್ತು.
ಜೂ.16ಕ್ಕೆ ತಾಲೂಕು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದ ಅವರ ಗಂಟಲ ದ್ರವವನ್ನು ಜೂ.18ರಂದು ಪಡೆದು ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರ ವರದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ.
ಯಲ್ಲಾಪುರ ಪಟ್ಟಣದಲ್ಲಿ ಬಾಡಿಗೆ ರೂಮ್ ಮಾಡಿಕೊಂಡಿದ್ದು, ಆರು ಜನ ಸಹೋದ್ಯೋಗಿಗಳು ಇವರೊಂದಿಗೆ ಇರುತ್ತಿದ್ದರು. ಸದ್ಯ ನಿರ್ವಾಹಕನ ಪ್ರಾಥಮಿಕ ಸಂಪರ್ಕಕ್ಕೆ ಬಂದ ಈ ಆರೂ ಜನರನ್ನು ಕ್ವಾರಂಟೈನ್ ಮಾಡಿ ಗಂಟಲ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗುತ್ತಿದೆ. ಇನ್ನೆಷ್ಟು ಮಂದಿ ಸಂಪರ್ಕಕ್ಕೆ ಬಂದಿದ್ದಾರೆನ್ನುವ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಯಲ್ಲಾಪುರ ಘಟಕದ ಎಲ್ಲ ಸಿಬ್ಬಂದಿಯನ್ನೂ ತಪಾಸಣೆಗೆ ಒಳಪಡಿಸಲಾಗುತ್ತಿದೆ. ನಿರ್ವಾಹಕ ಇದ್ದ ಕೆಎ-31 ಎಫ್ 1577 ಸಾರಿಗೆ ಬಸ್ ನಲ್ಲಿ ಪ್ರಯಾಣಿಸಿದವರು ಯಾರಾದರೂ ಇದ್ದಲ್ಲಿ ತಾಲೂಕು ಆಡಳಿತ, ಜಿಲ್ಲಾಡಳಿತ ಅಥವಾ ಪೊಲೀಸ್ ಠಾಣೆಗೆ ವರದಿ ಮಾಡಿಕೊಳ್ಳುವಂತೆ ಕೋರಲಾಗಿದೆ.
ಮಹಾರಾಷ್ಟದ ಮೂಲ: ಕರೊನಾ ದೃಢಪಟ್ಟ ಇನ್ನು 5 ಜನರು ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. ಸಿದ್ದಾಪುರದ ಶಿರಳಗಿಯ 50 ವರ್ಷದ ವ್ಯಕ್ತಿ, ಹೊನ್ನಾವರ ಕಾಸರಕೋಡು ಹಿರೇಮಠದ 60 ವರ್ಷದ ವೃದ್ಧೆ, ಭಟ್ಕಳ ಸಾಗರ ರಸ್ತೆಯ 75 ವರ್ಷದ ವೃದ್ಧ, ಜೊಯಿಡಾ ಜಗಲಬೇಟದ 19 ವರ್ಷದ ಯುವತಿ, ಯಲ್ಲಾಪುರದ ಕೋಳಿಕೇರಿ ದೇಶಪಾಂಡೆನಗರದ 13 ವರ್ಷದ ಬಾಲಕನಿಗೆ ರೋಗ ಇರುವುದು ಖಚಿತವಾಗಿದೆ.
ಕ್ವಾರಂಟೈನ್ ನಿಯಮ ಉಲ್ಲಂಘಿಸಿದರೆ ಶಿಕ್ಷೆಯ ಎಚ್ಚರಿಕೆ
ಸರ್ಕಾರವು ಕೋವಿಡ್- 19 ಸಂಬಂಧ ಸೂಚಿಸಿರುವ ನಿಯಮಗಳನ್ನು ಪಾಲಿಸದೇ ಕ್ವಾರಂಟೈನ್ ನಿಯಮ ಉಲ್ಲಂಘಿಸಿದರೆ ಶಿಕ್ಷೆ ಅನಿವಾರ್ಯ ಎಂದು ಕಾರವಾರದ ತಹಸೀಲ್ದಾರ್ ಆರ್.ವಿ. ಕಟ್ಟಿ ಮತ್ತು ಶಿರಸಿಯ ಎಂ.ಆರ್. ಕುಲಕರ್ಣಿ ಎಚ್ಚರಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ಮಹಾರಾಷ್ಟ್ರದಿಂದ ಶಿರಸಿಗೆ ಬರುವ ಸಾರ್ವಜನಿಕರು ಕಡ್ಡಾಯವಾಗಿ ಕಲ್ಲಿ ಶಾಲೆಯ ಸಾಂಸ್ಥಿಕ ಕ್ವಾರಂಟೈನ್ದಲ್ಲಿ ಏಳು ದಿನ ಮತ್ತು ಹೋಂ ಕ್ವಾರಂಟೈನ್ನಲ್ಲಿ ಏಳು ದಿನಗಳ ಕಾಲ ಇರಬೇಕು. ಇವೆರಡೂ ನಿಯಮ ಪಾಲಿಸಬೇಕು. ಇದನ್ನು ಉಲ್ಲಂಘಿಸಿದರೆ ಅವರ ವಿರುದ್ಧ ಪ್ರಕರಣ ದಾಖಲಿಸಿ ಶಿಕ್ಷೆ ವಿಧಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
6 ಜನರ ಬಿಡುಗಡೆ
ಕಾರವಾರದ 64 ವರ್ಷದ ಮಹಿಳೆ, ಹಳಿಯಾಳದ 34 ವರ್ಷದ ಮಹಿಳೆ ಹಾಗೂ ಹೊನ್ನಾವರದ 10 ವರ್ಷದ ಬಾಲಕ, 65 ಹಾಗೂ 61 ವರ್ಷದ ಇಬ್ಬರು ವೃದ್ಧೆಯರು, 35 ವರ್ಷದ ಮಹಿಳೆ ಕರೊನಾದಿಂದ ಗುಣ ಹೊಂದಿದ್ದು, ಎಲ್ಲರನ್ನೂ ಕ್ರಿಮ್್ಸ ಆಸ್ಪತ್ರೆಯಿಂದ ಡಿಎಚ್ಒ ಡಾ. ಶರದ್ ನಾಯಕ, ಕ್ರಿಮ್್ಸ ನಿರ್ದೇಶಕ ಡಾ.ಗಜಾನನ ನಾಯಕ, ಶಿವಾನಂದ ಕುಡ್ತಲಕರ್ ಅಭಿನಂದಿಸಿ ಬಿಡುಗಡೆ ಮಾಡಿದ್ದಾರೆ.