ನಾಡೋಜ ಬರಗೂರು ರಾಮಚಂದ್ರಪ್ಪ ಬೇಸರ, ನೀಲಾಂಬಿಕೆ ನಾಟಕ ಪ್ರದರ್ಶನ
ತುಮಕೂರು: ರಾಜಕಾರಣಿಗಳ ಒತ್ತಡದಿಂದ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಆರಂಭವಾಗಿರುವ ಬಹುತೇಕ ಮಹನೀಯರ ಹೆಸರಿನ ಅಧ್ಯಯನ ಪೀಠಗಳು ಅನುದಾನದ ಕೊರತೆಯಿಂದ ಅಧ್ಯಯನ ಪೀಠದ ಬದಲಾಗಿ ಬಡ್ಡಿ ಪೀಠಗಳಾಗಿ ಬದಲಾಗುತ್ತಿವೆ ಎಂದು ನಾಡೋಜ ಬರಗೂರು ರಾಮಚಂದ್ರಪ್ಪ ಬೇಸರಿಸಿದರು.
ನಗರದ ಕನ್ನಡ ಭವನದಲ್ಲಿ ಶೈನಾ ಅಧ್ಯಯನ ಸಂಸ್ಥೆ, ಜಿಲ್ಲಾ ಕಸಾಪ, ಡಮರುಗ ರಂಗ ಸಂಪನ್ಮೂಲ ಕೇಂದ್ರ ವತಿಯಿಂದ ಬಿ.ಸಿ.ಶೈಲಾನಾಗರಾಜು ರಚಿಸಿರುವ ನೀಲಾಂಬಿಕೆ ನಾಟಕ ಪ್ರದರ್ಶನ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು.
ವಿಶ್ವವಿದ್ಯಾಲಯಗಳಲ್ಲಿ ಸ್ಥಾಪಿಸಲಾಗುವ ಅಧ್ಯಯನ ಪೀಠಗಳಿಗೆ ಸರ್ಕಾರ ಕನಿಷ್ಠ 2 ಕೋಟಿ ರೂಪಾಯಿ ಠೇವಣಿ ಇಟ್ಟು ಅದರಿಂದ ಬರುವ ಅದಾಯದಲ್ಲಿ ಒಂದಷ್ಟು ಚಟುವಟಿಕೆಗಳನ್ನು ಮಾಡಲು ಸಾಧ್ಯವಾಗುತ್ತದೆ. ಇಲ್ಲವೆಂದರೆ ಹೆಸರಿಗಷ್ಟೇ ಅಧ್ಯಯನ ಕೇಂದ್ರವಾಗಿ, ಉಪಯೋಗಕ್ಕೆ ಬಾರದಂತಾಗುತ್ತೇವೆ. ಸರ್ಕಾರಗಳು ನೈತಿಕವಾಗಿ, ಅರ್ಥಿಕವಾಗಿ ವಿವಿಗಳನ್ನು ಬಲಪಡಿಸಬೇಕಾಗಿದೆ ಎಂದರು.
ಮೈಸೂರು ವಿವಿ ಬಸವ ಅಧ್ಯಯನ ಪೀಠದ ಸಂದರ್ಶಕ ಪ್ರಾಧ್ಯಾಪಕನಾಗಿದ್ದಾಗ ಅಜ್ಞಾತದಲ್ಲಿದ್ದ ಅನೇಕ ವಚನಕಾರ್ತಿಯರನ್ನು ಬೆಳಕಿಗೆ ತರುವ ನಿಟ್ಟಿನಲ್ಲಿ ವಚನ ಚಿಂತನಮಾಲೆ ಎಂಬ ಹೆಸರಿನಲ್ಲಿ ಸುಮಾರು 31 ಪುಸ್ತಕ ಹೊರತಂದಿದ್ದು, ಅದರಲ್ಲಿ ಬಿ.ಸಿ.ಶೈಲಾ ಬರೆದಿರುವ ನೀಲಾಂಬಿಕೆಯೂ ಒಂದು. ಅದು ಇಂದು ತುಮಕೂರು ವಿವಿ ಪಠ್ಯವಿಷಯವಾಗಿರುವುದು ಸಂತೋಷದ ವಿಷಯ ಎಂದರು. ಅಜ್ಞಾತವಾಗಿದ್ದುಕೊಂಡೇ ಅನೇಕರು ಕಾಯಕದ ಮೂಲಕವೇ ಅಗಾಧವಾದ ಸಾಹಿತ್ಯ ರಚಿಸಿದ್ದಾರೆ. ಅಂತಹವರನ್ನು ಬೆಳಕಿಗೆ ತರುವ ಕೆಲಸ ವಿಶ್ವವಿದ್ಯಾಲಯಗಳು ಮಾಡಬೇಕು. ಅದೇ ನಿಜವಾದ ಸಂಶೋಧನೆ. ಆ ಮೂಲಕ ಜನರಿಗೆ ಹೊಸತನ್ನು ನೀಡುವ ಕೆಲಸ ವಿವಿಗಳಿಂದ ಆಗಬೇಕು ಎಂದರು.
ಅನುದಾನದ ಕೊರತೆಯಿಂದ ವಿಶ್ವವಿದ್ಯಾಲಯಗಳ ಅಧ್ಯಯನ, ಅಧ್ಯಾಪನ ಹಾಗೂ ಸಂಶೋಧನೆಗಳು ಕುಂಠಿತವಾಗಿವೆ. ತಂತ್ರಜ್ಞಾನಕ್ಕೆ ಸಿಗುತ್ತಿರುವ ಅತಿಯಾದ ಮಹತ್ವದಿಂದ ಮೂಲ ವಿಜ್ಞಾನವೂ ಸೇರಿದಂತೆ ಅನೇಕ ವಿಷಯಗಳ ಬೆಳವಣಿಗೆಗೆ ಹಿನ್ನೆಡೆಯಾಗಿದೆ. ಮೂಲ ವಿಜ್ಞಾನವಾದ ಬಿಎಸ್ಸಿಗೆ ಸೇರುವವರ ಸಂಖ್ಯೆಯೇ ಕ್ಷೀಣಿಸುತ್ತಿದೆ. ಪಠಾಣ್ ವರದಿಯ ಪ್ರಕಾರ ಒಂದು ಸುಸಜ್ಜಿತ ವಿಶ್ವವಿದ್ಯಾಲಯ ಆಗಬೇಕೆಂದರೆ ಕನಿಷ್ಠ 200ರಿಂದ -300 ಕೋಟಿ ರೂ. ಅಗತ್ಯವಿದೆ. ಸರ್ಕಾರ ಶಿಕ್ಷಣವನ್ನು ಅದ್ಯತೆಯ ವಿಷಯವಾಗಿ ಪರಿಗಣಿಸಬೇಕು. ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ, ಅಧ್ಯಾಪನ, ಸಂಶೋಧನೆಗೆ ಒತ್ತ ನೀಡಿ, ವಿವಿಗಳು ವಿವಾದದ ಕೇಂದ್ರಗಳಾಗುವುದನ್ನು ತಡೆಯಬೇಕು ಎಂದರು.
ಶರಣ ಚಳವಳಿಯಲ್ಲಿ ವೇಳೆ ಅನೇಕ ಮಹಿಳಾ ಲೇಖಕಿಯರನ್ನು ಕಾಣಬಹುದು.ಆ ನಂತರದ ದಿನಗಳಲ್ಲಿ ಮಹಿಳಾ ಲೇಖಕಿಯರು ಏಕೇ ಬರೆಯಲಿಲ್ಲ. ಇದರ ಹಿಂದಿನ ಕಾರಣಗಳೇನು ಎಂಬ ಬಗ್ಗೆ ಸಂಶೋಧನೆಗಳು ನಡೆದರೆ ಮಹಿಳಾ ಸಾಹಿತ್ಯದ ಬಗ್ಗೆ ಹೆಚ್ಚು ಬೆಳಕು ಚಲ್ಲಬಹುದು.ಆಜ್ಞಾತರ
ಅನಾವರಣವೇ ನಿಜವಾದ ವಿಕಾಸ ಎಂಂದರು.
ತುಮಕೂರು ವಿವಿ ಡಿವಿಜಿ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಡಾ.ನಿತ್ಯಾನಂದ ಬಿ.ಶೆಟ್ಟಿ ಮಾತನಾಡಿ, ನೀಲಾಂಭಿಕೆ ನಾಟಕದ ರಂಗರೂಪ ಬಂದಿರುವುದು ಸಂತೋಷದ ವಿಚಾರ.ಇದು ಕಥೆಯ ಮರುಹುಟ್ಟು, ಇದು ಮತ್ತಷ್ಟು ಬೆಳೆಯಬೇಕೆಂದರೆ ರಂಗರೂಪವನ್ನು ಸಿಡಿ ರೂಪದಲ್ಲಿ ಚಿತ್ರೀಕರಿಸಿ, ಸಾಮಾಜಿಕ ಮಾಧ್ಯಮಗಳಲ್ಲಿ ಬಿತ್ತರಿಸುವ ಮೂಲಕ ವಿಸ್ತರಿಸುವ ಕೆಲಸ ಆಗಬೇಕು ಎಂದರು.
ಲೇಖಕಿ ಬಿ.ಸಿ.ಶೈಲಾನಾಗರಾಜು, ಡಾ.ಬರಗೂರು ರಾಮಚಂದ್ರಪ್ಪ ಮೈಸೂರು ವಿವಿ ಬಸವ ಅಧ್ಯಯನ ಕೇಂದ್ರದ ಸಂದರ್ಶನ ಪ್ರಾಧ್ಯಾಪಕರಾಗಿದ್ದಾಗ ಹೊರತಂದಿರುವ ವಚನಚಿಂತನಮಾಲೆ ವೇಳೆ ನೀಲಾಂಬಿಕೆ ಎರಡು ಪುಸ್ತಕಗಳನ್ನು ನನ್ನಿಂದ ಬರೆಸಿದ್ದಾರೆ. ನನ್ನಂತಹ ಅನೇಕರನ್ನು ಸಾಹಿತ್ಯಿಕವಾಗಿ ಬೆಳೆಸುವ ಮೂಲಕ ತಾವು ಬೆಳೆದಿದ್ದಾರೆ ಎಂದರು.
ಮೇಳೆಹಳ್ಳಿ ಡಮರುಗ ರಂಗಸಂಪನ್ಮೂಲ ಕೇಂದ್ರದ ದೇವರಾಜು ನಿರ್ದೇಶನದಲ್ಲಿ ನೀಲಾಂಬಿಕೆ ನಾಟಕ ಪ್ರದರ್ಶಿಸಲಾಯಿತು. ಸಾಹಿತಿ ಡಾ.ಡಿ.ಎನ್.ಯೋಗೀಶ್ವರಪ್ಪ, ಡಮರುಗ ರಂಗಸಂಪನ್ಮೂಲ ಕೇಂದ್ರದ ಮೇಳೆಹಳ್ಳಿ ದೇವರಾಜು ಮತ್ತಿತರರು ಇದ್ದರು.