ತುಮಕೂರು: ಹೆಂಡತಿ ಬಿಟ್ಟು ಪ್ರೇಯಸಿಯ ಜತೆ ಇದ್ದವನನ್ನು ನೆಲಮಂಗಲದಲ್ಲಿ ಅಪಹರಿಸಿ ಕೊಲೆಗೈದು ಬಳಿಕ ತುಮಕೂರಿನಲ್ಲಿ ಮೃತದೇಹ ಬಿಸಾಕಿರುವ ಪ್ರಕರಣ ಬೆಳಕಿಗೆ ಬಂದಿದೆ. ನಗರದ ಜಯಪುರದ ಬಳಿ ಸೋಮವಾರ ಬೆಳ್ಳಂಬೆಳಗ್ಗೆ ರಕ್ತ ಸಿಕ್ತ ಸ್ಥಿತಿಯಲ್ಲಿದ್ದ ಮೃತದೇಹ ಪತ್ತೆಯಾಗಿದ್ದು ಸಹಜವಾಗಿ ನಗರದಲ್ಲಿ ಆತಂಕ ಮನೆಮಾಡುವಂತೆ ಮಾಡಿತ್ತು. ತಕ್ಷಣವೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಮೃತದೇಹದ ಪತ್ತೆಗೆ ಮುಂದಾದ ಪೊಲೀಸರು ಕೆಲವೇ ಗಂಟೆಗಳಲ್ಲಿ ಕೊಲೆಯಾಗಿರುವ ವ್ಯಕ್ತಿ ಯಾರೆಂಬುದನ್ನು ಪತ್ತೆ ಹಚ್ಚಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಸೋಲೂರು ಬಳಿಯ ಕೂಡ್ಲೂರು ನಿವಾಸಿ ದಿಲೀಪ್ (35) ಕೊಲೆಗೀಡಾಗಿರುವ ವ್ಯಕ್ತಿ ಎನ್ನಲಾಗಿದೆ. ಈತ ಎರಡು ಮದುವೆ ಆಗಿದ್ದು, ಮೊದಲನೆ ಹೆಂಡತಿ ಜತೆಯಲ್ಲಿ ಇಲ್ಲ. ಕಳೆದ 4 ವರ್ಷದ ಹಿಂದೆ ಜಯಪುರದ ವಿವಾಹಿತೆ ಅಮೃತ ಎಂಬವರನ್ನು ಪ್ರೀತಿಸುವ ನೆಪದಲ್ಲಿ ಕರೆದೊಯ್ಯದಿದ್ದ ದಿಲೀಪ, ಆಕೆಯ ಜತೆ ಅನಧಿಕೃತವಾಗಿ ಸಂಸಾರ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ.
ಭಾನುವಾರ ರಾತ್ರಿ ಅಪಹರಣ!: ಭಾನುವಾರ ರಾತ್ರಿ 8.30ರ ಸಮಯದಲ್ಲಿ ನೆಲಮಂಗಲ ಹೋಟೆಲ್ನಲ್ಲಿ ಅಮೃತ ಜತೆ ಊಟಕ್ಕೆ ತೆರಳಿದ್ದ ದಿಲೀಪ್ನನ್ನು ಸುತ್ತುವರೆದಿದ್ದ ದುಷ್ಕರ್ಮಿಗಳು ಹೋಟೆಲ್ ಹೊರಗಡೆ ಹಲ್ಲೆ ನಡೆಸಿದ್ದಲ್ಲದೆ, ಅಪಹರಿಸಿದ್ದರು. ಈ ಬಗ್ಗೆ ಅಮೃತಾ ನೆಲಮಂಗಲ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸೋಮವಾರ ಬೆಳಗ್ಗೆ ದಿಲೀಪ್ ಶವವಾಗಿ ಪತ್ತೆಯಾಗಿದ್ದ. ಜಿಲ್ಲಾ ಆಸ್ಪತ್ರೆಯ ಶವಗಾರದಲ್ಲಿ ಮೃತದೇಹ ಇಡಲಾಗಿತ್ತು. ನೆಲಮಂಗಲ ಠಾಣೆಗೆ ಪ್ರಕರಣ ವರ್ಗಾವಣೆಗೊಂಡಿದೆ. ಅಮೃತಾ ದೂರಿನ ಹಿನ್ನೆಲೆಯಲ್ಲಿ ಆರೋಪಿಗಳ ಪತ್ತೆಗೆ ಪೊಲೀಸರು ಬಲೆಬೀಸಿದ್ದಾರೆ.
