ಸಿರಿಗೇರಿ: ಗ್ರಾಮದ ಬಸ್ ನಿಲ್ದಾಣದ ಹತ್ತಿರ ಇರುವ ಊರು ಕೆರೆಯನ್ನು ಅಭಿವೃದ್ಧಿಪಡಿಸಬೇಕು ಮತ್ತು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಬೇಕೆಂದು ಆಗ್ರಹಿಸಿ ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ಶರಣಪ್ಪ ಸಂಕನೂರ್ಗೆ ಗ್ರಾಪಂ ಸದಸ್ಯರು ಮತ್ತು ವಿವಿಧ ಸಂಘಟನೆಗಳ ಪ್ರಮುಖರು ಬುಧವಾರ ಮನವಿ ಸಲ್ಲಿಸಿದರು.


ಊರ ಕೆರೆ ಗಿಡಗಳು ಬೆಳೆದು ಮಾರಕ ಕ್ರಿಮಿ ಕೀಟಗಳು ವಾಸಿಸುವ ತಾಣವಾಗಿದೆ. ಸೊಳ್ಳೆಗಳ ಉತ್ಪತ್ತಿಯಿಂದ ರೋಗಗಳು ಹರಡುತ್ತಿವೆ. ಕೆರೆ ಬದಿಯ ನಿವಾಸಿಗಳಿಗೆ ಹಾವು, ಚೇಳು ಹಾಗೂ ಇತರ ಕ್ರಿಮಿಕೀಟಗಳ ಭಯ ಕಾಡುತ್ತಿದೆ. ಗ್ರಾಮ 16 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದು, ಸುತ್ತಮುತ್ತಲಿನ ಗ್ರಾಮಗಳು 50 ಸಾವಿರ ಮೇಲ್ಪಟ್ಟು ಜನಸಂಖ್ಯೆಗೆ ಅವಶ್ಯವಿರುವ ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕೆಂದು ಆಗ್ರಹಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 4ರಿಂದ 5 ಸಿಬ್ಬಂದಿ ಇದ್ದು ರೋಗಿಗಳಿಗೆ ಅರೆಬರೆ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತ, ಅನಾರೋಗ್ಯ, ಹೆರಿಗೆ, ನವಜಾತ ಶಿಶುಗಳ ಚಿಕಿತ್ಸೆಗಾಗಿ ದೂರದ ನಗರಗಳನ್ನು ಅವಲಂಬಿಸಬೇಕಿದೆ. ಕೂಡಲೇ ಈ ಸಮಸ್ಯೆಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು. ನಂತರ ಅಪರ ಜಿಲ್ಲಾ ಅಧಿಕಾರಿ ಹಾಗೂ ಆರೋಗ್ಯ ಅಧಿಕಾರಿಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಿದರು.