ನಾಯಕನಹಟ್ಟಿ: ವಿದ್ಯಾರ್ಥಿಗಳಿಗೆ ವಿಜ್ಞಾನದ ಪ್ರಾಯೋಗಗಳನ್ನು ಸುಲಭವಾಗಿ ಅರ್ಥಮಾಡಿಸಲು ಅಮೆರಿಕಾದ ಹಾರ್ವರ್ಡ್ ವಿವಿ ಸಹಯೋಗದಲ್ಲಿ ಶೀಘ್ರವೇ ಐಐಎಸ್ಸಿ ವಿಶೇಷ ಕಾರ್ಯಕ್ರಮ ರೂಪಿಸಲಿದೆ ಎಂದು ಐಐಐಎಸ್ಸಿ ಕೌಶಾಲಾಭಿವೃದ್ಧಿ ಕೇಂದ್ರದ ಸಂಚಾಲಕ ಡಾ.ಬಿ. ಸುಬ್ಬಾರೆಡ್ಡಿ ಹೇಳಿದರು.
ಸಮೀಪದ ಕುದಾಪುರ ಐಐಎಸ್ಸಿ ಕ್ಯಾಂಪಸ್ನಲ್ಲಿ ಮಂಗಳವಾರ ಪಂಜಾಬ್ ರಾಜ್ಯದ ಪ್ರೌಢಶಾಲಾ ಶಿಕ್ಷಕರಿಗೆ ಹಮ್ಮಿಕೊಂಡಿದ್ದ 10 ದಿನಗಳ ತರಬೇತಿ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಗ್ರಾಮೀಣ ಶಾಲೆಗಳಲ್ಲಿ ಪ್ರಯೋಗಶಾಲೆಗಳ ಕೊರತೆ ಇದೆ. ಇದರಿಂದ ವಿಜ್ಞಾನದ ವಿಷಯಗಳು ಸುಲಭವಾಗಿ ವಿದ್ಯಾರ್ಥಿಗಳಿಗೆ ಅರ್ಥವಾಗುತ್ತಿಲ್ಲ. ಇದನ್ನು ನಿವಾರಿಸಲು ಐಐಎಸ್ಸಿ ಅಮೆರಿಕಾದ ಹಾರ್ವರ್ಡ್ ವಿವಿ ಪ್ರಯೋಗಾಲಯ ವಿನಿಮಯ (ಲ್ಯಾಬ್ ಎಕ್ಸಚೆಂಚ್) ಕಾರ್ಯಕ್ರಮಕ್ಕೆ ಯೋಜಿಸಿದೆ ಎಂದು ತಿಳಿಸಿದರು.
ಹಾರ್ವರ್ಡ್ ವಿವಿಯ ಒಂದು ತಂಡ ಐಐಎಸ್ಸಿಯ ಉಪನ್ಯಾಸಕರು ಮತ್ತು ತಂತ್ರಜ್ಞರಿಗೆ ತರಬೇತಿ ನೀಡಲಿದೆ. ನಂತರ ಇಂತಹ ವೈಜ್ಞಾನಿಕ ತರಬೇತಿಯನ್ನು ಶಾಲಾ ಶಿಕ್ಷಕರಿಗೆ ತಲುಪಿಸುವ ಕಾರ್ಯಕ್ರಮ ಆರಂಭವಾಗಲಿದೆ ಎಂದರು.
ಮೊದಲ ಬಾರಿಗೆ ಪಂಜಾಬ್ ರಾಜ್ಯದ 120 ವಿಜ್ಞಾನ ಶಿಕ್ಷಕರ ತಂಡ ತರಬೇತಿಗೆ ಬಂದಿದೆ. ಆ ರಾಜ್ಯದ 3 ತಂಡಗಳು ಇಲ್ಲಿ ತರಬೇತಿ ಪಡೆಯಲಿವೆ. ಇದೇ ರೀತಿ ಉತ್ತರಾಖಂಡ, ಪಂಜಾಬ್, ಲಕ್ಷದ್ವೀಪ, ತಮಿಳುನಾಡು ರಾಜ್ಯಗಳ ಉಪನ್ಯಾಸಕರಿಗೆ ತರಬೇತಿ ನೀಡುವಂತೆ ಆಯಾ ರಾಜ್ಯಗಳು ಒಪ್ಪಿಗೆ ನೀಡಿವೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಶಿಕ್ಷಕರು ತರಬೇತಿ ಪಡೆಯುತ್ತಿರುವುದು ವಿಶೇಷ ಎಂದು ತಿಳಿಸಿದರು.
ಕುದಾಪುರದ ಐಐಎಸ್ಸಿಯಲ್ಲಿ 2009 ರಿಂದ ನಿರಂತರವಾಗಿ ತರಬೇತಿಗಳು ಜರುಗುತ್ತಿವೆ. ಸಂಸ್ಥೆಯು ಇಲ್ಲಿಯವರೆಗೆ ಸುಮಾರು 25 ಸಾವಿರ ಶಿಕ್ಷಕರಿಗೆ ತರಬೇತಿ ನೀಡಿದೆ. ಉತ್ತರಾಖಂಡ ರಾಜ್ಯದ ಬಿಎಸ್ಸಿ ಮತ್ತು ಎಂಎಸ್ಸಿ ಶಿಕ್ಷಕರಿಗೆ ಶೀಘ್ರದಲ್ಲೇ ತರಬೇತಿ ನೀಡಲಾಗುವುದು. ಈ ಕೇಂದ್ರದಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಮಟ್ಟದ ಸೈನ್ಸ್ ಒಲಂಪಿಯಾಡ್ನಲ್ಲಿ ಪ್ರಥಮ ಸ್ಥಾನ ಪಡೆದಿರುವುದು ಹೆಮ್ಮೆಯ ವಿಷಯ. ಇದರಲ್ಲಿ 58 ದೇಶಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು ಎಂದು ತಿಳಸಿದರು.
ಡಾ. ಆರ್. ರಾಘವೇಂದ್ರ, ಡಾ. ಕಿಶೋರ್ ಕುಮಾರ್, ಡಾ. ಕೆ. ಜುಗೇಶ್ವರ ಸಿಂಗ್, ತಾಂತ್ರಿಕ ಅಧಿಕಾರಿ ಹೇಮಂತ್ ಕುಮಾರ್ ಮತ್ತಿತರರಿದ್ದರು.