ಕಳಸ: ಕಳಸ ಮತ್ತು ಹೊರನಾಡಿನ ಸಂಪರ್ಕ ಸೇತುವೆಯಾಗಿರುವ ಹೆಬ್ಬಾಳೆ ಸೇತುವೆ ಕಾಮಗಾರಿ ವಿಳಂಬವಾಗಿರುವುದರಿಂದ ಪ್ರವಾಸಿಗರು ಮತ್ತು ಸ್ಥಳೀಯರು ನಿತ್ಯತೊಂದರೆ ಅನುಭವಿಸುವಂತಾಗಿದೆ. ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ಕಳಸದಿಂದ ಹೊರನಾಡಿಗೆ ಹಳುವಳ್ಳಿ-ದಾರಿಮನೆ ಮಾರ್ಗವಾಗಿ ವ್ಯವಸ್ಥೆ ಕಲ್ಪಿಸಲಾಗಿದೆ. ಅದರೆ ಈ ರಸ್ತೆ ಕಿರಿದಾಗಿರುವುದರಿಂದ ದಿನನಿತ್ಯ ರಸ್ತೆಯಲ್ಲಿ ಸಂಚರಿಸುವ ಪ್ರವಾಸಿಗರು, ಸ್ಥಳೀಯರು ಕಿರಿಕಿರಿ ಅನುಭವಿಸುವಂತಾಗಿದೆ.
ಕಳಸ-ಹೊರನಾಡಿನ ಸಂಪರ್ಕ ಸಾಧಿಸುವ ಹೆಬ್ಬಾಳೆ ಸೇತುವೆ ಕಾಮಗಾರಿ ಅಂತಿಮ ಹಂತ ತಲುಪಿದೆ. ಈ ಸೇತುವೆ ಕಾಮಗಾರಿ ನಡೆಸಲು 25ರವರೆಗೆ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಆದರೆ ಈ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವುದರಿಂದ ಇನ್ನು ಕೆಲವು ದಿನ ಈ ಸೇತುವೆ ವಾಹನ ಸಂಚಾರಕ್ಕೆ ಮುಕ್ತವಾಗುವ ಲಕ್ಷಣಗಳು ಕಾಣುತ್ತಿಲ್ಲ.
ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಿದ್ದರಿಂದ ಪರ್ಯಾಯ ಮಾರ್ಗವಾಗಿ ಹೊರನಾಡು ಮತ್ತು ಆ ಭಾಗದ ಹಲವು ಹಳ್ಳಿಗಳಿಗೆ ತೆರಳಲು ಹಳುವಳ್ಳಿ-ದಾರಿಮನೆ ಮಾರ್ಗವಾಗಿ ತಲುಪಲು ಅನುಮತಿ ನೀಡಲಾಗಿತ್ತು. ಆದರೆ ಈ ರಸ್ತೆ ಅತ್ಯಂತ ಕಿರಿದಾಗಿದ್ದು ಸಾಕಷ್ಟು ತಿರುವುಗಳು ಇರುವುದರಿಂದ ಪ್ರತಿನಿತ್ಯ ವಾಹನ ಅಪಘಾತಗಳು ಮತ್ತು ಟ್ರಾಫಿಕ್ಜಾಮ್ ಉಂಟಾಗಿ ರಸ್ತೆ ಮಧ್ಯದಲ್ಲಿ ಪ್ರವಾಸಿಗರ ನಡುವೆ ನಿತ್ಯ ಸಂಘರ್ಷ ನಡೆಯುತ್ತಿದೆ.
