ಬೇಲೂರು: ಪೌತಿಯಾದವರ ಕುಟುಂಬದ ಸದಸ್ಯರಿಗೆ, ಖಾತೆಯಾಗದಿರುವುದನ್ನು ಗಮನಿಸಿ ಸರ್ಕಾರವೇ ಪೌತಿ ಖಾತೆ ಆಂದೋಲನದ ಮೂಲಕ ಅನುಕೂಲ ಕಲ್ಪಿಸುತ್ತಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.
ಪಟ್ಟಣದ ಬಸ್ ನಿಲ್ದಾಣ ಮುಂಭಾಗದ ಡಾ.ಅಂಬೇಡ್ಕರ್ ಸಮುದಾಯ ಭವನದಲ್ಲಿ ಕಂದಾಯ ಇಲಾಖೆಯಿಂದ ಸೋಮವಾರ ಆಯೋಜಿಸಿದ್ದ ಪೌತಿ ಖಾತೆ ಆಂದೋಲನ ಹಾಗೂ ಗ್ರಾಮ ಆಡಳಿತ ಅಧಿಕಾರಿಗಳಿಗೆ ಲ್ಯಾಪ್ಟಾಪ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯಾರು ಪೌತಿಯಾಗಿರುತ್ತಾರೋ ಅವರ ಹೆಸರಿನಿಂದ ತಮ್ಮ ಜಮೀನು ಕುಟುಂಬದ ಸದಸ್ಯರ ಹೆಸರಿಗೆ ಖಾತೆಯಾಗಿರದಿದ್ದರೆ ಅಂತವರು ಅರ್ಜಿ ಸಲ್ಲಿಸಿದರೆ, ಅಧಿಕಾರಿಗಳು ಮನೆಗಳ ಸಮೀಪವೇ ಬಂದು ದಾಖಲೆಗಳನ್ನು ಪರಿಶೀಲಿಸಿ ಕುಟುಂಬದವರ ಹೆಸರಿಗೆ ಖಾತೆ ಮಾಡಿ ಕೊಡುತ್ತಾರೆ. ಆದ್ದರಿಂದ ಫಲಾನುಭವಿಗಳು ಅಧಿಕಾರಿಗಳೊಂದಿಗೆ ಸ್ಪಂದಿಸಿ ಕೆಲಸ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.
ಕಂದಾಯ ಇಲಾಖೆಯಲ್ಲಿ ಭೂ ದಾಖಲೆಗಳ ನಿರ್ವಹಣೆ ಸಂಬಂಧ ಸಾರ್ವಜನಿಕ ಸೇವೆಗಳನ್ನು ಪಾರದರ್ಶಕವಾಗಿಡಲು ಜತೆಗೆ ಎಲ್ಲ ಕಡತಗಳ ವಿಲೇವಾರಿಯೂ ಆನ್ಲೈನ್ ಮೂಲಕವಾದರೆ ಮತ್ತು ಕೆಲಸ ವಿಳಂಬವಾಗಬಾರದು. ದಾಖಲೆಗಳು ಕಳೆದು ಹೋಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಡಿಜಿಟಲೀಕರಣ ಮಾಡುವುದರಿಂದ ರೈತರಿಗೆ ಉತ್ತಮ ಸೇವೆ ನೀಡುವುದಕ್ಕೆ ಸಹಕಾರಿಯಾಗಲಿದೆ. ಇದರಿಂದ ದಾಖಲೆಗಳ ಅವಶ್ಯಕತೆ ಇದ್ದಾಗ ಸುಲಭವಾಗಿ ಪಡೆಯಬಹುದು. ರೈತರು ಕಚೇರಿಗೆ ಅಲೆಯುವುದು ತಪ್ಪುತ್ತದೆ. ಈ ಯೋಜನೆಯ ಅನುಷ್ಠಾನಕ್ಕಾಗಿ ಗ್ರಾಮ ಮಟ್ಟದಲ್ಲಿ ಕೆಲಸ ನಿರ್ವಹಿಸುವ ಅಧಿಕಾರಿಗಳಿಗೆ ಕಂಪ್ಯೂಟರ್ ಮತ್ತು ಸ್ಕ್ಯಾನರ್ ಒದಗಿಸುವುದರ ಜತೆಗೆ ನುರಿತ ಸಿಬ್ಬಂದಿ ನೇಮಿಸಲಾಗಿದೆ. ಇಲಾಖಾವಾರು ಅಧಿಕಾರಿಗಳೇ ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸಲಿದ್ದಾರೆ ಎಂದರು.
ಈಗ ಎಲ್ಲ ದಾಖಲೆಗಳು ಗಣಕೀಕೃತವಾಗುವುದರಿಂದ ಗ್ರಾಮ ಲೆಕ್ಕಾಧಿಕಾರಿ, ಕಂದಾಯ ಅಧಿಕಾರಿ ಹಾಗೂ ಇತರೆ ಅಧಿಕಾರಿಗಳು ದಾಖಲೆಗಳನ್ನು ಶೇಖರಿಸಲು ಅನುಕೂಲವಾಗಲೆಂದು ಅವರಿಗೆ ಕಂಪ್ಯೂಟರ್ ವಿತರಿಸುತ್ತಿದ್ದೇವೆ. ಹಳೇಬೀಡಿನ ಬಿದರಿಕೆರೆ ಉಳಿಸುವ ನಿಟ್ಟಿನಲ್ಲಿ ತಹಸೀಲ್ದಾರ್ ಮಮತಾ ಮತ್ತು ತಂಡ ಒತ್ತುವರಿ ತೆರವು ಮಾಡಿಸಿ ನೀರು ಸರಾಗವಾಗಿ ಕೆರೆಗೆ ಹೋಗುವಂತೆ ಮಾಡಿರುವುದು ಶ್ಲಾಘನೀಯ. ಕಳ್ಳರಿಗೆ ಹೆದರದೆ ನಿಮ್ಮ ಕೆಲಸವನ್ನು ಮಾಡಿ. ನಿಮ್ಮೊಂದಿಗೆ ನಾವಿದ್ದೇವೆ. ಗ್ರಾಮಸ್ಥರು ಸಹ ಎಲ್ಲೆಲ್ಲಿ ಸರ್ಕಾರಿ ಜಾಗ ಇದೆಯೋ ಅದನ್ನು ಅಧಿಕಾರಿಗಳ ಗಮನಕ್ಕೆ ತಂದರೆ ಅದನ್ನು ಉಳಿಸಿದರೆ ಅದು ಮುಂದಿನ ಪೀಳಿಗೆಗೆ ಅನುಕೂಲವಾಗುತ್ತದೆ ಎಂದರು.
ತಹಸೀಲ್ದಾರ್ ಎಂ.ಮಮತಾ ಮಾತನಾಡಿ, ನಮ್ಮ ಇಲಾಖೆ ಸಾರ್ವಜನಿಕರ, ರೈತರ ಪರವಾಗಿ ಉತ್ತಮ ಕೆಲಸ ನಿರ್ವಹಿಸುತ್ತಿದೆ. ಜತೆಗೆ ಬಗರ್ ಹುಕುಂ ಮೊದಲ ಹಂತದಿಂದ ಪ್ರತಿ ಹಂತಗಳಲ್ಲಿ ಸಭೆ ನಡೆಸುತ್ತಿರುವುದು ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ. ನಮ್ಮ ಸಿಬ್ಬಂದಿ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದಾರೆ. ಯಾವುದೇ ಕೆಲಸ ವಿಳಂಬವಾದಲ್ಲಿ, ರೈತರು, ಸಾರ್ವಜನಿಕರು ನೇರವಾಗಿ ಅಥವಾ ದೂರವಾಣಿ ಮೂಲಕ ದೂರು ಸಲ್ಲಿಸಿದರೆ ವಿಳಂಬ ಮಾಡಿದ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಇಲಾಖೆಯಿಂದ ಈಗಾಗಲೇ 269 ಜನರಿಗೆ ಪೌತಿ ಖಾತೆ ಮಾಡಲಾಗಿದ್ದು, 20 ಗ್ರಾಮ ಲೆಕ್ಕಾಧಿಕಾರಿಗಳಿಗೆ ಲ್ಯಾಪ್ಟಾಪ್ ವಿತರಿಸಲಾಗಿದೆ ಎಂದರು.
ಕಂದಾಯ ಇಲಾಖೆ ಅಧಿಕಾರಿಗಳಾದ ನಟರಾಜು, ಚಂದ್ರೇಗೌಡ, ಹನುಮಂತು, ಬಸಪ್ಪ ಇದ್ದರು.