ಕೆ.ಎಂ.ದೊಡ್ಡಿ: ಹಿಂದಿನ ಕಾಲದಲ್ಲಿ ರಾಜ ಮಹಾರಾಜರು ಕಟ್ಟಿದ ದೇವಾಲಯಗಳನ್ನು ಜೀರ್ಣೋದ್ಧಾರಗೊಳಿಸಿ ಉಳಿಸಿಕೊಳ್ಳಬೇಕಿದೆ ಎಂದು ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಲಹೆ ನೀಡಿದರು.
ಸಮೀಪದ ಕಾಡಕೊತ್ತನಹಳ್ಳಿ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಾಲಯದ ಬಾಗಿಲು ನಿರ್ಮಾಣ ಪೂಜಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ, ರಾಜಮಹಾರಾಜರು ಕಟ್ಟಿದ ದೇವಸ್ಥಾನಗಳನ್ನು ಉಳಿಸಿ, ದೇವಾಲಯ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬದಿಗಿಟ್ಟು ಗ್ರಾಮಸ್ಥರು ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.
ದೇವಾಲಯಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬ. ದೇವರು ಇಲ್ಲದೆ ಈ ಜಗತ್ತಿನಲ್ಲಿ ಏನು ನಡೆಯಲು ಸಾಧ್ಯವಿಲ್ಲ. ದೇವರು ನಂಬಿಕೆಯಾಗಿದ್ದು, ಜನತೆ ನ್ಯಾಯ ಸಮ್ಮತವಾಗಿ ನಡೆಯಬೇಕು ಎಂದರು.
ಪ್ಲಾಸ್ಟಿಕ್ ವಸ್ತುಗಳನ್ನು ಕಡ್ಡಾಯವಾಗಿ ದೇವಾಲಯದ ಒಳಗಾಗಲಿ, ಹೊರಗಾಗಲಿ ಬಳಕೆ ಮಾಡಬೇಡಿ. ಪ್ಲಾಸ್ಟಿಕ್ ನಿಷೇಧಿಸಲಾಗಿದೆ ಎಂದು ಬೋರ್ಡ್ ಅಳವಡಿಸಿ ಪರಿಸರ ಕಾಳಜಿಯತ್ತ ಗಮನಹರಿಸಿ ಎಂದು ದೇವಾಲಯ ಅಭಿವೃದ್ಧಿ ಸಮಿತಿ ಸದಸ್ಯರಿಗೆ ಸೂಚಿಸಿದರು.
ದೇವಾಲಯ ವಿಚಾರವಾಗಿ ಏನಾದರೂ ಸಹಾಯ ಬೇಕಾದರೆ ನನ್ನನ್ನು ಬಂದು ಅರಮನೆಯಲ್ಲಿ ಕಾಣಬಹುದು. ರಾಜರ ಕಾಲದ ದೇವಾಲಯಗಳನ್ನು ಉಳಿಸುವ ನಿಟ್ಟಿನಲ್ಲಿ ನನ್ನ ಕೈಲಾದ ಸಹಾಯ ಮಾಡುವುದಾಗಿ ತಿಳಿಸಿದರು.
ಈ ವೇಳೆ ಶ್ರೀ ವೀರಭದ್ರೇಶ್ವರ ದೇವಾಲಯ ಜೀರ್ಣೋದ್ಧಾರ ಸಮಿತಿ ವತಿಯಿಂದ ಯದುವೀರ ಅವರನ್ನು ಅಭಿನಂದಿಸಲಾಯಿತು. ಶ್ರೀ ವೀರಭದ್ರೇಶ್ವರ ದೇವಾಲಯ ಜೀರ್ಣೋದ್ಧಾರ ಸಮಿತಿ ಸದಸ್ಯರಾದ ಕೆ.ವಿ. ರಾಮಕೃಷ್ಣ, ಜಿ.ಎಂ. ರಾಜೇಂದ್ರಸ್ವಾಮಿ, ದೇವಪ್ರಸಾದ್, ಮಾದಯ್ಯ, ಮಹದೇವು, ಆನಂದ್ ಸ್ವಾಮಿ ಇತರರಿದ್ದರು.