ಬಸವಕಲ್ಯಾಣ: ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯು ದೇಶದ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ ಜತೆಗೆ ನುರಿತ ಕುಶಲಕರ್ಮಿಗಳನ್ನು ಸಬಲೀಕರಣಗೊಳಿಸುವ ಮತ್ತು ತಲೆಮಾರುಗಳಿಂದಲೂ ಉಳಿದುಕೊಂಡಿರುವ ಕರಕುಶಲತೆಯ ಶ್ರೀಮಂತ ಸಂಪ್ರದಾಯವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ಇಟ್ಟಿದೆ ಎಂದು ಗವಿಮಠದ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ನುಡಿದರು.

ಶ್ರೀ ಘನಲಿಂಗ ರುದ್ರಮುನಿ ಶಿವಾಚಾರ್ಯ ಟ್ರಸ್ಟ್ ಹಾಗೂ ಮೊಸಾಯಿಕ್ ವರ್ಕ್ ಸ್ಕಿಲ್ಸ್ ಪ್ರೈವೆಟ್ ಲಿಮಿಟೆಡ್ ಸಹಯೋಗದಲ್ಲಿ ಗವಿಮಠದಲ್ಲಿ ಬುಧವಾರ ಆಯೋಜಿಸಿದ್ದ ಪಿಎಂ ವಿಶ್ವಕರ್ಮ ಯೋಜನೆಯ ತರಬೇತಿ ಪಡೆದ ಫಲಾನುಭವಿಗಳಿಗೆ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮಮದಲ್ಲಿ ಮಾತನಾಡಿದ ಶ್ರೀಗಳು, ಯೋಜನೆ ಈ ಉಪಕ್ರಮವು ಸಾಂಪ್ರದಾಯಿಕ ಕರಕುಶಲಗಳನ್ನು ಬೆಂಬಲಿಸುವ ಸರ್ಕಾರದ ಬದ್ಧತೆಯನ್ನು ಸಾಕಾರಗೊಳಿಸುತ್ತದೆ. ಈ ಯೋಜನೆಯನ್ನು ಸದುಪಯೋಗ ಪಡೆಸಿಕೊಳ್ಳಬೇಕು ಎಂದರು.
ಸಿಪಿಐ ಅಲಿಸಾಬ್ ಮಾತನಾಡಿ, ಸ್ವಾವಲಂಬಿ ಬದುಕು ನಡೆಸಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದಿಂದ ಪಿಎಂ ವಿಶ್ವಕರ್ಮ ಯೋಜನೆ ಜಾರಿಗೆ ತಂದಿದ್ದು, ಯುವ ಸಮೂಹ ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕ ಶಿವಯೋಗಿ ಹುಲಿಕಾಂತಿಮಠ ಮಾತನಾಡಿ, ಗ್ರಾಮೀಣ ಭಾಗದಲ್ಲಿರುವ ಕುಶಲಕರ್ಮಿಗಳನ್ನು ಆರ್ಥಿಕವಾಗಿ ಸ್ವಾವಲಂಬಿಗಳಾಗಿಸುವ ಉದ್ದೇಶದಿಂದ ಪಿಎಂ ವಿಶ್ವಕರ್ಮ ಯೋಜನೆ ಅನುಷ್ಠಾನಕ್ಕೆ ತರಲಾಗಿದ್ದು, ಈ ಯೋಜನೆ ಅಡಿ ಬ್ಯಾಂಕ್ಗಳ ಮೂಲಕ ೧ ಲಕ್ಷದಿಂದ ೩ ಲಕ್ಷ ರೂ. ವರೆಗೆ ಸಾಲ ಸೌಲಭ್ಯಕ್ಕೆ ಅವಕಾಶವಿದೆ ಎಂದು ಮಾಹಿತಿ ನೀಡಿದರು.
ಕೆನರಾ ಬ್ಯಾಂಕ್ ಶಾಖೆ ವ್ಯವಸ್ಥಾಪಕ ರಾಜಕುಮಾರ ಕೋಟೆ, ಮೊಸಾಯಿಕ್ ಬೀದರ್ ಜಿಲ್ಲಾ ಸಂಯೋಜಕ ನವೀನಕುಮಾರ, ಬಜರಂಗದಳದ ತಾಲೂಕು ಅಧ್ಯಕ್ಷ ರವಿ ನಾವದ್ಗೇಕರ, ವಿಠ್ಠಲ ರಾಯಪ್ಪನೋರ, ನಿವೃತಿರಡ್ಡಿ, ಜಯರಾಜ ಕಮ್ಮಾ, ಅಕುಂಶ ಖೇಲೆ, ಸಾಗರ ಬುಕ್ಕಿಗಾರ, ಮಹಾದೇವ ಬಿರಾದಾರ ಇತರರಿದ್ದರು. ಅನೀಲಕುಮಾರ ಸ್ವಾಗತಿಸಿದರು. ಶಿವಕುಮಾರ ಮುನ್ನೋಳೆ ನಿರೂಪಣೆ ಮಾಡಿದರು.