ಚಿತ್ರದುರ್ಗ: ನರೇಗಾ ಯೋಜನೆ ಮಾರ್ಗಸೂಚಿ ಅನ್ವಯವೇ ಕೆಲಸ ನಿರ್ವಹಿಸಬೇಕು ಹಾಗೂ ಕಾಮಗಾರಿ ಗುಣಮಟ್ಟ ಕಾಪಾಡಿಕೊಳ್ಳಬೇಕು ಎಂದು ಜಿಪಂ ಸಿಇಒ ಎಸ್.ಜೆ. ಸೋಮಶೇಖರ್ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಹೊಸದುರ್ಗ ತಾಲೂಕಿನ ಹೆಬ್ಬಳ್ಳಿ ಮತ್ತಿತರ ಗ್ರಾಪಂಗಳಿಗೆ ಮಂಗಳವಾರ ಭೇಟಿ ನೀಡಿ, ನರೇಗಾದಡಿ ಕೈಗೊಂಡಿರುವ ವಿವಿಧ ಕಾಮಗಾರಿಗಳ ಪ್ರಗತಿ ಹಾಗೂ ಕಡತ ಪರಿಶೀಲಿಸಿದರು.
ಗ್ರಾಮೀಣ ಗೋದಾಮು ಕಟ್ಟಡ ವೀಕ್ಷಿಸಿ ಈ ಕಟ್ಟಡ ರೈತರಿಗೆ ಉಪಯೋಗವಾಗಬೇಕು ಎಂದರು. ಗ್ರಾಮದ ಆಯುಷ್ ಆರೋಗ್ಯ ಮತ್ತು ಕ್ಷೇಮ ಕೇಂದ್ರಕ್ಕೆ ಭೇಟಿ ನೀಡಿ, ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದರು.
ಸಾಮಾಜಿಕ ಅರಣ್ಯ ವಲಯ ಕುಂಬಾರಗಟ್ಟೆ ನರ್ಸರಿ ವೀಕ್ಷಿಸಿದರು. ಮಳೆಗಾಲ ಆರಂಭವಾಗುತ್ತಿದ್ದಂತೆ ಸಸಿಗಳನ್ನು ನೆಡಬೇಕು. ಇದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ವಲಯ ಅರಣ್ಯಾಧಿಕಾರಿ ದಯಾನಂದ್ಗೆ ಸೂಚಿಸಿದರು.
ದೇವಿಗೆರೆ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಕೈಗೊಂಡಿರುವ ಕಲ್ಯಾಣಿ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದರು. ಕೊಂಡಾಪುರದ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಕೊಠಡಿಗಳು, ಅಡುಗೆ ಕೋಣೆ, ಹೈಟೆಕ್ ಶೌಚಗೃಹ, ಶಟಲ್ಬ್ಯಾಂಡ್ಮಿಂಟನ್ ಕೋರ್ಟ್ ಕುರಿತು ಮುಖ್ಯಶಿಕ್ಷಕ ಶೇಖರಪ್ಪರಿಂದ ಮಾಹಿತಿ ಪಡೆದರು.
ಬಾಗೂರು ಗ್ರಾಪಂ ಭೇಟಿ ನೀಡಿ, ಸಂಜೀವಿನಿ ಶೆಡ್ ಸ್ವಸಹಾಯ ಸಂಘದ ಸದಸ್ಯರಿಗೆ ಉಪಯೋಗವಾಗ ಬೇಕು ಎಂದರು. ಮೂಡಲ ಮುತ್ತಿನ ಕೆರೆಗೂ ಭೇಟಿ ನೀಡಿದರು.
ಹೆಬ್ಬಳ್ಳಿ ಮತ್ತು ಬಾಗೂರು ಗ್ರಾಪಂ ವ್ಯಾಪ್ತಿಯಲ್ಲಿರುವ ಅಂತರ್ಜಲಮಟ್ಟ ಮಾಪನ ಮಾಡುವ ಕೊಳವೆ ಬಾವಿಗಳ ಅಂತರ್ಜಲ ಸ್ಥಿರ ಜಲಮಟ್ಟವನ್ನು ಸಿಇಒ ಪರಿಶೀಲಿಸಿದರು. ಪ್ರತಿ ತಿಂಗಳು ಅಂತರ್ಜಲಮಟ್ಟ ಪರೀಕ್ಷಿಸಿ, ಮಾಹಿತಿ ನೀಡುವಂತೆ ಭೂ ವಿಜ್ಞಾನಿಗೆ ಸೂಚಿಸಿದರು.
ಅಹಮ್ಮದ್ನಗರ ಗಡಿಯಲ್ಲಿ ಹೊಸದುರ್ಗ ಪಟ್ಟಣ ಮತ್ತು 346 ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರು ಸರಬರಾಜು ಮೊ ದಲನೇ ಹಂತದ 3 ಲಕ್ಷ ಲೀಟರ್ ಸಾಮರ್ಥ್ಯ ಮತ್ತು 4.5 ಲಕ್ಷ ಲೀಟರ್ ಸಾಮರ್ಥ್ಯದ ಪಂಪ್ಹೌಸ್ಗೆ ಭೇಟಿ ನೀಡಿದರು. ಕಾಮಗಾರಿ ವಿಳಂಬಕ್ಕೆ ಅಸಮಾಧಾನ ವ್ಯಕ್ತಪಡಿಸಿ, ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇಇ ಬಸನಗೌಡ ಪಾಟೀಲ್, ಹಿರಿಯ ಭೂ ವಿಜ್ಞಾನಿ ಬಸಂತ್, ಹೊಸದುರ್ಗ ತಾಪಂ ಇಒ ಸುನೀಲ್, ಸಹಾಯ ನಿರ್ದೇಶಕ(ನರೇಗಾ)ನಯಾಜ್, ನರೇಗಾ ಯೋಜನೆ ಸಂಯೋಜಕ ಸಂತೋಷ್ಕುಮಾರ್ ಮತ್ತಿತರ ಅಧಿಕಾರಿಗಳಿದ್ದರು.
