ಡಿಪಿಎನ್ ಶ್ರೇಷ್ಠಿ, ಚಿತ್ರದುರ್ಗ
ಸರ್ಕಾರಿ ಶಾಲಾ-ಕಾಲೇಜುಗಳತ್ತ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಹೆಜ್ಜೆ ಇಡುವಂತೆ ಪ್ರೇರೇಪಿಸಲು ಹಾಗೂ ಸಮುದಾಯದಲ್ಲಿ ಗುಣಮಟ್ಟದ ಶಿಕ್ಷಣದ ಕಡೆಗೆ ಜಾಗೃತಿ ಮೂಡಿಸಲು ಶಿಕ್ಷಣ ಇಲಾಖೆಯ ನಮ್ಮ ಶಾಲೆ-ನಮ್ಮ ಜವಾಬ್ದಾರಿ ಕಾರ್ಯಕ್ರಮ ಈ ಬಾರಿಯೂ ಮುಂದುವರಿಯಲಿದೆ.
ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸುವುದು, ದಾಖಲಾದ ಮಕ್ಕಳು ನಿತ್ಯ ಶಾಲಾ-ಕಾಲೇಜು ತರಗತಿಗಳಿಗೆ ಹಾಜರಾಗಿ ಕಲಿಕೆಯಲ್ಲಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ಅಜೀಂ ಪ್ರೇಮ್ಜೀ ಫೌಂಡೇಷನ್ ಡೆವಲೆಪ್ಮೆಂಟ್ ಸಂಸ್ಥೆ ಸಹಭಾಗಿತ್ವದಲ್ಲಿ ಇಲಾಖೆ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲೂ ಕಾರ್ಯಕ್ರಮ ಅನುಷ್ಠಾನಗೊಳಿಸುತ್ತಿದೆ.
ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸುವುದರೊಂದಿಗೆ ತರಗತಿಯಿಂದ ಹೊರಗುಳಿಯುವುದನ್ನು ತಪ್ಪಿಸಲು ರಾಜ್ಯದ ಎಲ್ಲ 35 ಶೈಕ್ಷಣಿಕ ಜಿಲ್ಲೆಗಳ ತಾಲೂಕು/ವಲಯ ಮಟ್ಟದಲ್ಲಿ ತಲಾ 2 ರಂತೆ 408 ಕಾರ್ಯಕ್ರಮಗಳನ್ನು ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪಪೂ ಕಾಲೇಜುಗಳಲ್ಲಿ ಮೇ 19 ರೊಳಗೆ ಆಯೋಜಿಸಬೇಕಿದೆ.
ಕ್ಷೀರಭಾಗ್ಯ, ಮೊಟ್ಟೆ/ಬಾಳೆಹಣ್ಣು, ರಾಗಿಮಾಲ್ಟ್ ಇತ್ಯಾದಿ ಮತ್ತು ಮಧ್ಯಾಹ್ನದ ಬಿಸಿಯೂಟದೊಂದಿಗೆ ಮಕ್ಕಳಲ್ಲಿರುವ ಅಪೌಷ್ಟಿಕತೆ ಮತ್ತು ರಕ್ತಹೀನತೆ ನಿವಾರಣೆಗೆ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ದೊರೆಯುತ್ತಿರುವ ಬೆಂಬಲ, ಗುಣಮಟ್ಟದ ಶಿಕ್ಷಣ, ಶೈಕ್ಷಣಿಕ ಪೋತ್ಸಾಹದಾಯಕ ಯೋಜನೆಗಳ ಕುರಿತು ಪಾಲಕರಲ್ಲಿ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದೆ.
ನಮ್ಮ ಶಾಲೆ ನಮ್ಮ ಜವಾಬ್ದಾರಿ ಅನುಷ್ಠಾನಕ್ಕೆ ಇಲಾಖೆ ನಿರ್ದೇಶಕರ ಸಹಿತ ರಾಜ್ಯಮಟ್ಟದ ಹಿರಿಯ ಅಧಿಕಾರಿಗಳು, ಜಿಲ್ಲಾಮಟ್ಟದಲ್ಲಿ ಸಿಇಒ, ಡಿಡಿಪಿಐ, ಡಿಡಿಪಿಯು ಮೊದಲಾದ ಅಧಿಕಾರಿಗಳು, ತಾಲೂಕು/ವಲಯಮಟ್ಟದಲ್ಲಿ ತಾಪಂ ಇಒ, ಬಿಇಒ, ಮುಖ್ಯ ಶಿಕ್ಷಕರು, ಪ್ರಾಚಾರ್ಯರು ಮೊದಲಾದವರೊಂದಿಗೆ ಅಡುಗೆ ಸಿಬ್ಬಂದಿ ಮೇಲ್ವಿಚಾರಣೆ ತಂಡಗಳಲ್ಲಿರುತ್ತಾರೆ.
ತಾಲೂಕು, ಹೋಬಳಿ ಮಟ್ಟದಲ್ಲಿ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ಈ ಕಾರ್ಯಕ್ರಮಗಳನ್ನು ಏರ್ಪಡಿಸಬೇಕಿದೆ. ಇದಕ್ಕಾಗಿ ಸಂಬಂಧಿಸಿದವರಿಗೆ ತರಬೇತಿ ನೀಡಲಾಗುತ್ತದೆ. ಪ್ರತಿ ಕಾರ್ಯಕ್ರಮಕ್ಕೆ ಪಾಲಕರು, ಎಸ್ಡಿಎಂಸಿ ಸದಸ್ಯರು, ಬಿಸಿಯೂಟದ ಅಡುಗೆ ಸಿಬ್ಬಂದಿ ಮತ್ತು ಸಹಾಯಕರು, ಗ್ರಾಪಂ/ವಾರ್ಡ್ ಸದಸ್ಯರು, ಹಳೆಯ ವಿದ್ಯಾರ್ಥಿಗಳು ಹಾಗೂ ಸಮೀಪದ ಶಾಲೆಗಳ ಮುಖ್ಯಶಿಕ್ಷಕರು,ಉಪನ್ಯಾಸಕರನ್ನು ಆಹ್ವಾನಿಸಬೇಕಿದೆ.
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಗೆ ಸರ್ವೆಶೀಟ್ ಕೊಟ್ಟು, ಅವರು ಶಾಲಾ/ಕಾಲೇಜುಗಳಲ್ಲಿ ಗಮನಿಸಿರುವ ಮೂಲ ಸೌಕರ್ಯ, ದೊರೆಯುತ್ತಿರುವ ಶೈಕ್ಷಣಿಕ ಸೌಲಭ್ಯ, ಪ್ರೋತ್ಸಾಹ ಕಾರ್ಯಕ್ರಮಗಳು, ಕಲಿಕೆ ಗುಣಮಟ್ಟ ಮತ್ತು ವಾತಾವರಣ ಇತ್ಯಾದಿಗಳ ಅಭಿಪ್ರಾಯ ಸಂಗ್ರಹಿಸುವುದು ಹಾಗೂ ಪಾಲ್ಗೊಂಡವರೊಂದಿಗೆ ಸಂವಾದ ನಡೆಸಿ ಅವರ ಸಲಹೆಗಳನ್ನು ಸ್ವೀಕರಿಸುವ ಯೋಜನೆ ಇದಾಗಿದೆ.

…ಕೋಟ್…
ಕಳೆದ ಶೈಕ್ಷಣಿಕ ಸಾಲಿನಿಂದ ಈ ಕಾರ್ಯಕ್ರಮ ಆರಂಭವಾಗಿದೆ. ಈಗ ರೂಪಿಸಿರುವುದು ಇದರ ಮುಂದುವರಿದ ಭಾಗ. ಹಳೆಯ ವಿದ್ಯಾರ್ಥಿಗಳಿಗೆ ತಾವು ಓದಿದ ಶಾಲೆಗಳ ಬಗ್ಗೆ ಅಭಿಮಾನ ಮೂಡಿಸುವುದರೊಂದಿಗೆ ಶಾಲೆ-ಕಾಲೇಜುಗಳ ಅಭಿವೃದ್ಧಿಗೆ ಅವರಿಂದ ನೆರವು ಪಡೆಯುವುದು ಹಾಗೂ ಪಾಲಕರಲ್ಲೂ ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ದೊರೆಯುವ ಗುಣಮಟ್ಟದ ಶಿಕ್ಷಣದ ಕುರಿತು ಜಾಗೃತಿ ಮೂಡಿ ಸುವುದು ಇದರ ಉದ್ದೇಶವಾಗಿದೆ.
ಎಸ್. ನಾಗಭೂಷಣ, ಬಿಇಒ, ಚಿತ್ರದುರ್ಗ.
—