ಬಸವಕಲ್ಯಾಣ: ಕ್ರೀಡೆಗಳು ನಮ್ಮನ್ನು ದೈಹಿಕವಾಗಿ ಸದೃಢರನ್ನಾಗಿ ಮಾಡುವುದು ಜತೆಗೆ ನಮ್ಮನ್ನು ಕ್ರಿಯಾಶೀಲರನ್ನಾಗಿಸುತ್ತವೆ. ಹೀಗಾಗಿ ಆರೋಗ್ಯಪೂರ್ಣ ಬದುಕಿಗೆ ಕ್ರೀಡೆಗಳು ಪೂರಕ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕಲಬುರಗಿ ಪ್ರಾದೇಶಿಕ ನಿರ್ದೇಶಕ ಡಾ. ಶಂಭುಲಿಂಗಪ್ಪ ಹೇಳಿದರು.

ಬಿಇಟಿಯ ಬಸವಕಲ್ಯಾಣ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಎರಡು ದಿನಗಳ ವಿಟಿಯು ಕಲಬುರಗಿ ವಲಯದ ಅಂತರ ಕಾಲೇಜುಗಳ ವಾಲಿಬಾಲ್ ಕ್ರೀಡಾಕೂಟನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡಾಕೂಟದಲ್ಲಿ ಜಯಗಳಿಸಿ ಕಾಲೇಜಿಗೆ, ರಾಜ್ಯಕ್ಕೆ, ದೇಶಕ್ಕೆ ಕೀರ್ತಿ ತರಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಬಸವಕಲ್ಯಾಣ ಇಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿ ಸದಸ್ಯೆ ಮಲ್ಲಮ್ಮ ಎಂ. ತಾಳಂಪಳ್ಳಿ ಮಾತನಾಡಿ, ಒಬ್ಬ ವ್ಯಕ್ತಿಯನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿಡುವಲ್ಲಿ ಕ್ರೀಡೆ ಪ್ರಮುಖ ಪಾತ್ರ ವಹಿಸುತ್ತದೆ. ಕ್ರೀಡೆಗಳಲ್ಲಿ ಸೋಲು-ಗೆಲುವಿಗಿಂತ ಭಾಗವಹಿಸುವಿಕೆ ಮುಖ್ಯ. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಗುಣಮಟ್ಟದ ಶಿಕ್ಷಣದ ಜತೆಗೆ ಕ್ರೀಡೆಗೆ ಬೇಕಾದ ಸೌಲಭ್ಯಗಳನ್ನು ಸಹ ಬಿಇಟಿ ಸಂಸ್ಥೆಯ ವತಿಯಿಂದ ಒದಗಿಸಲಾಗುವುದು ಎಂದರು.
ಪ್ರಾಚಾರ್ಯ ಡಾ.ಅಶೋಕಕುಮಾರ ವಣಗೇರಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ, ಕ್ರೀಡೆ ಜೀವನದ ಏಳಿಗೆಗಾಗಿ ಅತ್ಯಾವಶ್ಯಕವಾಗಿದೆ. ಮಾಸಿಕವಾಗಿ ಗಟ್ಟಿಯಾಗಿ ಬೆಳೆಯಲು ಕ್ರೀಡೆ ಸಹಕಾರಿಯಾಗಿದ್ದು, ಅಭ್ಯಾಸದ ಜತೆಗೆ ಕ್ರೀಡೆಗಳಲ್ಲಿಯೂ ಆಸಕ್ತಿಯಿಂದ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಉಪಪ್ರಾಚಾರ್ಯ ಡಾ.ಅರುಣಕುಮಾರ ಯಲಾಲ್, ರಜಿಸ್ಟರ್ ಪ್ರೇಮಸಾಗರ ಪಾಟೀಲ, ವಿಭಾಗದ ಮುಖ್ಯಸ್ಥರಾದ ಡಾ.ಅನೀಲ ಪಾಟೀಲ, ಡಾ.ಸುದರ್ಶನ ಎಂ., ಡಾ.ಸಂಜೀವಕುಮಾರ ಜಲ್ದೆ, ಗುರುರಾಜ ಖಂಡೋಬಾ ಆರ್., ಕಚೇರಿ ಅಧೀಕ್ಷಕ ವೃಷಿಕೇತ ಭೂಸಾರೆ, ಪಿಆರ್ಒ ಶಂಕರ ಆಗರಗಿ, ದತ್ತಣ್ಣ ಮಂಟಗೆ, ವಿವಿಧ ಕಾಲೇಜುಗಳ ಪ್ರಾಚಾರ್ಯರಾದ ಡಾ.ನಾಗಯ್ಯ ಸ್ವಾಮಿ, ವಿಶ್ವನಾಥಯ್ಯಸ್ವಾಮಿ, ನೀಲಕಂಠ ಕೋಡ್ಲೆ ಹಾಗೂ ಶಿವಕುಮಾರ ಸ್ವಾಮಿ ಇತರರಿದ್ದರು. ವಿದ್ಯಾಸಾಗರ ಮೂಲಗೆ ನಿರೂಪಣೆ ಮಾಡಿದರು. ದತ್ತಣ್ಣ ಮಂಟಗೆ ವಂದಿಸಿದರು.