ಚಿತ್ರದುರ್ಗ: ಆರ್ಥಿಕ ತಜ್ಞ ಪ್ರೊ.ಎಂ.ಗೋವಿಂದರಾವ್ ಅಧ್ಯಕ್ಷತೆಯಲ್ಲಿ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಏ.28ರಂದು ನಗರದಲ್ಲಿ ಬೆಂಗಳೂರು ವಿಭಾಗ ಮಟ್ಟದ ಜಿಲ್ಲೆಗಳ ಜನಪ್ರತಿನಿಧಿಗಳು, ಆರ್ಥಿಕ ಮತ್ತು ಶೈಕ್ಷಣಿಕ ತಜ್ಞರು, ಕೈಗಾರಿಕಾ ಕ್ಷೇತ್ರದ ತಜ್ಞರೊಂದಿಗೆ ಸಂವಾದ ಸಭೆ ಹಮ್ಮಿಕೊಂಡಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ತಾಲೂಕುವಾರು ಸಮಗ್ರ ಅಭಿವೃದ್ಧಿ ಸೂಚ್ಯಂಕ ನಿರ್ಧರಿಸುವ ಅಂಶಗಳಿಗೆ ಒತ್ತು ನೀಡಿ, ವರದಿ ಸಲ್ಲಿಸುವಂ ತೆ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅಧಿಕಾರಿಗಳಿಗೆ ಸೂಚಿಸಿದರು.
ಡಿಸಿ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಸಿದ್ಧತಾ ಸಭೆಯಲ್ಲಿ ಮಾತನಾಡಿ, ಚಿತ್ರದುರ್ಗ, ತುಮಕೂರು, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳನ್ನು ಒಳಗೊಂಡಂತೆ ಸಮಿತಿ ಅಂದು ಬೆಳಗ್ಗೆ 11ಕ್ಕೆ ಜಿಲ್ಲಾ ಪಂಚಾಯಿತಿಯಲ್ಲಿ ಸಂವಾದ ಸಭೆ ಏರ್ಪಡಿಸಿದೆ. ನಾಲ್ಕೂ ಜಿಲ್ಲೆಗಳಿಗೆ ಹೋಲಿಸಿದರೆ ಚಿತ್ರದುರ್ಗ ಅತ್ಯಂತ ಹಿಂದುಳಿದ ಜಿಲ್ಲೆಯಾಗಿದೆ. ಇದನ್ನು ನಿವಾರಿಸಲು ಅಭಿವೃದ್ಧಿ ಅಗತ್ಯವಿದೆ. ಅದಕ್ಕಾಗಿ ನಿಖರ ಅಂಕಿ-ಅಂಶಗಳೊಂದಿಗೆ ವರದಿ ಸಲ್ಲಿಸಬೇಕಿದೆ.
ಕೃಷಿಗೆ ಸಂಬಂಧಿಸಿದಂತೆ ಬಿತ್ತನೆ ಪ್ರದೇಶ,ಆಹಾರ ಧಾನ್ಯ ಮತ್ತು ವಾಣಿಜ್ಯ ಬೆಳೆ ಪ್ರದೇಶ ಪ್ರಮಾಣ, ನೀರಾವರಿ ಮತ್ತು ಮಳೆ ಆಶ್ರಿತ ಪ್ರದೇಶ, ರಸಗೊಬ್ಬರದ ಬಳಕೆ, ಕೃಷಿ ಯಂತ್ರೋಪಕರಣಗಳ ಬಳಕೆ, ಕೃಷಿಗೆ ತಲಾ ಬ್ಯಾಂಕ್ ಸಾಲ ವಿವರಗಳನ್ನು ಒದಗಿಸಬೇಕು. ಕೈಗಾರಿಕೆ ಮತ್ತು ಹಣಕಾ ಸು ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರತಿ ಲಕ್ಷ ಜನಸಂಖ್ಯೆಗೆ ಕೈಗಾರಿಕೆ ಘಟಕಗಳ ಸಂಖ್ಯೆ, ಕಾರ್ಮಿಕರ ಸಂಖ್ಯೆ, ಬ್ಯಾಂಕ್ಗಳಿಂದ ಅಭಿವೃದ್ಧಿ ಸಾಲ, ಪ್ರತಿ ಲಕ್ಷ ಜನಸಂಖ್ಯೆಗೆ ವ್ಯಾಪಾರ, ಹೋಟೆಲ್ ಮತ್ತು ಸಾರಿಗೆಯಲ್ಲಿ ತೊಡಗಿರುವ ಉದ್ಯಮಗಳು.
ಜನಸಂಖ್ಯೆಗೆ ಅನುಗುಣವಾಗಿ ಅಂಚೆ ಕಚೇರಿ, ರಸ್ತೆ, ಸಹಕಾರ ಸಂಘ, ಕೃಷಿ ಉತ್ಪನ್ನ ಮಾರುಕಟ್ಟೆಗಳ ವಿವರ, ಮೂಲ ಸೌಕರ್ಯಗಳ ಸೂಚ್ಯಂಕ ನಿರ್ಧರಿಸುವ ಸಾಕ್ಷರತಾ ಪ್ರಮಾಣ, ಆಸ್ಪತ್ರೆ ಮತ್ತು ವೈದ್ಯರು, ವಾಹನಗಳ ಸಂಖ್ಯೆ, ವಿದ್ಯಾರ್ಥಿ-ಶಿಕ್ಷಕರ ಅನುಪಾತ, ಪ್ರಾಥಮಿಕ, ಪ್ರೌಢಶಾಲೆ, ಕಾಲೇಜುಗಳು, ಉನ್ನತ ಶಿಕ್ಷಣ ಸಂಸ್ಥೆಗಳು ಸರ್ಕಾರಿ ಮತ್ತು ಖಾಸಗಿ ಎರಡೂ ವಿವರಗಳನ್ನು ಒದಗಿಸಬೇಕು.
ಲಿಂಗಾನುಪಾತ, ನಗರ ಮತ್ತು ಗ್ರಾಮೀಣ ಭಾಗದ ಜನಸಂಖ್ಯೆ ಸೇರಿ ಸಮಗ್ರ ಅಭಿವೃದ್ಧಿ ಸೂಚ್ಯಂಕ ನಿಗದಿಪಡಿಸುವ ಅಂಶಗಳನ್ನು ನಿಖರ ವಾಗಿ ಸಂಗ್ರಹಿಸಿ, ವರದಿ ಸಿದ್ಧಪಡಿಸಬೇಕು. ಸಂವಾದ ಸಭೆಗೆ ಜಿಲ್ಲೆಯ ಆರ್ಥಿಕ, ಶೈಕ್ಷಣಿಕ, ಕೈಗಾರಿಕಾ ತಜ್ಞರನ್ನು ಆಹ್ವಾನಿಸಬೇಕು. ಜನಪ್ರತಿನಿಧಿಗಳ ಶಿಷ್ಟಾಚಾರದಲ್ಲಿ ಲೋಪಗಳಾಗಬಾರದು ಎಂದು ಡಿಸಿ ಹೇಳಿದರು.
ಎಡಿಸಿ ಬಿ.ಟಿ.ಕುಮಾರಸ್ವಾಮಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಆನಂದ್, ಜಿಪಂ ಸಿಪಿಒ ಗಾಯತ್ರಿ, ಡಿಎಚ್ಒ ಡಾ. ರೇಣುಪ್ರಸಾದ್, ಡಿಡಿಪಿಐ ಮಂಜುನಾಥ್, ಡಿಡಿಪಿಯು ಆರ್. ಪುಟ್ಟಸ್ವಾಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಡಿಡಿ ಭಾರತಿ ಆರ್. ಬಣಕಾರ್ ಇತರರು ಇದ್ದರು.
—
