ಧಾರವಾಡ: ಪ್ರಸ್ತುತ ನಮ್ಮ ದೇಶಕ್ಕೆ ತಂತ್ರಜ್ಞಾನ ಆಧರಿತ ಶಿಕ್ಷಣ ಅವಶ್ಯವಾಗಿದೆ. ಯುವ ಇಂಜಿನಿಯರ್ಗಳು ಸೂಕ್ತ ಕೌಶಲ ಅಳವಡಿಸಿಕೊಳ್ಳುವ ಮೂಲಕ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜೈಪುರದ ಮಾಳವಿಯ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ನಿರ್ದೇಶಕ ಡಾ. ಉದಯ ಯರಗಟ್ಟಿ ಹೇಳಿದರು.
ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯ ಸಭಾಭವನದಲ್ಲಿ ಶನಿವಾರ ನಡೆದ ಕಾಲೇಜಿನ 9ನೇ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಭಾರತ ಬಡ ರಾಷ್ಟ್ರ ಎಂದು ಪಠ್ಯ ಹಾಗೂ ಮಾಧ್ಯಮಗಳಲ್ಲಿ ಬಿಂಬಿಸಲಾಗುತ್ತಿದೆ. ಹಾಗೇನಿಲ್ಲ. ನಮ್ಮದು ಶ್ರೀಮಂತ ದೇಶವೇ.ನಾಸಾದವರು ಸೂರ್ಯನ ಬಳಿ ತೆರಳಿದಾಗ ಓಂಕಾರ ಶಬ್ಧ ಕೇಳುತ್ತಿದೆ ಎಂದು ಹೇಳಿದ್ದಕ್ಕೆ ದೇಶದ ಜನರೇ ಬೆರಗಾಗಿದ್ದರು. ಆದರೆ, ಸಾವಿರಾರು ವರ್ಷಗಳ ಹಿಂದೆ ಭಾರತೀಯರು ಇದನ್ನು ಕಂಡು ಹಿಡಿದಿದ್ದಾರೆ. ರೈಟ್ ಸಹೋದರರು ವಿಮಾನ ಕಂಡು ಹಿಡಿಯುವ ಪೂರ್ವದಲ್ಲೇ ಭಾರತದಲ್ಲಿ ಪುಷ್ಪಕ ವಿಮಾನವಿತ್ತು. ಹೀಗೆ ಅನೇಕ ಪ್ರಥಮಗಳಿಗೆ ಭಾರತ ಸಾಕ್ಷಿಯಾಗಿದ್ದರೂ, ನಮ್ಮದು ಹಿಂದುಳಿದ ದೇಶ ಎಂದು ಹೇಳಿಕೊಳ್ಳುವುದು ವಿಪರ್ಯಾಸ. ಯುವಜನರು ದೇಶದ ಬಗ್ಗೆ ಗೌರವ ಮತ್ತು ಅಭಿಮಾನ ಬೆಳೆಸಿಕೊಳ್ಳಬೇಕು ಎಂದರು.
ವಿದ್ಯಾರ್ಥಿಗಳು ವೃತ್ತಿ ಜೀವನದ ಜೊತೆಗೆ ನಮ್ಮ ಸವಾಲುಗಳಾದ ನೀರು, ಪರಿಸರ ಸ್ವಚ್ಛತೆ, ವಿದ್ಯುತ್ ಕೊರತೆ ಇತ್ಯಾದಿಗಳ ಬಗ್ಗೆ ಸಹ ಗಮನಿಸಿ, ಮಹತ್ವಾಕಾಂಕ್ಷೆಯ ಸಮಾಜಕ್ಕೆ ಬೆಂಬಲ ನೀಡಬೇಕು. ಸ್ಕಿಲ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ಮಾರ್ಟ್ಸಿಟಿ, ಉನ್ನತ ಭಾರತ ಅಭಿಯಾನ, ಮೇಕ್ ಇನ್ ಇಂಡಿಯಾದಿಂದ ತಾಂತ್ರಿಕ ಶಿಕ್ಷಣ ಉನ್ನತ ಮಟ್ಟಕೆ ಏರಲು ಸಾಧ್ಯ. ಶಿಕ್ಷಕರು ವಿದ್ಯಾರ್ಥಿಗಳಿಗೆ ಈ ಕುರಿತು ಸಮಗ್ರ ಜ್ಞಾನ ನೀಡಬೇಕು. ಇದರಿಂದ ಹೊಸ ಸಂಶೋಧನೆಗಳಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿವಿ ಉಪ ಕುಲಪತಿ ಡಾ. ನಿರಂಜನಕುಮಾರ ಮಾತನಾಡಿ, ಜೀವನದಲ್ಲಿ ಛಲ ಹೊಂದಿದ್ದರೆ ಎಲ್ಲ ಸಾಧನೆ ಮಾಡಲು ಸಾಧ್ಯ. ಇಂದಿನ ದಿನಗಳಲ್ಲಿ ತಾಂತ್ರಿಕತೆ ಸಾಕಷ್ಟು ವೇಗವಾಗಿ ಬೆಳೆಯುತ್ತಿದೆ. ಅದಕ್ಕೆ ತಕ್ಕಂತೆ ವಿದ್ಯಾರ್ಥಿಗಳೂ ಸಾಗಬೇಕು. ಆ ಮೂಲಕ ಸಮರ್ಥ ರಾಷ್ಟ್ರ ನಿರ್ವಣಕ್ಕೆ ಕೈ ಜೋಡಿಸಬೇಕು ಎಂದರು.
ಎಸ್ಡಿಎಂಇ ಸೊಸೈಟಿ ಕಾರ್ಯದರ್ಶಿ ಜೀವಂಧರಕುಮಾರ, ವಿವಿಧ ವಿಭಾಗಗಳ ಡೀನ್, ಮುಖ್ಯಸ್ಥರು, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಪೋಷಕರು, ಇತರರು ಇದ್ದರು. ಪ್ರಾಂಶುಪಾಲ ಡಾ.ಎಸ್.ಬಿ. ವಣಕುದುರೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ವಾಸುದೇವ ಪರ್ವತಿ ನಿರೂಪಿಸಿದರು. ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಡಾ. ಕೆ. ಗೋಪಿನಾಥ ವಂದಿಸಿದರು.
ಶಿರಸಿ ಕುವರಿಗೆ ಹೆಗ್ಗಡೆ ಪದಕ
ಅತಿ ಹೆಚ್ಚು ಅಂಕ ಪಡೆಯುವ ವಿದ್ಯಾರ್ಥಿನಿಗೆ ನೀಡುವ ಡಾ. ಡಿ. ವೀರೇಂದ್ರ ಹೆಗ್ಗಡೆ ಸ್ವರ್ಣ ಪದಕವನ್ನು ಮಾಹಿತಿ ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗದ ರಾಜಶ್ರೀ ಭಟ್ ಪಡೆದರು.
ಶಿರಸಿ ಬಳಿಯ ಮತ್ತಿಗಾರ ಗ್ರಾಮದ ರಾಜಾರಾಮ್ ಭಟ್ ಹಾಗೂ ಶ್ರೀಲತಾ ದಂಪತಿಯ ಹಿರಿಯ ಪುತ್ರಿ ರಾಜಶ್ರೀ, ಕಾಲೇಜಿಗೆ ಅತೀ ಹೆಚ್ಚು ಅಂಕ (9.70 ಸಿಜಿಪಿಎ) ಪಡೆಯುವ ಮೂಲಕ ಈ ಪದಕಕ್ಕೆ ಭಾಜನರಾಗಿದ್ದಾರೆ.
ಪತ್ರಿಕೆಯೊಂದಿಗೆ ಸಂತಸ ಹಂಚಿಕೊಂಡ ರಾಜಶ್ರೀ, ವೀರೇಂದ್ರ ಹೆಗ್ಗಡೆ ಅವರ ಹೆಸರಿನ ಬಂಗಾರದ ಪದಕ ಪಡೆದಿದ್ದು ಜೀವನದಲ್ಲೆಂದೂ ಮರೆಯದ ಕ್ಷಣ. ಚಿನ್ನದ ಪದಕದ ನಿರೀಕ್ಷೆ ಇತ್ತು. ಆದರೆ, ಹೆಗ್ಗಡೆ ಅವರ ಹೆಸರಿನ ಪದಕ ಸಿಕ್ಕಿರುವುದರಿಂದ ಅವರ ಆಶೀರ್ವಾದ ಸಿಕ್ಕಂತಾಗಿದೆ. ತಂದೆ-ತಾಯಿಯ ಪ್ರೋತ್ಸಾಹ, ಶಿಕ್ಷಕರ ಸಹಕಾರದಿಂದ ಈ ಸಾಧನೆ ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಶಿಕ್ಷಣ ಪಡೆಯುವ ಆಸೆ ಇದೆ ಎಂದರು.
ರ್ಯಾಂಕ್ ಪಡೆದವರು
ಕೆಮಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ತೇಜಸ್ ಶೇಟ್, ನಿಮಿತ ಎಸ್.ಎನ್. ಹಾಗೂ ಟಿ.ಯು. ರಚಿತಾ; ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದಲ್ಲಿ ಗುಣಾ ಕಂಬಾಳಿಮಠ ಮತ್ತು ಸೌಮ್ಯ ದೇಸಾಯಿ; ಸಿವಿಲ್ ವಿಭಾಗದಲ್ಲಿ ವಿಜಯಕುಮಾರ ಅರಿಕಟ್ಟಿ, ಅಲ್ತಾಫ್ ಎಚ್.ಎಸ್. ಹಾಗೂ ಹರ್ಷಿತಾ ಕೆ.; ಇನ್ಫಾಮೇಶನ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದಲ್ಲಿ ರಾಜಶ್ರೀ ಭಟ್, ಪ್ರಿಯಾಂಕಾ ಅಡಪೇಕರ ಹಾಗೂ ಅಮೃತಾ ಹೊಸನಗುಡಿ; ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದಲ್ಲಿ ವಿನುತಾ ನಾಯಕ, ವಿನಾಯಕಗೌಡ ಆರ್. ಹಾಗೂ ಸ್ಪೂರ್ತಿ ಎಸ್.; ಎಲೆಕ್ಟ್ರಿಕಲ್ ವಿಭಾಗದಲ್ಲಿ ಶ್ರುತಿ, ಪ್ರತೀಕ್ಷಾ ಹೆಗಡೆ ಹಾಗೂ ಶ್ರೀಯಾ ಪಾಟೀಲ ಮತ್ತು ಮೆಕ್ಯಾನಿಕಲ್ ವಿಭಾಗದಲ್ಲಿ ಅಂಕುಶ ನಾಯಕ, ಎನ್. ಪ್ರವೀಣ, ಪ್ರಸಾದ ಗುನಗಿ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿದ್ದಾರೆ. ಒಟ್ಟು 543 ವಿದ್ಯಾರ್ಥಿಗಳು ಪದವಿ ಪ್ರಮಾಣ ಪತ್ರ ಸ್ವೀಕರಿಸಿದರು.
ಗೌನ್ ಬದಲು ಶಲ್ಯ!
ಧಾರವಾಡ: ಪದವಿ ಪ್ರದಾನ ಸಮಾರಂಭದಲ್ಲಿ ವಿದ್ಯಾರ್ಥಿಗಳು ಗೌನ್ ಧರಿಸಿ ಸಂಭ್ರಮಿಸುವುದು ಸಾಮಾನ್ಯ. ಆದರೆ, ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯ ಗೌನ್ ಸಂಪ್ರದಾಯ ಬಿಟ್ಟು ದೇಸಿ ಪರಿಕಲ್ಪನೆ ಪ್ರಾರಂಭಿಸಿದ್ದು ಶನಿವಾರ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಎಲ್ಲರ ಗಮನ ಸೆಳೆಯಿತು.
ಸಮಾರಂಭಕ್ಕೆ ಆಗಮಿಸಿದ್ದ ಗಣ್ಯ ಅತಿಥಿಗಳಿಗೆ ಕೆಂಪು ಬಣ್ಣದ ಶಲ್ಯ ನೀಡಿದ್ದರೆ, ವಿವಿಧ ವಿಭಾಗಗಳ ಮುಖ್ಯಸ್ಥರಿಗೆ ಹಸಿರು, ನೀಲಿ ಹಾಗೂ ಕೇಸರಿ ಬಣ್ಣದ ಶಲ್ಯ ನೀಡಲಾಗಿತ್ತು. ಪದವಿ ಪಡೆದ ಎಲ್ಲ ವಿದ್ಯಾರ್ಥಿಗಳಿಗೆ ಬಿಳಿ ಬಣ್ಣದ ಶಲ್ಯ ನೀಡಲಾಗಿತ್ತು.
ಬಿಡದ ಗೌನ್ ಮೋಹ: ಕಾಲೇಜ್ ನೂತನ ಸಾಂಪ್ರದಾಯಕ್ಕೆ ನಾಂದಿ ಹಾಡಿದ್ದರೂ ವಿದ್ಯಾರ್ಥಿಗಳಲ್ಲಿನ ಗೌನ್ ಮೋಹ ಬಿಟ್ಟಂತೆ ಕಾಣಲಿಲ್ಲ. ಪದವಿ ಪ್ರದಾನ ಸಮಾರಂಭ ಮುಗಿದ ಬಳಿಕ ವಿದ್ಯಾರ್ಥಿಗಳು ಕಾಲೇಜಿನ ಆವರಣದಲ್ಲಿ ಗೌನ್ ಧರಿಸಿ ಫೋಟೋಕ್ಕೆ ಪೋಸ್ ನೀಡುತ್ತಿದ್ದುದು ಸಾಮಾನ್ಯವಾಗಿತ್ತು.