ವಿಜಯವಾಣಿ ಸುದ್ದಿಜಾಲ ತೂಬಗೆರೆ
ಪಟ್ಟಣದಲ್ಲಿ ಬುಧವಾರ ಜಲ ಜೀವನ ಯೋಜನೆಯಡಿ ಕೆಲಸ ಮಾಡುತ್ತಿದ್ದ ಕಂಪ್ರೈಸರ್ (ರಸ್ತೆ ಡ್ರಿಲ್ ಮಾಡುವ ವಾಹನ) ಟ್ರ್ಯಾಕ್ಟರ್ ಆಕಸ್ಮಿಕವಾಗಿ ಚಲಿಸಿದ್ದರಿಂದ ಚಾಲಕ ಶಿವರಾಜ್(35) ಎಂಬಾತ ಗಾಯಗೊಂಡಿದ್ದು, ಎರಡು ವಾಹನಗಳು ಜಖಂಗೊಂಡಿವೆ.
ಪಟ್ಟಣದ 1ನೇ ವಾರ್ಡಿನಲ್ಲಿ ಪೈಪ್ಲೈನ್ ಅಳವಡಿಸಲು ಸಿಮೆಂಟ್ ರಸ್ತೆ ಅಗೆಯುವ ಕೆಲಸ ಮಾಡುತ್ತಿದ್ದ ವೇಳೆ ಚಾಲಕ ಟ್ರ್ಯಾಕ್ಟರ್ನಿಂದ ಕೆಳಗಿಳಿಯುವಾಗ ಗೇರ್ಗೆ ಪ್ಯಾಂಟ್ ಸಿಲುಕಿದ್ದರಿಂದ ಶಿವರಾಜ್ ಕೆಳಗೆ ಬಿದ್ದಿದ್ದಾನೆ. ಈ ವೇಳೆ ಟ್ರ್ಯಾಕ್ಟರ್ ಮುಂದಕ್ಕೆ ಚಲಿಸಿದ್ದು, ಚಕ್ರ ಚಾಲಕನ ಹೊಟ್ಟೆಯ ಮೇಲೆ ಹರಿದಿದೆ. ನಂತರ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ದ್ವಿಚಕ್ರ ಹಾಗೂ ಮಾರುತಿ ವ್ಯಾನಿಗೆ ಡಿಕ್ಕಿ ಹೊಡೆದಿದ್ದು, ಎರಡೂ ವಾಹನಗಳು ನಜ್ಜುಗುಜ್ಜಾಗಿವೆ.
ಸ್ಥಳೀಯರು ಟ್ರ್ಯಾಕ್ಟರ್ ನಿಯಂತ್ರಿಸಿ, ಗಾಯಾಳುವನ್ನು ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.