ಹನೂರು: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ತಾಲೂಕಿನಾದ್ಯಂತ ಶುಕ್ರವಾರ ಮಧ್ಯಾಹ್ನದವರೆಗೂ ಜಿಟಿ ಜಿಟಿ ಮಳೆ ಸುರಿದ ಪರಿಣಾಮ ಜನ ಜೀವನ ಅಸ್ತವ್ಯಸ್ತವಾಗಿತ್ತು.
ಕ್ಷೇತ್ರ ವ್ಯಾಪ್ತಿಯಲ್ಲಿ ಬೆಳಗ್ಗೆಯಿಂದಲೂ ಆರಂಭವಾದ ತುಂತುರು ಮಳೆ ಮಧ್ಯಾಹ್ನ 12ರವರೆಗೆ ಆಗಾಗ್ಗೆ ಸುರಿಯುತ್ತಲೇ ಇತ್ತು. ಕೆಲ ಗ್ರಾಮಗಳಲ್ಲಿ ಸಾಧಾರಣಾ ಮಳೆಯಾಯಿತು. ಇದರಿಂದ ಬೆಳಗ್ಗೆ ಮನೆ ಮನೆಗೆ ಹಾಲು, ಪತ್ರಿಕೆ ವಿತರಿಸುವವರ ಕಾರ್ಯದಲ್ಲಿ ವಿಳಂಬವಾದರೆ, ತಾಲೂಕಿನ ವಿವಿಧ ಗ್ರಾಮಗಳಿಂದ ಪಟ್ಟಣದ ಶಾಲಾ, ಕಾಲೇಜಿಗೆ ಆಗಮಿಸಿದ ಕೆಲ ವಿದ್ಯಾರ್ಥಿಗಳು ಕೊಡೆ ಹಿಡಿದು ಸಾಗಿದರೆ, ಬಹುತೇಕ ವಿದ್ಯಾರ್ಥಿಗಳು ಜಿಟಿಜಿಟಿ ಮಳೆಯ ನಡುವೆಯೇ ತೆರಳಿದರು. ಇದರಿಂದ ತೊಂದರೆ ಅನುಭವಿಸಿದರು.
ಇನ್ನು ತಾಲೂಕಿನ ಕೆಲವು ಗ್ರಾಮದ ಜಮೀನುಗಳಲ್ಲಿ ರಾಗಿ ಫಸಲು ಕಟಾವಿಗೆ ತೆರಳುತ್ತಿದ್ದ ಮಹಿಳಾ ಕೂಲಿ ಕಾರ್ಮಿಕರು ಮನೆಯಲ್ಲೇ ಕುಟುಂಬಸ್ಥರೊಂದಿಗೆ ಕಾಲ ಕಳೆಯುವಂತಾಯಿತು. ಅಗತ್ಯ ಸಾಮಗ್ರಿಗಳನ್ನು ಖರೀದಿಸುವವರು ಕೊಡೆ ಮೊರೆ ಹೋದರು. ಚಳಿಯಿಂದ ರಕ್ಷಿಸಿಕೊಳ್ಳಲು ಸ್ಪೆಟರ್ ಹಾಗೂ ಬೆಚ್ಚನೆಯ ಉಡುಪನ್ನು ಧರಿಸುವಂತಾಯಿತು. ಇನ್ನು ಮಳೆಯಿಂದಾಗಿ ರಸ್ತೆ ಬದಿ ವ್ಯಾಪಾರಗಳ ಸ್ಥಿತಿ ಹೇಳತೀರದಾಗಿತ್ತು. ವ್ಯಾಪಾರ ವಹಿವಾಟು ಕ್ಷೀಣವಾಗಿತ್ತು. ಬಸ್ಗಳಲ್ಲಿ ಜನರ ಸಂಖ್ಯೆ ವಿರಳವಾಗಿತ್ತು. ಕೆಲಸ ಕಾರ್ಯಗಳ ನಿಮಿತ್ತ ಬೈಕ್ನಲ್ಲಿ ತೆರಳುತ್ತಿದ್ದವರು ಈ ಮಳೆಯಿಂದಾಗಿ ಬಸ್ ಅವಲಂಬಿಸಬೇಕಾಯಿತು. ಹಾಗಾಗಿ ತುಂತುರು ಮಳೆಯಿಂದಾಗಿ ಜನರು ಹೈರಾಣರಾದರು. ಇದರಿಂದ ಜನರ ಸಹಜ ಸ್ಥಿತಿಯಲ್ಲಿ ಏರುಪೇರಾಗಿತ್ತು.
ಮಳೆಯಿಂದಾಗಿ ಹದಗೆಟ್ಟ ರಸ್ತೆಯ ಗುಂಡಿಗಳಲ್ಲಿ ನೀರು ನಿಲ್ಲುವಂತಾದರೆ, ಗ್ರಾಮದ ಬೀದಿಯ ಮಣ್ಣಿನ ರಸ್ತೆಗಳು ಕೆಸರು ಗದ್ದೆಯಂತಾಗಿತ್ತು. ಇದರಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ಸಂಚರಿಸಲು ಹರಸಾಹಸ ಪಡಬೇಕಾಯಿತು.
ಮಧ್ಯಾಹ್ನದ ಬಳಿಕ ಕೆಲ ಗಂಟೆಗಳ ಕಾಲ ಮಳೆ ನಿಂತಿತ್ತು. ಸಂಪೂರ್ಣ ಮೋಡ ಕವಿದ ವಾತಾವರಣವಿತ್ತು. ಚಳಿಗೆ ಜನರು ಟೀ, ಕಾಫಿ ಹಾಗೂ ಕುರುಕಲು ತಿಂಡಿಗಳ ಮೊರೆ ಹೋದರು. ಇದೀಗ ಪಟ್ಟಣಕ್ಕೆ ಲಗ್ಗೆ ಇಟ್ಟಿರುವ ಸೊನೆ ಅವರೆಕಾಯಿಯನ್ನು ಹೆಚ್ಚು ಜನರು ಖರೀದಿಸಿದರು.