ಭದ್ರಾವತಿ: ಮಹಾಶಿವರಾತ್ರಿ ಅಂಗವಾಗಿ ನಗರ ಸೇರಿದಂತೆ ಗ್ರಾಮಾಂತರ ಭಾಗದ ಶಿವದೇವಾಲಗಳಲ್ಲಿ ವಿಶೇಷ ಪೂಜೆ ಜರುಗಿತು. ದೇವಾಲಯಗಳಿಗೆ ಹೂವಿನ ಅಲಂಕಾರ ಮಾಡಲಾಗಿತ್ತು. ಹೋಮ, ಅಭಿಷೇಕ ಪೂಜಾ ಕಾರ್ಯಕ್ರಮಗಳು ನಡೆದವು. ಕೆಲ ದೇವಾಲಯಗಳಲ್ಲಿ ಜಾಗರಣೆ ಅಂಗವಾಗಿ ಭಜನೆ ಕೀರ್ತನೆಗಳು ಹಾಗೂ ಹಾಡುಗಾರಿಕೆಗೆ ವ್ಯವಸ್ಥೆ ಮಾಡಲಾಗಿತ್ತು.
ಭದ್ರೆಯ ತಟದಲ್ಲಿ ನೆಲೆಸಿರುವ ಸಂಗಮೇಶ್ವರ ದೇವಾಲಯದಲ್ಲಿ ಮಂಗಳವಾರ ಸಂಜೆಯಿಂದಲೆ ಗಣಹೋಮ, ರುದ್ರಹೋಮ, ನವಗ್ರಹ ಪೂಜಾ ಕಾರ್ಯಕ್ರಮಗಳು ಹಳೇ ನಗರದ ವೀರಶೈವ ಸೇವಾ ಸಮಿತಿ ನೇತೃತ್ವದಲ್ಲಿ ನಡೆಯಿತು. ಬುಧವಾರ ಬೆಳಗ್ಗೆ 4.30 ರಿಂದ ಈಶ್ವರ, ಗಣಪತಿ, ನಾಗದೇವತೆ, ಹಾಗೂ ಶ್ರೀ ನಂದಿ ದೇವರುಗಳಿಗೆ ರುದ್ರಾಭಿಷೇಕ ಹಾಗು ವಿಶೇಷ ಪೂಜೆ ಮಾಡಲಾಯಿತು.
ತರೀಕೆರೆ ಹಿರೇಮಠದ ಶ್ರೀ ಜಗದೀಶ್ವರ ಶಿವಾಚಾರ್ಯ ಸ್ವಾಮೀಜಿ ಧಾರ್ಮಿಕ ಕಾರ್ಯಕ್ರಮಗಳ ದಿವ್ಯ ಸಾನಿಧ್ಯ ವಹಿಸಿದ್ದರು. ಮಹೇಶ್ವರ ಮೂರ್ತಿ ಶಾಸ್ತ್ರಿ, .ಎಂ.ಬಿ.ಕಿರಣ್ ಶಾಸ್ತ್ರಿ, ಆರ್.ವಿಶ್ವನಾಥಯ್ಯ, . ಶಂಕರಯ್ಯ ಹಿರೇಮಠ್, ಸಚ್ಚಿದಾನಂದ ಹಿರೇಮಠ್, ಎಸ್.ವಾಗೀಶಯ್ಯ, ರಾಚೋಟಯ್ಯ, . ರುದ್ರಸ್ವಾಮಿ ಶಾಸ್ತ್ರಿ ಪೌರೋಹಿತ್ಯ ವಹಿಸಿದ್ದರು.
ವೀರಶೈವ ಸೇವಾ ಸಮಿತಿ, ತಾಲೂಕು ವೀರಶೈವ ಲಿಂಗಾಯತ ಮಹಿಳಾ ಸಮಾಜದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಶ್ರೀ ಬನಶಂಕರಿ ಗಾಯನ ತಂಡದವರು ಭಕ್ತಿಗೀತೆಗಳನ್ನಾಡಿದರು.
ಬೆಳಗಿನ ಜಾವದಿಂದಲೆ ಸಾವಿರಾರು ಭಕ್ತಾದಿಗಳು ಸುಡು ಬಿಸಲು ಲೆಕ್ಕಿಸದೆ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಶಾಸಕ ಬಿ.ಕೆ.ಸಂಗಮೇಶ್ವರ ಕುಟುಂಬ ದೇವರ ದರ್ಶನಕ್ಕೆ ಬರುವ ಭಕ್ತರಿಗೆ ಕಲ್ಲಂಗಡಿ ಹಣ್ಣಿನ ವ್ಯವಸ್ಥೆ ಮಾಡಿದ್ದರು. ಶಾಸಕ ಬಿ.ಕೆ.ಸಂಗಮೇಶ್ವರ್, ನಗರಸಭೆ ಅಧ್ಯಕ್ಷೆ ಗೀತಾರಾಜ್ಕುಮಾರ್ ಸೇರಿದಂತೆ ಹಲವು ಗಣ್ಯರು ದೇವರ ದರ್ಶನ ಪಡೆದು ಪುನೀತರಾದರು.
ಅಪ್ಪರ್ಹುತ್ತಾದಲ್ಲಿರುವ ಶ್ರೀನಂದಿ, ಈಶ್ವರ ಹಾಗೂ ಸಂಕಷ್ಟ ಗಣಪತಿ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ವಿಶೇಷ ಪೂಜಾ ಕಾರ್ಯಗಳು ಜರುಗಿದವು. 32 ಅಡಿ ಎತ್ತರದ ಧ್ಯಾನಾಸಕ್ತ ಶಿವನ ಪ್ರತಿಮೆ ವಿದ್ಯುತ್ ಅಲಂಕಾರದಿಂದ ಕಂಗೊಳಿಸುತ್ತಿತ್ತು. ದರ್ಶನಕ್ಕೆ ಬಂದ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.
ಲೋಯರ್ ಹುತ್ತಾದ ಶಿವ ದೇವಾಲಯದಲ್ಲಿಯೂ ವಿಶೇಷವಾಗಿ ಹೂವಿನ ಅಲಂಕಾರ ಮಾಡಲಾಗಿತ್ತು. ಜನ್ನಾಪುರದ ಶ್ರೀ ಮಲ್ಲೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಸಾವಿರಾರು ಭಕ್ತರು ಸರಧಿ ಸಾಲಿನಲ್ಲಿ ನಿಂತು ಗರ್ಭಗುಡಿ ಪ್ರವೇಶಿಸಿ ಶಿವನ ಲಿಂಗಕ್ಕೆ ಹಾಲಿನ ಅಭಿಷೇಕ ಮಾಡಿ ಪುನೀತರಾದರು.
ನ್ಯೂಟೌನ್ ಶಿವ ಸಾಯಿ ಕೃಪಾಧಾಮದಲ್ಲಿ ರುದ್ರಾಭಿಷೇಕ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಹೊಸಮನೆಯ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಸನ್ನಿಧಾನದಲ್ಲಿಯೂ ಶಿವರಾತ್ರಿಯನ್ನು ವಿಶೇಷ ಪುಜಾ ಕಾರ್ಯಕ್ರಮಗಳೊಂದಿಗೆ ನೆರವೇರಿಸಲಾಯಿತು. ಬಿಜೆಪಿ ಮುಖಂಡ ಜಿ.ಆನಂದಕುಮಾರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಜಿಂಕ್ ಲೈನ್ ಮಲೈಮಹದೇಶ್ವರ ದೇವಸ್ಥಾನದಲ್ಲಿ ಹೂವಿನ ಅಲಂಕಾರವನ್ನು ಅದ್ದೂರಿಯಾಗಿ ಮಾಡಲಾಗಿತ್ತು.
